ನದಿಗಳನ್ನು ತಿರುಗಿಸುವುದು ಅಧರ್ಮದ ಕೆಲಸ: ಸ್ವರ್ಣವಲ್ಲೀ ಶ್ರೀ

KannadaprabhaNewsNetwork |  
Published : Feb 25, 2026, 02:15 AM IST
ಸ್ವರ್ಣವಲ್ಲೀ ಶ್ರೀಗಳು ಆಶೀರ್ವಚನ ನೀಡಿದರು. | Kannada Prabha

ಸಾರಾಂಶ

ನದಿಗಳನ್ನು ತಿರುಗಿಸುವುದು ಅಧರ್ಮದ ಕೆಲಸವಾಗಿದ್ದು, ಅದರ ವಿರುದ್ಧ ಹೋರಾಡಲು ಪೀಠ ಎದ್ದು ಬರುವಂತಾಯಿತು. ಧರ್ಮಕ್ಕಾಗಿ ಪೂಜೆಯ ಚಳವಳಿ ಹಮ್ಮಿಕೊಂಡಿದ್ದೇವೆ

ಗಂಗಾರತಿ ಕಾರ್ಯಕ್ರಮದಲ್ಲಿ ಆಶೀರ್ವಚನ

ನದಿ ಜೋಡಣೆ ಯೋಜನೆ ವಿರೋಧಿಸಿ ಪತ್ರ ಚಳವಳಿಗೆ ಚಾಲನೆ

ಕನ್ನಡಪ್ರಭ ವಾರ್ತೆ ಶಿರಸಿ

ನದಿಗಳನ್ನು ತಿರುಗಿಸುವುದು ಅಧರ್ಮದ ಕೆಲಸವಾಗಿದ್ದು, ಅದರ ವಿರುದ್ಧ ಹೋರಾಡಲು ಪೀಠ ಎದ್ದು ಬರುವಂತಾಯಿತು. ಧರ್ಮಕ್ಕಾಗಿ ಪೂಜೆಯ ಚಳವಳಿ ಹಮ್ಮಿಕೊಂಡಿದ್ದೇವೆ ಎಂದು ಸೋಂದಾ ಸ್ವರ್ಣವಲ್ಲಿ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ನುಡಿದರು.ಮುರೇಗಾರ ಫಾಲ್ಸ್‌ನಲ್ಲಿ ಶಾಂತಪುರ, ಕೀಸಲವಾಡ, ಮತ್ತಿಘಟ್ಟ ಮತ್ತು ಶಿವಳ್ಳಿ ಸೀಮೆ ವತಿಯಿಂದ ಆಯೋಜಿಸಿದ್ದ ಗಂಗಾರತಿ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.

ಹಿಂದೆ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಅನೇಕ ಸತ್ಯಾಗ್ರಹಗಳನ್ನು ನಮ್ಮ ಹಿರಿಯರು ಹಮ್ಮಿಕೊಂಡಿದ್ದರು. ಆಳುವ ಸರ್ಕಾರದ ವಿರುದ್ಧ ಉಪವಾಸ ಸೇರಿದಂತೆ ಅನೇಕ ಸತ್ಯಾಗ್ರಹದ ಮೂಲಕ ಎಚ್ಚರಿಸುವ ಕೆಲಸ ಮಾಡಿದ್ದರು. ಅದೇ ರೀತಿ ನಾವಿಂದು ಸರ್ಕಾರವನ್ನು ಎಚ್ಚರಿಸಲು ಪೂಜೆ ಎನ್ನುವ ಚಳವಳಿಗೆ ಚಾಲನೆ ನೀಡಿದ್ದೇವೆ. ಇದು ನಿರಂತರ ನಡೆದು ಸರ್ಕಾರ ಜಿಲ್ಲೆಯಲ್ಲಿನ ನದಿ ತಿರುವು ಯೋಜನೆಗಳನ್ನು ಕೈ ಬೀಡುವಂತಾಗಬೇಕು ಎನ್ನುವ ಸಂದೇಶ ಸಾರಿದರು.

