ಅಣ್ಣಿಗೇರಿ: ಪುಟ್ಟ ಕೈಗಳಿಂದ ಗಣೇಶನ ಮೂರ್ತಿ ಪ್ರತಿಷ್ಠಾಪಿಸಿ, ಏಳು ದಿನಗಳ ಕಾಲ ಭಕ್ತಿಯಿಂದ ಪೂಜಿಸಿ, ಕೊನೆಗೆ ಸುಮಾರು 200 ಮಂದಿಗೆ ಅನ್ನ ಸಂತರ್ಪಣೆ ಮಾಡುವ ಮೂಲಕ ಅಣ್ಣಿಗೇರಿಯ ಬಾಲಕರ ತಂಡ ಗಮನ ಸೆಳೆಯಿತು.
ಪ್ರತಿದಿನ ಬೆಳಗ್ಗೆ-ಸಂಜೆ ಒಟ್ಟಾಗಿ ಸೇರಿ ಆರತಿ, ಭಕ್ತಿಗೀತೆ ಹಾಗೂ ಪೂಜೆ ನೆರವೇರಿಸುತ್ತಿದ್ದ ಬಾಲಕರ ಭಕ್ತಿ ಕಂಡು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು. ಸ್ಥಳಕ್ಕೆ ಭೇಟಿ ನೀಡಿದ ಹಲವರು ಮಕ್ಕಳ ಪರಿಶ್ರಮವನ್ನು ಶ್ಲಾಘಿಸಿ ಗಣೇಶನ ಹುಂಡಿಗೆ ಕಾಣಿಕೆ ಹಾಕಿ ಪ್ರೋತ್ಸಾಹಿಸಿದರು.
ಭಾವಪೂರ್ಣ ಬೀಳ್ಕೊಡುಗೆ: ಏಳನೇ ದಿನವಾದ ಭಾನುವಾರ ಬೆಳಗ್ಗಿನಿಂದಲೇ ವಿಸರ್ಜನೆಗೆ ಸಿದ್ಧತೆ ಆರಂಭವಾಗಿತ್ತು. ಕಳೆದ ಆರು ದಿನಗಳ ಸಂಭ್ರಮದ ಬಳಿಕ ಗಜಮುಖನಿಗೆ ಬೀಳ್ಕೊಡುವ ಸಂದರ್ಭ ಬಾಲಕರಲ್ಲಿ ಬೇಸರವೂ ಕಾಣಿಸಿತು. ಭಕ್ತಿಗೀತೆ, ಚಪ್ಪಾಳೆ ಹಾಗೂ ‘ಗಣಪತಿ ಬಪ್ಪಾ, ಮುಂದಿನ ವರ್ಷ ಬೇಗ ಬಾ’ ಘೋಷಣೆಗಳೊಂದಿಗೆ ಮೆರವಣಿಗೆ ನಡೆಸಿ ಗಣೇಶ ಮೂರ್ತಿಯನ್ನು ವಿಸರ್ಜಿಸಲಾಯಿತು.ವಿಸರ್ಜನೆಯ ಬಳಿಕ ಬಾಲಕರು ಸುಮಾರು 200 ಮಂದಿಗೆ ಶಿರಾ, ಫಲಾವ್ ಸೇರಿದಂತೆ ಅನ್ನಸಂತರ್ಪಣೆ ಏರ್ಪಡಿಸಿದರು. ಅಡುಗೆ ಸಿದ್ಧತೆಯಿಂದ ಹಿಡಿದು ತಟ್ಟೆ ಜೋಡಿಸುವುದು ಹಾಗೂ ಊಟ ಬಡಿಸುವ ವರೆಗೂ ಹಿರಿಯರೊಂದಿಗೆ ಮಕ್ಕಳು ಕೈಜೋಡಿಸಿದರು. ನಗುಮುಖದಿಂದ ಊಟ ಬಡಿಸಿದ ಪುಟಾಣಿಗಳ ಸೇವಾಭಾವನೆ ನೆರೆದವರ ಮೆಚ್ಚುಗೆಗೆ ಪಾತ್ರವಾಯಿತು.
ಮಿಹಿರ್ ಹೂಗಾರ್, ವಿಕಾಸ ಕಡೇಮನಿ, ಮಾನ್ವಿತಾ ಕಪ್ಪತ್ತನವರ, ವಿಶ್ವ ಹಳ್ಳಿ, ವಿನಾಯಕ ಗುಡಿಸಲಮನಿ, ಶ್ರೀನಿಧಿ ಭೋವಿ ಹಾಗೂ ಸಮರ್ಥ ಚವಡಿ ಉತ್ಸವದ ಯಶಸ್ಸಿಗೆ ಶ್ರಮಿಸಿದರು.