ಗದಗ: ನಗರದ ಎಪಿಎಂಸಿ ಆವರಣದಲ್ಲಿರುವ ಸ್ವಾಮಿ ವಿವೇಕಾನಂದ ಸಭಾಭವನದಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ ಮೂರು ದಿನಗಳ ಕಾಲ ಹಮ್ಮಿಕೊಂಡಿರುವ ಫಲ-ಪುಷ್ಪ ಪ್ರದರ್ಶನಕ್ಕೆ ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಶನಿವಾರ ಚಾಲನೆ ನೀಡಿದರು. ಸಿರಿಧಾನ್ಯಗಳಲ್ಲಿ ಅರಳಿದ ಕನ್ನಡಾಂಬೆ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಗಳು ಎಲ್ಲರ ಗಮನ ಸೆಳೆದವು. ಗುಲಾಬಿ ಹೂವುಗಳಿಂದ ಅಲಂಕೃತಗೊಂಡ ವೀರನಾರಾಯಣ ದೇವಸ್ಥಾನ, ಮರಳಿನಲ್ಲಿ ಸಾಂಸ್ಕೃತಿಕ ರಾಯಭಾರಿ ಬಸವಣ್ಣನ ಮೂರ್ತಿ, ಏಲಕ್ಕಿಯಲ್ಲಿ ಗಣೇಶನ ಮೂರ್ತಿ, ಹೂವುಗಳಲ್ಲಿ ಅಲಂಕೃತಗೊಂಡಿರುವ ಸೆಲ್ಫಿ ಪಾಯಿಂಟ್ಗಳು, ತಬಲಾ, ಪಿಯಾನೋ, ಕಲ್ಲಂಗಡಿ ಹಣ್ಣಿನಲ್ಲಿ ಕೆತ್ತನೆಗೊಂಡ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಭೇಟಿ ನೀಡಿದವರನ್ನು ಮಂತ್ರ ಮುಗ್ಧವಾಗಿಸಿದವು. ಇದರೊಟ್ಟಿಗೆ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಬೆಳೆದಿರುವ ತಾಳೆ, ಸೇವಂತಿಗೆ, ಚೆಂಡು ಹೂವು, ಲಿಂಬೆ, ಹೂಕೋಸು, ಟೊಮ್ಯಾಟೊ, ಹುಣಸೆ, ಪಪ್ಪಾಯಿ, ಕಪ್ಪು ದ್ರಾಕ್ಷಿ, ದ್ರಾಕ್ಷಿ, ಪೇರಲ, ಚಿಕ್ಕು, ಮಾವು, ನುಗ್ಗೆಕಾಯಿ, ಹೀರೇಕಾಯಿ, ಬಾಳೆ, ಯಾಲಕ್ಕಿ ಬಾಳೆ, ಈರುಳ್ಳಿ, ಚಕ್ಕೋತಾ, ಗೋಡಂಬಿ, ವೀಳ್ಯದೆಲೆ ಸೇರಿ ವಿವಿಧ ತರಕಾರಿ, ಹಣ್ಣುಗಳು, ಹೂವುಗಳು ಸಾರ್ವಜನಿಕರನ್ನು ಆಕರ್ಷಿಸಿದವು. ಅದರಲ್ಲೂ ಅಪರೂಪವಾದ ರಾಮ ಫಲ, ಸೀತಾ ಫಲ, ಸ್ಟಾರ್ ಫ್ರುಟ್ಸ್ ಗಮನ ಸೆಳೆದವು. ಫಲ-ಪುಷ್ಪ ಪ್ರದರ್ಶನದಲ್ಲಿ ಮೀನುಗಾರಿಕೆ ಇಲಾಖೆಯು ಕೂಡ ವಿವಿಧ ಬಗೆಯ ಮೀನುಗಳನ್ನು ಸಾರ್ವಜನಿಕರಿಗೆ ಪರಿಚಯಿಸಿದ್ದು. ಆಸ್ಕರ್ ಫಿಶ್, ಟೈಗರ್ ಬರ್ಬ್, ಕಲರ್ ವಿಡೋವ್ ಟೆಟ್ರಾ, ಬ್ಲಾಕ್ ಮೋರ್ ಫಿಶ್, ಗಪ್ಪಿ ಫಿಶ್, ಬ್ಲಾಕ್ ಘೋಸ್ಟ್ ಫಿಶ್, ಗೋಲ್ಡ್ ಫಿಶ್, ಟೈಗರ್ ಶಾರ್ಕ್, ಅಂಜೆಲ್, ಫ್ಲಾವರ್ ಹಾರ್ನ್ ಫಿಶ್ ಗಳನ್ನು ಜನರು ಅತ್ಯಂತ ಸಮೀಪದಿಂದ ನೋಡಿ ಖುಷಿ ಪಟ್ಟರು.