ಧಾರವಾಡ:
ಮೂಲತಃ ಬೆಳಗಾವಿಯ ಜಿಲ್ಲೆ ಬೈಲಹೊಂಗಲದ ಪ್ರದ್ಯುಮ್ನ ಇಲ್ಲಿನ ಕಾಲೇಜೊಂದರಲ್ಲಿ ಪಿಯುಸಿ ಓದುತ್ತಿದ್ದಾನೆ. ಸ್ನೇಹಿತನೊಂದಿಗೆ ನಗರದ ದಾನೇಶ್ವರ ಬಡಾವಣೆಯಲ್ಲಿ ರೂಮ್ ಮಾಡಿಕೊಂಡಿದ್ದಾನೆ. ಜು. 12ರಂದು ರಾತ್ರಿ ಈತ ವಿದ್ಯಾಗಿರಿಯ ಡೊಮಿನೊಸ್ ಪಿಜ್ಜಾ ಆರ್ಡರ್ ಮಾಡಿದ್ದನು. ತನ್ನ ಗೆಳೆಯನೊಡನೆ ಸೇರಿ ಒಂದು ವೆಜ್ ಪಿಜ್ಜಾ, ಎರಡು ಜಿಂಗಿ ಪಾರ್ಸಲ್, ಗಾರ್ಲಿಕ್ ಪಿಜ್ಜಾ ಆರ್ಡರ್ ಮಾಡಿದ್ದರು. ಆದರೆ, ಡೆಲಿವರಿ ಬಾಯ್ ಪಿಜ್ಜಾ ತರಲು ವಿಳಂಬ ಮಾಡಿದ್ದರಿಂದ ಇಬ್ಬರ ನಡುವೆ ಕೊಂಚ ಮಾತಿನ ಚಕಮಕಿಯೂ ನಡೆದಿತ್ತು. ಇದಾದ ಬಳಿಕ ರೂಂಗೆ ಹೋಗಿ ಪಾರ್ಸಲ್ ಓಪನ್ ಮಾಡಿ ಆಹಾರ ಬಾಯಿಗಿಟ್ಟುಕೊಂಡಾಗ ಗೊತ್ತಾಗಿದ್ದು ಅದು ವೆಜ್ ಅಲ್ಲ, ಬದಲಿಗೆ ನಾನ್ ವೆಜ್ ಎಂದು. ತಾನು ತಿನ್ನುತ್ತಿರುವ ಪಿಜ್ಜಾದಲ್ಲಿ ಚಿಕನ್ ಪೀಸ್ ಇರುವುದು ಗೊತ್ತಾಗಿದೆ. ತಕ್ಷಣವೇ ಪ್ರದ್ಯುಮ್ನ ಮತ್ತು ಆತನ ಸ್ನೇಹಿತ ವಾಂತಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಡೊಮಿನೊಸ್ಗೆ ವಿಚಾರಿಸಿದರೆ, ಅದರ ಬದಲಿಗೆ ಇನ್ನೊಂದು ಬಾರಿ ಏನಾದರೂ ಪರಿಹಾರವಾಗಿ ಆಹಾರ ಕಳುಹಿಸುತ್ತೇವೆ ಎಂದು ಸಮಾಜಾಯಿಸಿ ನೀಡಿದ್ದಾರೆ.
ನಾವು ಸಸ್ಯಹಾರಿ ಕುಟುಂಬದವರು. ಸಸ್ಯಹಾರಿ ಎಂದು ನಿರ್ದಿಷ್ಟವಾಗಿ ಹೇಳಿ ಪಿಜ್ಜಾ ತರಿಸಿದರೆ ಮಾಂಸಹಾರಿ ಪಿಜ್ಜಾ ನೀಡಲಾಗಿದೆ. ಜತೆಗೆ ಡೊಮಿನೊಸ್ ಸಂಸ್ಥೆ ಸಿಬ್ಬಂದಿ ತಡವಾಗಿ ಬಂದಿದ್ದು ಪ್ರಶ್ನಿಸಿದರೆ ಬೆದರಿಸುವ ರೀತಿಯಲ್ಲಿ ಉತ್ತರ ಕೊಡುತ್ತಾರೆ. ಈ ಕುರಿತು ಸಂಸ್ಥೆಗೆ ಪ್ರಶ್ನಿಸಿದರೆ ಸರಿಯಾಗಿ ಸ್ಪಂದನೆಯೂ ಇಲ್ಲದಾಗಿದೆ. ಆದ್ದರಿಂದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದೇನೆ ಎಂದು ಪ್ರದ್ಯುಮ್ನ ಮಾಹಿತಿ ನೀಡಿದರು.16ಡಿಡಬ್ಲೂಡಿ9