ಅಗರದಲ್ಲಿ ಧರ್ತಿ ಆಬಾ ಜನಭಾಗಿಧಾರಿ ಅಭಿಯಾನ

KannadaprabhaNewsNetwork | Published : Jun 20, 2025 12:34 AM

ಯಳಂದೂರು ತಾಲೂಕಿನ ಅಗರ ಗ್ರಾಮದ ವಾಲ್ಮೀಕಿ ಸಮುದಾಯ ಭವನದಲ್ಲಿ ಗುರುವಾರ ಧರ್ತಿ ಆಬಾ ಜನಭಾಗಿಧಾರಿ ಅಭಿಯಾನದ ಸಂಪೂರ್ಣ ಸವಲತ್ತುಗಳ ಜಾಗೃತಿ ಶಿಬಿರ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಯಳಂದೂರು

ತಾಲೂಕಿನ ಅಗರ ಗ್ರಾಮದ ವಾಲ್ಮೀಕಿ ಸಮುದಾಯ ಭವನದಲ್ಲಿ ಗುರುವಾರ ಜಿಲ್ಲಾ ಬುಡಕಟ್ಟು ಹಾಗೂ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪರಿಶಿಷ್ಟ ಪಂಗಡದ ಸಮುದಾಯದವರಿಗೆ ಧರ್ತಿ ಆಬಾ ಜನಭಾಗಿಧಾರಿ ಅಭಿಯಾನದ ಸಂಪೂರ್ಣ ಸವಲತ್ತುಗಳ ಜಾಗೃತಿ ಶಿಬಿರ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಕೇಶವಮೂರ್ತಿ ಮಾತನಾಡಿ, ನಮ್ಮ ತಾಲೂಕಿನಲ್ಲಿ ಬಿಳಿಗಿರಿ ರಂಗನಬೆಟ್ಟ, ಅಗರ ಹಾಗೂ ಕಂದಹಳ್ಳಿ ಗ್ರಾಮಗಳಲ್ಲಿ ಈ ಕಾರ್ಯಕ್ರಮದ ಆಯೋಜನೆ ಮಾಡಲಾಗಿದೆ. ಪರಿಶಿಷ್ಟ ಪಂಗಡ ಅಥವಾ ಬುಡಕಟ್ಟು ಜನಾಂಗದವರು ಶೇ.೫೦ಕ್ಕಿಂತಲೂ ಹೆಚ್ಚು ವಾಸಿಸುವ ಗ್ರಾಮಗಳನ್ನು ಇದಕ್ಕಾಗಿ ಆಯ್ಕೆ ಮಾಡಲಾಗಿದೆ.

ಇಲ್ಲಿ ಗ್ರಾಮೀಣ ಭಾಗದಲ್ಲಿ ಆದಾಯ, ಜಾತಿ, ವೃದ್ಧಾಪ್ಯ ವೇತನ, ರೇಷನ್ ಕಾರ್ಡ್, ಆಧಾರ್ ಕಾರ್ಡ್, ವಿಶೇಷ ಚೇತನರಿಗೆ ನೀಡುವ ಸೌಲಭ್ಯಗಳು ಸೇರಿದಂತೆ ಒಟ್ಟು ೨೨ ಸೇವೆಗಳನ್ನು ಒಂದೇ ಸೂರಿನಡಿ ಸುಲಭವಾಗಿ ಲಭಿಸಲಿ ಎಂದು ಮಾಡುತ್ತಿರುವ ಒಂದು ಕಾರ್ಯಕ್ರಮವಾಗಿದೆ. ಅಗರ ಗ್ರಾಮದಲ್ಲಿ ೨ ದಿನಗಳ ಕಾಲ ಈ ಅಭಿಯಾನ ನಡೆಯಲಿದೆ. ನಂತರ ಕಂದಹಳ್ಳಿ ಹಾಗೂ ಬಿಳಿಗಿರಿರಂಗನಬೆಟ್ಟದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಮಾಹಿತಿ ನೀಡಿದರು.ಬುಡಕಟ್ಟು ಇಲಾಖೆಯ ಅಧಿಕಾರಿ ರಾಜೇಶ್ ಮಾತನಾಡಿ, ಇದೊಂದು ಕೇಂದ್ರ ಸರ್ಕಾರ ಯೋಜನೆಯಾಗಿದ್ದು ಬುಡಕಟ್ಟು, ಪರಿಶಿಷ್ಟ ಪಂಗಡದ ಜನರು ಶೇ. ೫೦ಕ್ಕಿಂತ ಹೆಚ್ಚು ವಾಸಿಸುವ ಗ್ರಾಮಗಳಲ್ಲಿ ಸರ್ಕಾರದ ೨೨ ಸೇವೆಗಳನ್ನು ಇವರಿಗೆ ಸ್ಥಳದಲ್ಲಿ ನೀಡುವ, ಈ ಸೇವೆಗಳಲ್ಲಿ ಇರುವ ಲೋಪದೋಷಗಳನ್ನು ಸರಿಪಡಿಸಿ ಕೊಡುವ ಒಂದು ವಿಶಿಷ್ಟ ಕಾರ್ಯಕ್ರಮವಾಗಿದೆ. ನಮ್ಮ ಜಿಲ್ಲೆಯಲ್ಲಿ ಒಟ್ಟು ೧೧ ಗ್ರಾಮ ಪಂಚಾಯಿತಿಗಳು ಇದಕ್ಕೆ ಆಯ್ಕೆಯಾಗಿದೆ ಎಂದರು.ಈ ಸಂದರ್ಭದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಾಜರಿದ್ದರು. ಆರೋಗ್ಯ ಇಲಾಖೆಯ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಗ್ರಾಪಂ ಅಧ್ಯಕ್ಷ ವೆಂಕಟಾಚಲ ಕೃಷಿ ಅಧಿಕಾರಿ ವೆಂಕಟರಂಗಶೆಟ್ಟಿ, ಆಹಾರ ನಿರೀಕ್ಷಕ ಬಿಸಲಯ್ಯ, ವೈದ್ಯ ಡಾ. ಅರುಣ್‌ಕುಮಾರ್, ಪಿಡಿಒ ಮಂಜುನಾಥ್ ಸೇರಿದಂತೆ ಅನೇಕರು ಇದ್ದರು.