Chincholi news, Muslim Community, uttar pradesh, mohammad paigambar, Protest in chincholi, kalaburagi news, ಚಿಂಚೋಳಿ, ಮಹಮ್ಮದ್ ಪೈಗಂಬರ್, ಉತ್ತರ ಪ್ರದೇಶ
ಕನ್ನಡಪ್ರಭ ವಾರ್ತೆ ಚಿಂಚೋಳಿ
ಇಸ್ಲಾಂ ಧರ್ಮದ ಸಂಸ್ಥಾಪಕ ಮಹಮ್ಮದ್ ಪೈಗಂಬರ್ ಕುರಿತು ಅವಹೇಳನಕಾರಿ ಮತ್ತು ಮುಸ್ಲಿಂ ಧರ್ಮೀಯರ ಭಾವನೆಗಳಿಗೆ ಧಕ್ಕೆ ತರುವಂತಹ ವಿವಾದಿತ ಮಾತುಗಳನ್ನಾಡಿದ ಉತ್ತರ ಪ್ರದೇಶದ ಗಾಜಿಯಾಬಾದ ಮಠದ ಸ್ವಾಮಿ ನರಸಿಂಹಾನಂದ ಸರಸ್ವತಿಯವರನ್ನು ಬಂಧಿಸಬೇಕೆಂದು ಅಗ್ರಹಿಸಿ ಪಟ್ಟಣದಲ್ಲಿ ವಿವಿಧ ಮುಸ್ಲಿಂ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.
ಪಟ್ಟಣದ ಜಮಾತೆ-ಉಲ್ಮಮೇ-ಇ-ಹಿಂದ್ ಮತ್ತು ತಾಲೂಕು ಮುಸ್ಲಿಂ ಅಭಿವೃದ್ಧಿ ಸಮಿತಿ ಸಂಘಟನೆಗಳು ಶನಿವಾರ ಪಟ್ಟಣದ ಪಟೇಲ್ ಕಾಲೋನಿ ದಾರೂಲ್ ಉಲುಮ ಹುಸೇನಿ ಮದರಸಾ ಚಂದಾಪೂರದಿಂದ ತಾಲೂಕು ಆಡಳಿತವರೆಗೆ ನಾರೇ ತಕದೀರ ಅಲ್ಲಾಹು ಅಕಬರ ಎಂಬ ಘೋಷಣೆ ಕೂಗುತ್ತಾ ಸ್ವಾಮಿ ನರಸಿಂಹಾನಂದ ಸರಸ್ವತಿಯವರನ್ನು ಬಂಧಿಸಿ ಜೈಲಿಗೆ ಕಳಿಸಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕು ತಹಸೀಲ್ ಕಚೇರಿ ಮುಂದೆ ನಡೆದ ಪ್ರತಿಭಟನೆಯಲ್ಲಿ ಮುಸ್ಲಿಂ ಸಮಾಜ ಮುಖಂಡ ಕೆ.ಎಂ.ಬಾರಿ
ಮಾತನಾಡಿ, ದೇಶದಲ್ಲಿ ಎಲ್ಲ ಜಾತಿ ಜನಾಂಗದವರನ್ನು ಒಂದಾಗಿ ಬಾಳುವ ಸಹೋದರತ್ವ ಭಾವನೆಯಿಂದ ಇರುವ ಸಮಾಜದಲ್ಲಿ ಒಡಕನ್ನುಂಟು ಮಾಡುವ ಡೊಂಗಿ ಸ್ವಾಮಿಯನ್ನು ಕೂಡಲೇ ಬಂಧಿಸಬೇಕೆಂದು ಹೇಳಿದರು.
ಪುರಸಭೆ ಸದಸ್ಯ ಅಬ್ದುಲ್ ಬಾಸೀತ ಮಾತನಾಡಿ, ವಿವಾದಿತ ಮಾತನಾಡಿದ ಸ್ವಾಮೀಜಿ ವಿರುದ್ಧ ಪ್ರಕರಣ ದಾಖಲಿಸುವವರೆಗೆ ಪ್ರತಿಭಟನೆಯನ್ನು ಹಿಂದಕ್ಕೆ ಪಡೆದುಕೊಳ್ಳುವುದಿಲ್ಲ. ಎಫ್ಐಆರ್ ದಾಖಲಿಸಿದ ಪ್ರತಿ ನೀಡಬೇಕೆಂದು ಒತ್ತಾಯಿಸಿದರು.
ಮಹ್ಮದ ಹಾಫೀಜ ಅಬ್ದುಲ್ಲ ಹಮೀದ,ಪುರಸಭೆ ಅಧ್ಯಕ್ಷ ಆನಂದ ಟೈಗರ, ಹಣಮಂತ ಪೂಜಾರಿ, ಲಕ್ಷ್ಮಣ ಆವಂಟಿ, ಪುರಸಭೆ ಸದಸ್ಯ ಅನವರ ಖತೀಬ ಸ್ವಾಮೀಜಿಯ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದರು.
ಪುರಸಭೆ ಸದಸ್ಯ ಅನವರ ಖತೀಬಸಾವ ಮನವಿ ಪತ್ರವನ್ನು ವಿವರಿಸಿ ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ಅವರಿಗೆ ಸಲ್ಲಿಸಿದರು. ಮನವಿ ಸ್ವೀಕರಿಸಿದ ತಹಸೀಲ್ದಾರರು ಸ್ವಾಮೀಜಿಗಳನ್ನು ಈಗಾಗಲೇ ಬಂಧಿಸಲಾಗಿದೆ. ಅಲ್ಲದೇ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂಬ ಮಾಹಿತಿ ನೀಡಿದ ನಂತರ ಪ್ರತಿಭಟನೆಯನ್ನು ಹಿಂದಕ್ಕೆ ಪಡೆದುಕೊಳ್ಳಲಾಯಿತು. ಚಿಂಚೋಳಿ ಪೋಲಿಸರು ವ್ಯಾಪಕ ಬಿಗಿಭದ್ರತೆಯನ್ನು ಮಾಡಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.