ಕಡೂರು ಪಟ್ಟಣದಲ್ಲಿ ಮೆಟ್ರಿಕ್ ಪೂರ್ವ್ ವಿದ್ಯಾರ್ಥಿ ನಿಲಯ ಉದ್ಘಾಟನೆ
ಜಿಲ್ಲಾ ಕೇಂದ್ರವಾಗುವ ಎಲ್ಲ ಅರ್ಹತೆ ಕಡೂರು ಪಟ್ಟಣಕ್ಕಿದ್ದರೂ ಹೆಚ್ಚಿನ ಪ್ರಮಾಣದ ಸರ್ಕಾರಿ ಸವಲತ್ತುಗಳು ಮಲೆನಾಡಿನ ಚಿಕ್ಕಮಗಳೂರು ಜಿಲ್ಲಾ ಕೇಂದ್ರಕ್ಕೆ ನೀಡುವ ಕಾರಣ ಕಡೂರು ತಾಲೂಕಿನ ಒಟ್ಟಾರೆ ಅಭಿವೃದ್ಧಿ ಕಾರ್ಯಗಳಿಗೆ ಮುಳುವಾಗಿದೆ ಎಂದು ಶಾಸಕ ಕೆ.ಎಸ್. ಆನಂದ್ ಗಂಭೀರ ಆರೋಪ ಮಾಡಿದರು. ಸರ್ಕಾರಿ ಪಾಲಿಟೆಕ್ನಿಕ್ ಆವರಣದಲ್ಲಿ ಬುಧವಾರ ಸ್ಥಳಾಂತರಗೊಂಡ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯದ ಉದ್ಘಾಟನೆ ನೆರವೇರಿಸಿ ಮಾತನಾಡಿ, ಹೆಸರಿಗೆ ಮಲೆನಾಡು ಜಿಲ್ಲೆಗೆ ಸೇರಿದ ಬಯಲು ಪ್ರದೇಶದ ಕಡೂರಿನಲ್ಲಿ ಶಿಕ್ಷಣ, ಕೈಗಾರಿಕೆ , ತಾಂತ್ರಿಕ ಶಿಕ್ಷಣ ಎಲ್ಲದಕ್ಕೂ ವಿಫುಲ ಅವಕಾಶವಿದೆ. ಆದರೂ ಜಿಲ್ಲೆಗೆ ಇಂಜಿನಿಯರಿಂಗ್ ಕಾಲೇಜು, ಮೆಡಿಕಲ್ ಕಾಲೇಜು, ಹಾಲು ಒಕ್ಕೂಟ ಅಥವಾ ಇನ್ಯಾವುದೇ ಮಹತ್ವದ ಕೊಡುಗೆ ಮಂಜೂರಾದರೆ ಎಲ್ಲವೂ ಚಿಕ್ಕಮಗಳೂರಿನಲ್ಲೇ ಆಗಬೇಕೆನ್ನುವ ಸ್ವಾರ್ಥ ಧೋರಣೆಯಿಂದ ಕಡೂರನ್ನು ಕಡೆಗಣಿಸಲಾಗುತ್ತಿದೆ. ಬಹುಶಃ ಕಡೂರು ಚಿಕ್ಕಮಗಳೂರು ಜಿಲ್ಲೆ ಯಲ್ಲಿಲ್ಲದಿದ್ದರೆ ಅಭಿವೃದ್ಧಿಯಲ್ಲಿ ಈ ಹೊತ್ತಿಗೆ ತುಮಕೂರನ್ನು ಮೀರಿಸುತ್ತಿತ್ತು ಎನ್ನುವುದರಲ್ಲಿ ಎರಡು ಮಾತಿಲ್ಲ ಎಂದರು.
