- ಮರಬನಹಳ್ಳಿಯಲ್ಲಿ ಜನತಾ ಸರ್ಕಾರಿ ಕಾಲೇಜು ಎನ್ಎಸ್ಎಸ್ ಶಿಬಿರ ಸಮಾರೋಪ- - - ಕನ್ನಡಪ್ರಭ ವಾರ್ತೆ, ದಾವಣಗೆರೆ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದಲ್ಲಿ ಶಿಬಿರಾರ್ಥಿಗಳು ಭಾಗವಹಿಸುವ ಮೂಲಕ ಗ್ರಾಮೀಣ ಪ್ರದೇಶದ ಜನರ ಜೀವನ ಕ್ರಮ ಅರಿಯುವುದರೊಂದಿಗೆ ಶಿಸ್ತು, ಭಾತೃತ್ವ, ಸಂಯಮ, ಸಮಯಪ್ರಜ್ಞೆ ಹಾಗೂ ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು ಎಂದು ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಹೇಳಿದರು.
ವಿಜ್ಞಾನ ಯುಗದಲ್ಲಿ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ, ಬದುಕಿನ ಸಾಮರಸ್ಯ ಬೆಳೆಯಲು ಎನ್ಎಸ್ಎಸ್ ಶಿಬಿರ ಯುವಕರಿಗೆ ಪೂರಕವಾಗಿದೆ. ರಾಷ್ಟ್ರಪ್ರೇಮ, ದೇಶಭಕ್ತಿ ಬೆಳೆಯುತ್ತದೆ. ವೈಜ್ಞಾನಿಕ ಚಿಂತನೆಗಳ ಕುರಿತು ಚರ್ಚಿಸಬಹುದು. ಯುವಜನತೆ ದಾರಿ ತಪ್ಪದಂತೆ ಮಾರ್ಗದರ್ಶನ ನೀಡುತ್ತದೆ. ವಿದ್ಯಾರ್ಥಿಗಳು ದೇಶದ ಆರ್ಥಿಕ ಭದ್ರತೆ ಕುರಿತು ವಿಶ್ಲೇಷಣೆ ಮಾಡುವ ಎಲ್ಲ ಅವಕಾಶಗಳನ್ನು ಈ ವಿಶೇಷ ಶಿಬಿರ ಕಲ್ಪಿಸುತ್ತದೆ. ಇದನ್ನು ಯುವಜನತೆ ಮೈಗೂಡಿಸಿಕೊಂಡರೆ ದೇಶಕ್ಕೆ ತಮ್ಮದೇ ಆದ ಕೊಡುಗೆ ನೀಡಲು ಸಹಕಾರಿ ಆಗುತ್ತದೆ ಎಂದು ಸಲಹೆ ನೀಡಿದರು.
ನಮ್ಮ ಜೀವನದಲ್ಲಿ ಶಿಕ್ಷಣ ಮಾತ್ರ ಮುಖ್ಯವಲ್ಲ. ಶಿಕ್ಷಣದೊಂದಿಗೆ ಬದುಕಿಗೆ ಪೂರಕವಾದ ಅಂಶಗಳು ಬಹುಮುಖ್ಯ. ಎನ್ಎಸ್ಎಸ್ ಶಿಬಿರದಿಂದ ಬದುಕಿಗೆ ಪೂರಕವಾದ ಶಿಕ್ಷಣ ಪಡೆಯಬಹುದು ಎಂದರು.ಜನತಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಎಂ.ಆರ್. ಲೋಕೇಶ ಅಧ್ಯಕ್ಷತೆ ವಹಿಸಿದ್ದರು. ಬಸವಾಪಟ್ಟಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ. ನಾಗರಾಜ, ಗ್ರಾಮದ ಮುಖಂಡ ಶಂಕರ ಪಾಟೀಲ್, ಪ್ರಭಾಕರ್, ರಮೇಶ, ಗ್ರಾಪಂ ಸದಸ್ಯರಾದ ರವಿಕುಮಾರ, ಹನುಮಂತಪ್ಪ, ರೇವಣ್ಣ, ಎಸ್ಡಿಎಂಸಿ ಅಧ್ಯಕ್ಷ ದುರುಗೇಶ್, ಕೆಎಂಎಫ್ ಸದಸ್ಯ ಕಂಚುಗಾರನಹಳ್ಳಿ ಬಸಣ್ಣ, ಶಿಬಿರಾಧಿಕಾರಿ ಎಂ.ಡಿ. ಬಸವರಾಜ, ಗ್ರಾಮಸ್ಥರು ಭಾಗವಹಿಸಿದ್ದರು.
ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ಮರಬನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಎನ್ಎಸ್ಎಸ್ ವಾರ್ಷಿಕ ವಿಶೇಷ ಶಿಬಿರದಲ್ಲಿ ಶಾಸಕ ಕೆ.ಎಸ್.ಬಸವಂತಪ್ಪ ಭಾಗವಹಿಸಿದ್ದರು.