ನದಿಗಳು ಸಮುದ್ರದೆಡೆಗೆ ಸಾಗುವುದು ಧರ್ಮ. ಅದನ್ನ ತಿರುಗಿಸುವ ಅಧರ್ಮಕ್ಕೆ ಇಂದಿನ ಸರ್ಕಾರಗಳು ಮುಂದಾಗಿವೆ. ಭಗವಂತನ ಇಚ್ಛೆಯಂತೆ ಹರಿಯುವ ನೀರಿನ ದಿಕ್ಕು ಬದಲಿಸುವ ಕಾರ್ಯಕ್ಕೆ ಅವಕಾಶ ನೀಡಕೂಡದು ಎನ್ನುವ ಕಾರಣಕ್ಕೆ ಧರ್ಮಾಭಿಮಾನ ಬೆಳೆಸಲು ನಾವು ಜಾಗೃತಿಗೋಸ್ಕರ ಪೂಜೆಯ ಮಾರ್ಗ ಹಿಡಿದಿದ್ದೇವೆ ಎಂದರು.

ಇದೇ ವೇಳೆ ಪತ್ರಕ್ಕೆ ಸಹಿ ಹಾಕುವ ಮೂಲಕ ಪತ್ರ ಚಳವಳಿಗೆ ಚಾಲನೆ ನೀಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಪರಿಸರ ಹೋರಾಟಗಾರ ಅನಂತ ಹೆಗಡೆ ಅಶೀಸರ, ಮಾರ್ಚ್‌ನಲ್ಲಿ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು, ಮುಖಂಡರ ನಿಯೋಗ ಬೆಂಗಳೂರಿಗೆ ತೆರಳಿ ಯೋಜನೆ ಕೈಬಿಡುವಂತೆ ಸಚಿವರಿಗೆ ಮನವರಿಕೆ ಮಾಡಿಕೊಟ್ಟು, ಕೇಂದ್ರ ಸರ್ಕಾರಕ್ಕೂ ಮತ್ತೊಮ್ಮೆ ನಿಯೋಗದ ಜತೆಗೂಡಿ ಯೋಜನೆ ಕುರಿತು ಇರುವ ವಿರೋಧ ಮತ್ತು ಅಪಾಯದ ಬಗ್ಗೆ ಮನವರಿಕೆ ಮಾಡಿಕೊಡಲಾಗುವುದು ಎಂದು ತಿಳಿಸಿದರು.

ನದಿ ಜೋಡಣೆ ವಿರೋಧಿಸಿ ನಡೆಯುತ್ತಿರುವ ಹೋರಾಟಕ್ಕೆ ಶ್ರೀಗಳು ನೀಡಿದ ಕರೆಯಿಂದ ಭಾರೀ ಶಕ್ತಿ ಬಂದಿದ್ದು, ಎಲ್ಲೆಡೆ ಗಂಗಾರತಿ ಅಭಿಯಾನ ನಡೆಯುತ್ತಿದೆ. ಇದು ಜನ ಜಾಗೃತಿಗೆ ಆ ಮೂಲಕ ಹೋರಾಟಕ್ಕೆ ಶಕ್ತಿ ತಂದಿದೆ ಎಂದು ಹೇಳಿದರು.ಆಕರ್ಷಕ ಗಂಗಾರತಿಮುರೇಗಾರ ಫಾಲ್ಸ್‌ನಲ್ಲಿ ನಡೆದ ಗಂಗಾರತಿ ಕಾರ್ಯಕ್ರಮ ಮನಸೂರೆಗೊಂಡಿದ್ದು, 10ಕ್ಕೂ ಹೆಚ್ಚು ತರಬೇತಿ ಪಡೆದ ಕಾರ್ಯಕರ್ತರು ಆರತಿ ಎತ್ತುವ ಮೂಲಕ ಗಮನ ಸೆಳೆಯುವುದಲ್ಲದೇ ಆರತಿಗೆ ಯಕ್ಷಗಾನ ಪದ್ಯ ಹಾಡಿದ್ದು ವಿಶೇಷವಾಗಿತ್ತು. ಇದೇ ವೇಳೆ ಚಂಡೆ, ಶಂಖ, ಜಾಗಡೆ ವಾದನಗಳೂ ನಡೆದು ನೆರೆದ ಭಕ್ತರು ಪುಳಕಿತರಾದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜನಪ್ರತಿನಿಧಿಗಳು ಜಡ; ಅಖಂಡ ಬಳ್ಳಾರಿಯ ಪ್ರವಾಸೋದ್ಯಮಕ್ಕೆ ಬರ !
ಗ್ರಾಮ ಸಹಾಯಕರಿಗೂ ನಿವೇಶನ ನೀಡಲು ಮನವಿ