ಸೈನಿಕನಾಗಿ ದೇಶ ರಕ್ಷಣೆಗೆ ಜೀವನ ಸಮರ್ಪಿಸಿಕೊಳ್ಳುವುದು ಪುಣ್ಯದ ಕಾರ್ಯ. ಯೋಧ ರಾಮಪ್ಪ ಅವರಿಂದ ಗ್ರಾಮದ ಕೀರ್ತಿ ಹೆಚ್ಚಿದೆ ಎಂದು ಎಸ್ಡಿಎಂಸಿ ಅಧ್ಯಕ್ಷ ಸಿದ್ದಪ್ಪ ಒಡೆಯರ ಹೇಳಿದರು.
ಕನ್ನಡಪ್ರಭ ವಾರ್ತೆ ಲೋಕಾಪುರ
ಸೈನಿಕನಾಗಿ ದೇಶ ರಕ್ಷಣೆಗೆ ಜೀವನ ಸಮರ್ಪಿಸಿಕೊಳ್ಳುವುದು ಪುಣ್ಯದ ಕಾರ್ಯ. ಯೋಧ ರಾಮಪ್ಪ ಅವರಿಂದ ಗ್ರಾಮದ ಕೀರ್ತಿ ಹೆಚ್ಚಿದೆ ಎಂದು ಎಸ್ಡಿಎಂಸಿ ಅಧ್ಯಕ್ಷ ಸಿದ್ದಪ್ಪ ಒಡೆಯರ ಹೇಳಿದರು. ಸಮೀಪದ ಬಿದರಿ ಗ್ರಾಮದ ಜನತಾ ಪ್ಲಾಟ್ ಸ.ಕಿ.ಪ್ರಾ ಶಾಲೆಯ ಎಸ್ಡಿಎಂಸಿ ಸದಸ್ಯರು ಹಾಗೂ ಶಾಲಾ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ೨೨ ವರ್ಷ ಕಾಲ ಭಾರತೀಯ ಸೈನ್ಯದಲ್ಲಿ ಸೇವೆ ಸಲ್ಲಿಸಿದ ರಾಮಪ್ಪ ಸತ್ಯಪ್ಪ ಕೋರಡ್ಡಿ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡು ಮಾತನಾಡಿದ ಅವರು, ಯೋಧರು ದೇಶದ ಸಂಪತ್ತು. ಅವರಲ್ಲಿರುವ ದೇಶಾಭಿಮಾನ ಭದ್ರತೆಗೆ ಸಾಕ್ಷಿಯಾಗಿದೆ. ದೇಶದ ರಕ್ಷಣಿಗಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡುವ ಅವರ ತ್ಯಾಗ ಮನೋಭಾವ ಎಂದಿಗೂ ಮರೆಯಲಾಗದು ಎಂದರು. ನಿವೃತ್ತ ಯೋಧ ರಾಮಪ್ಪ ಕೋರಡ್ಡಿ ಸನ್ಮಾನ ಸ್ವೀಕರಿಸಿ ಮಾತನಾಡಿ, ತಮ್ಮ ಶಿಕ್ಷಕರನ್ನು ಸ್ಮರಿಸಿದರು. ದೇಶ ಕಾಯುವ ಯೋಗ ನನಗೂ ಸಿಕ್ಕಿದ್ದು ಭಾಗ್ಯ. ವೈರಿ ಪಡೆಯೊಂದಿಗೆ ಹೋರಾಡಿ ಪ್ರಾಣಾಪಾಯದಿಂದ ಪಾರಾಗಿದ್ದೇನೆ. ಪಾಲಕರು ಮಕ್ಕಳನ್ನು ಸೈನಿಕರಾಗಲು ಉತ್ತೇಜಿಸಬೇಕು ಎಂದರು. ಯೋಧ ಗ್ರಾಮಕ್ಕೆ ಬರುತ್ತಿದ್ದಂತೆ ಗ್ರಾಮದ ಗಣ್ಯರು ಯುವಕರು ಆರತಿ ಬೆಳಗಿ ಗ್ರಾಮದ ಶಾಲೆಗೆ ಕರೆದುಕೊಂಡು ಬಂದು ಸನ್ಮಾನಿಸಲಾಯಿತು. ಎಸ್ಡಿಎಂಸಿ ಉಪಾಧ್ಯಕ್ಷ ಲಕ್ಷ್ಮೀ ಹರಿಜನ, ಮುಖ್ಯಗುರು ಆರ್.ಎಂ.ಜೀರಗಾಳ, ಶಿಕ್ಷಕರಾದ ಸಂತೋಷ ಮೇಳ್ಲಿಗೇರಿ ಈರಯ್ಯ ನಂದೆಗೋಳ, ಇಂದ್ರಾ ಗೌಡರ, ಕೃಷ್ಣವೇಣಿ ಬುಳ್ಳೋಜಿ, ರೇಣುಕ, ಬಾರಕಿ, ಯಲ್ಲವ್ವ ವಿದ್ಯಾರ್ಥಿಗಳು, ಗ್ರಾಮಸ್ಥರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.