ಪರಶಿವಮೂರ್ತಿ ಮಾಟಲದಿನ್ನಿ ಕುಷ್ಟಗಿ
ಪಟ್ಟಣ ಸೇರಿದಂತೆ ತಾಲೂಕಿನ ದೋಟಿಹಾಳ, ಹನುಮಸಾಗರದ ವಿವಿಧ ಪೆಟ್ರೋಲ್ ಬಂಕ್ಗಳಲ್ಲಿ ಡೀಸೆಲ್ ಕೊರತೆ ಉಂಟಾಗಿದ್ದು, ಅಗತ್ಯಕ್ಕೆ ತಕ್ಕಷ್ಟು ಡೀಸೆಲ್ ದೊರೆಯದೇ ರೈತರು ಹಾಗೂ ವಾಹನ ಸವಾರರು ಪರದಾಡುತ್ತಿದ್ದು, ರೈತರು ಕ್ಯಾನ್ಗಳನ್ನಿಟ್ಟುಕೊಂಡು ಗಂಟೆಗಟ್ಟಲೇ ಪೆಟ್ರೋಲ್ ಬಂಕ್ಗಳಲ್ಲಿ ಕಾಯ್ದು ಸುಸ್ತಾಗುತ್ತಿದ್ದಾರೆ. ಕೆಲವೊಂದು ಪೆಟ್ರೋಲ್ ಬಂಕ್ಗಳಲ್ಲಿ ಮಾತ್ರ ಡೀಸೆಲ್ ಲಭ್ಯವಿದ್ದು, ಅದನ್ನು ಪಡೆದುಕೊಳ್ಳಲು ರೈತರು, ವಾಹನ ಸವಾರರು ಕ್ಯಾನ್ ಸರದಿ ಸಾಲಾಗಿ ಇಟ್ಟು ಕಾಯುವ ಪರಿಸ್ಥಿತಿ ಇದ್ದು, ಡಿಸೇಲ್ ಮಾತ್ರ ಸಾಕಷ್ಟು ಪ್ರಮಾಣದಲ್ಲಿ ದೊರೆಯುತ್ತಿಲ್ಲ ಇದೀಗ ಮುಂಗಾರು ಹಂಗಾಮು ಆರಂಭವಾಗಿದ್ದು, ರೈತರು ಬಿತ್ತನೆಗಾಗಿ ತಮ್ಮ ಜಮೀನನ್ನು ಹದಗೊಳಿಸಿದ್ದು ಇನ್ನೇನು ಬಿತ್ತನೆ ಮಾಡುವಷ್ಟರಲ್ಲಿ ಟ್ರ್ಯಾಕ್ಟರ್ ಮೂಲಕ ಬಿತ್ತನೆ ಮಾಡಲು ಡೀಸೆಲ್ ತಕ್ಷಣವೇ ಸಿಗುತ್ತಿಲ್ಲವಾಗಿದೆ.
ಬಹುತೇಕ ರೈತರು ಜಮೀನು ಉಳುಮೆ, ಒಕ್ಕಲು ಮೊದಲಾದವುಗಳಿಗೆ ಟ್ರ್ಯಾಕ್ಟರ್ ಅವಲಂಬಿಸಿದ್ದಾರೆ. ಅಗತ್ಯಕ್ಕೆ ತಕ್ಕಷ್ಟು ಇಂಧನ ದೊರೆಯದೆ ರೈತರು ಪರದಾಡುತ್ತಿದ್ದಾರೆ. ಆದರೆ ಟ್ರ್ಯಾಕ್ಟರ್ ಗಳಿಗೆ ಡೀಸೆಲ್ ಇಲ್ಲದೇ ರೈತರು ಬಂಕ್ ಗಳಲ್ಲಿ ಕಾಯ್ದು ಸುಸ್ತಾಗುತ್ತಿದ್ದಾರೆ. ಸರ್ಕಾರ ಮತ್ತು ಸಂಬಂಧಿಸಿದ ಅಧಿಕಾರಿಗಳು ರೈತರ ಸಮಸ್ಯೆಗೆ ಸ್ಪಂದಿಸಿ ಡೀಸೆಲ್ ಸಮಸ್ಯೆ ನಿವಾರಣೆ ಮಾಡಿ ಸಮರ್ಪಕ ಇಂಧನ ಪೂರೈಕೆ ಮಾಡಬೇಕೆಂದು ರೈತರು ತಮ್ಮ ಅಳಲು ತೋಡಿಕೊಂಡಿದ್ದು, ತಾಲೂಕು ಮತ್ತು ಜಿಲ್ಲಾಡಳಿತ ಡೀಸೆಲ್ ಸಮಸ್ಯೆ ಬಗಹರಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.ನೂರಕ್ಕೂ ಅಧಿಕ ಕ್ಯಾನ್ಗಳು: ಈ ಹಿಂದೆ ನೀರಿನ ಟ್ಯಾಂಕರ್ ಅಥವಾ ನಲ್ಲಿಗಳ ಮುಂದೆ ನೀರಿಗಾಗಿ ನೂರಾರು ಕೊಡಗಳನ್ನು ಸಾಲುಗಟ್ಟಿ ಇಡುವುದನ್ನು ಕಾಣುತ್ತಿದ್ದೆವು, ಆದರೆ ಈಗ ಡೀಸೆಲ್ ಕೊರತೆ ಉಂಟಾಗಿ ರೈತರು ಹಾಗೂ ವಾಹನ ಸವಾರರು ಕ್ಯಾನಗಳನ್ನು ಸರದಿ ಸಾಲಿನಲ್ಲಿಟ್ಟು ಡೀಸೆಲ್ ಖರೀದಿ ಮಾಡುತ್ತಿರುವದನ್ನು ಕಾಣಬಹುದಾಗಿದೆ. ಕುಷ್ಟಗಿ ಹಾಗೂ ದೋಟಿಹಾಳ ವಿವಿಧ ಗ್ರಾಮಗಳಲ್ಲಿ ಇರುವ ಪೆಟ್ರೋಲ್ ಬಂಕಗಳಲ್ಲಿ ಎರಡು ನೂರಕ್ಕೂ ಅಧಿಕ ಕ್ಯಾನ್ಗಳನ್ನು ಸರದಿ ಸಾಲಿನಲ್ಲಿಟ್ಟುಕೊಂಡು ಗಂಟೆಗಟ್ಟಲೆ ಕಾಯ್ದು ಡಿಸೇಲ್ ಖರೀದಿ ಮಾಡುತ್ತಿದ್ದಾರೆ.