ಗಂಗಾವತಿ: ವಂದೇ ಮಾತರಂ ಗೀತೆ ಪೂರ್ತಿ ಹಾಡುವ ಕುರಿತು ಸದನದಲ್ಲಿ ಚರ್ಚೆ ಮಾಡಲಾಗುತ್ತದೆ. ಇದಕ್ಕಾಗಿ ಸಮಿತಿ ರಚಿಸಲಾಗುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಹೇಳಿದರು.
ನಾಡಗೀತೆ ಮತ್ತು ವಂದೇ ಮಾತರಂ ಗೀತೆಯನ್ನು ಪ್ರಾರಂಭಿಸಿದ್ದೇ ಕಾಂಗ್ರೆಸ್. ಕಾಂಗ್ರೆಸ್ನವರಿಗೂ ದೇಶಭಕ್ತಿ ಇದೆ. ವಂದೇ ಮಾತರಂ 2 ಚರಣಗಳನ್ನು ಪ್ರಸ್ತುತ ಪಡಿಸಬೇಕೆಂದು ಮುಖ್ಯಮಂತ್ರಿ ಆದೇಶ ನೀಡಿದ್ದಾರೆ. ಸರ್ಕಾರದ ಆದೇಶ ಎಲ್ಲ ಇಲಾಖೆ ಪಾಲಿಸಬೇಕು ಎಂದು ಹೇಳಿದರು.
ತಾವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾಗಿರುವುದರಿಂದ ಸರ್ಕಾರದ ನೀತಿ-ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗಿದೆ. ವಂದೇ ಮಾತರಂ ಗೀತೆ ಪೂರ್ಣ ಚರಣ ಹಾಡಬೇಕು ಎಂದು ಸರ್ಕಾರ ಆದೇಶ ನೀಡಿದರೆ ತಮ್ಮದೇನೂ ಅಭ್ಯಂತರ ಇಲ್ಲ, ಶಾಸಕರು ಸದನದಲ್ಲಿ ಈ ಗೀತೆ ಬಗ್ಗೆ ಒತ್ತಾಯಿಸಿದರೆ ಚರ್ಚೆ ಮಾಡಿ ಸಮಿತಿ ರಚಿಸಲಾಗುತ್ತದೆ ಎಂದರು.ಕಿಷ್ಕಿಂಧೆಯಲ್ಲಿ ಸಂಪುಟ ಸಭೆ: ಈಗಾಗಲೇ ಮುಖ್ಯಮಂತ್ರಿ ಎಲ್ಲ ಪ್ರದೇಶಗಳಲ್ಲಿ ಸಚಿವ ಸಂಪುಟ ಸಭೆ ನಡೆಸುತ್ತಿದ್ದಾರೆ. ಮಂಗಳೂರಿನಲ್ಲಿ ಸಚಿವ ಸಂಪುಟ ನಡೆಯಿತು. ಮುಂದೆ ಜಿಲ್ಲಾವಾರು ಸಚಿವ ಸಂಪುಟ ಸಭೆ ನಡೆಸುವುದಕ್ಕೆ ಚಿಂತನೆ ನಡೆದಿದ್ದು, ಕೊಪ್ಪಳ ಜಿಲ್ಲೆಯ ಕಿಷ್ಕಿಂಧೆ ಪ್ರದೇಶದಲ್ಲಿ ಸಚಿವ ಸಂಪುಟ ಸಭೆ ನಡೆಸಲು ಮನವಿ ಮಾಡಿಕೊಳ್ಳುವುದಾಗಿ ಹೇಳಿದರು.
ರೈತರು ನದಿಗೆ ನೀರು ಹರಿಸುವಂತೆ ಕೇಳುತ್ತಿದ್ದಾರೆ. ಅದರಲ್ಲಿ ತಪ್ಪೇನಿಲ್ಲ, ಆದರೆ ಸರಿಯಾದ ಸಮಯಕ್ಕೆ ಮಳೆಯಾಗದ ಕಾರಣ ಜಲಾಶಯ ಭರ್ತಿಯಾಗಿಲ್ಲ. ಆದರೂ ಹಂತ ಹಂತವಾಗಿ 1 ಸಾವಿರದಿಂದ 4 ಸಾವಿರ ಕ್ಯುಸೆಕ್ಸ್ ನೀರು ಬಿಡಲಾಗುತ್ತದೆ ಎಂದರು.