ಕನ್ನಡಪ್ರಭ ವಾರ್ತೆ ಸುತ್ತೂರು
ಸುತ್ತೂರಿನ ಐಸಿಎಆರ್- ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದಿಂದ ಹಮ್ಮಿಕೊಂಡಿದ್ದ ವಿಕಸಿತ ಕೃಷಿ ಸಂಕಲ್ಪ ಅಭಿಯಾನದ ಕೊನೆಯ ದಿನದಂದು ಗುರುವಾರ ಕೆಂಚನಹಳ್ಳಿಯ ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ ನ ತರಬೇತಿ ಕೇಂದ್ರದಲ್ಲಿ ಸಂಪನ್ನಗೊಂಡಿತು.ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರಾದ ಡಾ. ಬಿ.ಎನ್. ಜ್ಞಾನೇಶ್ ಮಾತನಾಡಿ, ವಿಕಸಿತ ಕೃಷಿ ಸಂಕಲ್ಪ ಅಭಿಯಾನದಿಂದ ರೈತರು ಸಾಕಷ್ಟು ಮಾಹಿತಿ ಪಡೆದಿರುತ್ತಾರೆ. ಈ ಅಭಿಯಾನ ಇವತ್ತಿಗೆ ಕೊನೆಯಾಗುವುದಿಲ್ಲ. ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರಕ್ಕೆ ಭೇಟಿ ನೀಡಿ ಕೃಷಿ ತಾಂತ್ರಿಕ ಮಾಹಿತಿ ಹಾಗೂ ಸಲಹೆಗಳನ್ನು ವಿಷಯ ತಜ್ಞರುಗಳಿಂದ ಪಡೆಯಬಹುದಾಗಿದೆ ಎಂದು ತಿಳಿಸಿದರು.
ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ತಜ್ಞ ಡಾ.ಜಿ.ಎಂ. ವಿನಯ್ ಅವರು ಮುಂಗಾರಿನಲ್ಲಿ ರೈತರು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳನ್ನು ರೈತರಿಗೆ ತಿಳಿಸಿದರು. ರೈತರು ತಮ್ಮ ಜಮೀನಿನ ಮಣ್ಣಿನ ಪರೀಕ್ಷೆಯ ಅಗತ್ಯತೆಯನ್ನು ತಿಳಿಸಿದರು. ಮಣ್ಣು ಮಾದರಿ ತೆಗೆಯುವ ಪದ್ಧತಿ ಹಾಗೂ ಅದರ ಉಪಯೋಗದ ಕುರಿತು ನಂತರ ಮಣ್ಣು ಪರೀಕ್ಷೆಯಾಧರಿತ ಕೃಷಿ ಬೆಳೆಗಳ ಆಯ್ಕೆ ಹಾಗೂ ಪೋಷಕಾಂಶಗಳ ನಿರ್ವಹಣೆ ಕುರಿತು ರೈತರಿಗೆ ಮಾಹಿತಿ ನೀಡಿದರು.ಮುಂಗಾರಿನಲ್ಲಿ ಭೂಮಿ ಸಿದ್ಧತೆ ಮಾಡಿಕೊಂಡು ಹೆಚ್ಚಾಗಿ ಸಾವಯವ ಗೊಬ್ಬರಗಳ್ಳಾದ ಹಸಿರೆಲೆ ಗೊಬ್ಬರಗಳ ಬಳಕೆ, ತಿಪ್ಪೆ ಗೊಬ್ಬರ, ಎರೆ ಗೊಬ್ಬರ ಗಳ ಬಳಕೆ, ಬೇವಿನ ಹಿಂಡಿ ಬಳಕೆ, ಜೊತೆಗೆ ಜೈವಿಕ ಗೊಬ್ಬರಗಳ ಬಳಕೆ, ಏರು ಮಡಿ ಮಾಡಿ ನಾಟಿ ಮಾಡುವುದು, ತಳಿಗಳ ಆಯ್ಕೆ, ಪೋಷಕಾಂಶಗಳ ನಿರ್ವಹಣೆ ಕುರಿತು ರೈತರಿಗೆ ಮಾಹಿತಿ ನೀಡಿದರು, ಮುಖ್ಯವಾಗಿ ಪೋಷಕಾಂಶಗಳನ್ನು ಸಿಂಪಡಣೆ ಮೂಲಕ ಲಘು ಪೋಷಕಾಂಶಗಳ ಮಿಶ್ರಣ ಜೊತೆ ಸಿಂಪರಣೆ ಮಾಡುವುದರಿಂದ ಬೆಳೆಗಳಲ್ಲಿ ಉತ್ತಮ ಇಳುವರಿ ಪಡೆಯಬಹುದು ಎಂದು ರೈತರಿಗೆ ತಿಳಿಸಿದರು.
ಕೃಷಿ ವಿಜ್ಞಾನ ಕೇಂದ್ರದ ಸಸ್ಯ ಸಂರಕ್ಷಣೆ ತಜ್ಞ ಡಾ.ವೈ.ಪಿ. ಪ್ರಸಾದ್,ಡಾ. ಬಸವರಾಜ್ ಸಜ್ಜಣ್ಣ, ಸರಗೂರಿನ ಕೃಷಿ ಅಧಿಕಾರಿ ಜಗನಾಥ ರೈತರಿಗೆ ಬೆಳೆಗಳ ಬಗ್ಗೆ ಮಾಹಿತಿ ನೀಡಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ನ ಸಾಮಾಜಿಕ ಆರ್ಥಿಕ ಸಬಲೀಕರಣದ ಕಾರ್ಯಕ್ರಮದ ನಿರ್ದೇಶಕ ಡಾ. ಡೆನ್ನಿಸ್ ಚೌವ್ಹಾಣ್ ಮಾತನಾಡಿ, ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ನಮ್ಮ ಹಳ್ಳಿಗಳಿಗೆ ಬಂದು ವಿಶೇಷವಾಗಿ ನಮ್ಮ ತರಬೇತಿ ಕೇಂದ್ರಕ್ಕೆ ಬಂದು ಕೃಷಿಗೆ ಸಂಬಂಧಿಸಿದ ಮಾಹಿತಿ ನೀಡುತ್ತಿರುವುದು ಹಾಗೂ ಈ ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಮಾಡುತ್ತಿರುವುದಕ್ಕೆ ಶ್ಲಾಘಿಸಿದರು.ಕೃಷಿ ವಿಜ್ಞಾನ ಕೇಂದ್ರದ ಬೇಸಾಯ ಶಾಸ್ತ್ರ ವಿಜ್ಞಾನಿ ಡಾ. ಶಾಮರಾಜ್, ಬೆಂಗಳೂರಿನ ಪಶು ವೈದ್ಯಕೀಯ ಸಂಶೋಧನೆ ಸಂಸ್ಥೆ ಡಾ. ಶಿವಸ್ವಾಮಿ , ವಿಜ್ಞಾನಿ ಡಾ. ಶಬರಿನಾಥ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ನ ಪದಾಧಿಕಾರಿಗಳು, ಗ್ರಾಮದ ರೈತ ಮುಖಂಡರು, ಪ್ರಗತಿಪರ ರೈತರು ಭಾಗವಹಿಸಿದ್ದರು.