ಹರಪನಹಳ್ಳಿ: ಗ್ರಾಮೀಣ ಭಾಗದ ಶ್ರಮಿಕ ಕುಟುಂಬಗಳು, ತಾಂಡಾದ ಜನರು, ರೈತ ಕೂಲಿಕಾರರು ಉದ್ಯೋಗ ಮತ್ತು ಜೀವನೋಪಾಯವನ್ನು ಅರಸಿ ಮಹಾನಗರಗಳಿಗೆ, ನೆರೆ ರಾಜ್ಯಗಳಿಗೆ ಕುಟುಂಬ ಸಮೇತ ಗುಳೆ ಹೋಗುವುದನ್ನು ಸಂಪೂರ್ಣವಾಗಿ ತಡೆಯುವುದು ವಿಬಿ ಜಿ ರಾಮ್ ಜಿ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದು ವಿಜಯನಗರ ಜಿಪಂನ ಡಿಐಇಸಿ ಸಂಯೋಜಕ ಫಾಜಿಲ್ ಅಹಮದ್ ಹೇಳಿದರು.
ಸ್ಥಳೀಯವಾಗಿಯೇ ಕೆಲಸದ ಅಭಯ: ಅಧಿಕೃತ ಮಾಹಿತಿಯ ಪ್ರಕಾರ, ಹರಪನಹಳ್ಳಿ ತಾಲೂಕಿನಲ್ಲಿ ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದಿಂದ ಗುರುತಿಸಲ್ಪಟ್ಟ ಒಟ್ಟು 51 ತಾಂಡಾಗಳಿವೆ. ಈ ಪೈಕಿ ಬಹುತೇಕ ಎಲ್ಲ ತಾಂಡಾಗಳಲ್ಲಿ ವಾಸಿಸುತ್ತಿರುವ ಬಂಜಾರ ಸಮುದಾಯದ ಕುಟುಂಬಗಳ ಅರ್ಹರಿಗೆ ಸರ್ಕಾರದ ವತಿಯಿಂದ ವಿಬಿ ಜಿ ರಾಮ್ ಜಿ ಯೋಜನೆಯಡಿ ಈಗಾಗಲೇ ಉದ್ಯೋಗ ಚೀಟಿ ವಿತರಿಸಲಾಗಿದೆ. 51 ತಾಂಡಾಗಳ ಪ್ರತಿಯೊಬ್ಬ ಜಾಬ್ ಕಾರ್ಡ್ದಾರರಿಗೂ ಸ್ವಗ್ರಾಮ ಅಥವಾ ತಾಂಡಾಗಳಲ್ಲೇ ಆದ್ಯತೆಯ ಮೇರೆಗೆ ಶೇ. 100ರಷ್ಟು ಕೆಲಸ ಒದಗಿಸಲು ತಾಪಂ ಮತ್ತು ಗ್ರಾಪಂ ಹಂತದಲ್ಲಿ ಕ್ರಿಯಾ ಯೋಜನೆಗಳನ್ನು ರೂಪಿಸಲಾಗಿದೆ. ಅದರಂತೆ ಹರಪನಹಳ್ಳಿ ತಾಪಂ ಇಒ ಹಾಗೂ ಸಹಾಯಕ ನಿರ್ದೆಶಕರ ನೇತೃತ್ವದ ತಂಡವು ನಿರಂತರವಾಗಿ ಹಂತ ಹಂತದಲ್ಲಿ ಕೆಲಸ ನೀಡಲು ಎಲ್ಲ ರೀತಿಯಲ್ಲೂ ಸಜ್ಜಾಗಿದೆ ಎಂದು ಮಾಹಿತಿ ನೀಡಿದರು.
ಹರಪನಹಳ್ಳಿ ತಾಪಂನ ಐಇಸಿ ಸಂಯೋಜಕ ಕೆ. ವಸಿಗೇರಪ್ಪ ಚಾಗನೂರು ಮಾತನಾಡಿ, ಜಾಬ್ ಕಾರ್ಡ್ಹೊಂದಿರುವ ಪ್ರತಿಯೊಂದು ಗ್ರಾಮೀಣ ಕುಟುಂಬವೂ ವರ್ಷದಲ್ಲಿ 125 ದಿನ ಕೆಲಸ ಪಡೆಯುವ ಕಾನೂನುಬದ್ಧ ಹಕ್ಕನ್ನು ಹೊಂದಿದೆ. ಬೇರೆ ನಗರ ಅಥವಾ ರಾಜ್ಯಗಳಿಗೆ ವಲಸೆ ಹೋಗಿ ಕಷ್ಟ-ನಷ್ಟಗಳನ್ನು ಅನುಭವಿಸುವ ಅಗತ್ಯವಿಲ್ಲ. ತಾಂಡಾ ನಿವಾಸಿಗಳು ತಮ್ಮ ಸ್ವಂತ ಊರಿನಲ್ಲಿ ಲಭ್ಯವಿರುವ ಆಸ್ತಿ ಸೃಷ್ಟಿಸುವ ಕಾಮಗಾರಿಗಳಾದ ಜಲಸಂರಕ್ಷಣೆ, ವಿವಿಧ ಅಭಿವೃದ್ಧಿ ಕಾಮಗಾರಿಗಳು ಹಾಗೂ ಕೆರೆ ಪುನಶ್ಚೇತನ ಕೆಲಸಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ, ಆರ್ಥಿಕ ಸ್ವಾವಲಂಬನೆ ಮತ್ತು ಗೌರವಾನ್ವಿತ ಜೀವನ ಕಂಡುಕೊಳ್ಳಬೇಕು ಎಂದು ಹೇಳಿದರು.