ಕಡೂರು ಮಲತಾಯಿ ಧೋರಣೆಗೊಳಗಾಗಿದೆ. ಇನ್ನು ಮುಂದಾದರೂ ಈ ಭಾವನೆ ದೂರಾಗಬೇಕು. ಇಲ್ಲವಾದರೆ ಕಡೂರು ತಾಲೂಕನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡುವ ಹೋರಾಟಕ್ಕೆ ಮುನ್ನುಡಿ ಬರೆಯಬೇಕಾಗುತ್ತದೆ ಎಂದು ಎಚ್ಚರಿಸಿದರು.ಜಿಲ್ಲಾ ಕೇಂದ್ರ ಚಿಕ್ಕಮಗಳೂರಿಗೆ ಈ ಹಿಂದೆ ಇಂಜಿನಿಯರಿಂಗ್ ಮತ್ತು ಮೆಡಿಕಲ್ ಕಾಲೇಜು ಮಂಜೂರಾಯಿತು. ಅದರ ಪ್ರಗತಿ ಯಾವ ಹಂತದಲ್ಲಿದೆ? ಸಮರ್ಪಕ ಜಾಗ ದೊರೆತಿದೆಯೇ? ಗುಡ್ಡ ಗಾಡು, ಮಲೆನಾಡು ಪ್ರದೇಶದಲ್ಲಿ ವಿದ್ಯಾರ್ಥಿಗಳು ಹೋಗಲು ಬಹುಶ ಕಷ್ಟವಾಗುತ್ತದೆ ಎಂದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಸೋಮಶೇಖರ್ ಮಾತನಾಡಿ, ಅತೀ ಹೆಚ್ಚು ವಿದ್ಯಾರ್ಥಿ ನಿಲಯ ಗಳಿರುವ ಕಡೂರು ತಾಲೂಕಿನಲ್ಲಿ 2.28 ಕೋಟಿ ರು.ಹಾಸ್ಟೆಲ್ ದುರಸ್ತಿ ಮತ್ತಿತರ ಕಾರ್ಯಗಳಿಗೆ ಶಾಸಕರು ಹಣ ಮಂಜೂರು ಮಾಡಿಸಿದ್ದು. ಹಳೆಯ ಕಟ್ಟಡದಲ್ಲಿದ್ದ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯವನ್ನು ತಾತ್ಕಾಲಿಕವಾಗಿ ಇಲ್ಲಿಗೆ ಸ್ಥಳಾಂತರಿಸಲಾಗಿದೆ ಎಂದರು.
ಹಿಂದುಳಿದ ವರ್ಗಗಳ ಇಲಾಖೆ ಕಲ್ಯಾಣಾಧಿಕಾರಿ ಮಂಜುನಾಥ್, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಎಚ್.ಡಿ. ರೇವಣ್ಣ, ನಿಲಯ ಪಾಲಕರಾದ ದೇವರಾಜ್, ಅನಿಲ್, ಡಿ.ಮಂಜಪ್ಪ, ಮಂಜಪ್ಪ, ಲಕ್ಷ್ಮಯ್ಯ, ರವಿಕುಮಾರ್, ಶ್ರೀನಿವಾಸ್, ನಿಸಾರ್, ಮಮತ, ಸರಸ್ವತಿ, ಕವಿತಾ, ರಮ್ಯ ಮತ್ತು ವಿದ್ಯಾರ್ಥಿಗಳು ಇದ್ದರು.
-- ಬಾಕ್ಸ್ ಸುದ್ದಿಗೆ--ಕಡೂರು ಪ್ರತ್ಯೇಕ ಜಿಲ್ಲೆಯಾಗಿಸಲು ಮುಂದಾಗುವೆ
ಕಡೂರು ಪಟ್ಟಣದ ಪಾಲಿಟೆಕ್ನಿಕ್ ವಿದ್ಯಾರ್ಥಿ ನಿಲಯವನ್ನು ಬಿಸಿಎಂ ಇಲಾಖೆಗೆ ತಾತ್ಕಾಲಿಕವಾಗಿ ಹಸ್ತಾಂತರಿಸಿದ ನೂತನ ಕಟ್ಟಡವನ್ನು ಶಾಸಕ ಕೆ.ಎಸ್.ಆನಂದ್ ಉದ್ಘಾಟಿಸಿದರು.ಮಂಜುನಾಥ್,ಮುರಳಿಧರ್ ಇದ್ದರು.