ಕನ್ನಡಪ್ರಭ ವಾರ್ತೆ ಗೌರಿಬಿದನೂರು
ಗೌರಿಬಿದನೂರು ನಗರಕ್ಕೆ ವಾಟದಹೊಸಳ್ಳಿ ಕೆರೆ ನೀರನ್ನು ತೆಗೆದುಕೊಂಡು ಹೋಗುವುದನ್ನು ವಿರೋಧಿಸಿ ವಾಟದಹೊಸಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಎಲ್ಲ ಸದಸ್ಯರು ಸಭೆ ಸೇರಿ ಪಕ್ಷಾತೀತವಾಗಿ ವಿರೋಧವನ್ನು ವ್ಯಕ್ತಪಡಿಸಿದರು ಈ ಸಂದರ್ಭದಲ್ಲಿ ಮಾಜಿ ಉಪಾಧ್ಯಕ್ಷೆ ರಾದ ತ್ರಿವೇಣಿ ಸೂರ್ಯನಾರಾಯಣ ರೆಡ್ಡಿ ಅವರು ಮಾತನಾಡಿ, ನಗರಕ್ಕೆ ನೀವು ನೀರು ತೆಗೆದುಕೊಂಡು ಹೋಗುವುದರಿಂದ ಅಂತರ್ಜಲ ಮಟ್ಟ ಕುಸಿದು ಕೆರೆಯನ್ನು ಅವಲಂಬಿಸಿರುವ ರೈತರು ಅನ್ಯಾಯಕ್ಕೆ ಒಳಗಾಗುತ್ತಾರೆ ಎಂದರು.ಬಾಗಿನ ಬೇಡ ನೀರು ಕೊಡಿ
ನೀವು ವರ್ಷಕ್ಕೊಮ್ಮೆ ಅಣ್ಣನ ರೀತಿ ಬಾಗಿನ ಕೊಡುತ್ತಿದ್ದೀರಾ ನಾವು ನಿಮ್ಮ ಅಕ್ಕತಂಗಿಯರಾಗಿ ಮನವಿ ಮಾಡುತ್ತಿದ್ದೇವೆ ನಮಗೆ ನೀವು ಕೊಡುವ ಬಾಗಿನ ಕೊಡದಿದ್ದರೂ ಪರವಾಗಿಲ್ಲ ನಮ್ಮ ಕೆರೆಯ ನೀರನ್ನು ನಮಗೆ ಕೊಡಿ ಎಂದು ಒತ್ತಾಯಿಸಿದರು ಗ್ರಾಮ ಪಂಚಾಯಿತಿ ಸದಸ್ಯರಾದ ಬಂಡಪಲ್ಲಿ ಮೂರ್ತಿ ಮಾತನಾಡಿ ಈ ದಿನ ನಾವು ಗ್ರಾಮ ಪಂಚಾಯಿತಿಯಲ್ಲಿ ಸಭೆ ಕರೆದು ಗೌರಿಬಿದನೂರು ನಗರಕ್ಕೆ ನೀರು ತೆಗೆದುಕೊಂಡು ಹೋಗುವುದಕ್ಕೆ ಎಲ್ಲಾ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದಾರೆ. ಆದ್ದರಿಂದ ಶಾಸಕರು ವಾಟದಹೊಸಹಳ್ಳಿ ಕೆರೆ ನೀರನ್ನು ತೆಗೆದುಕೊಂಡು ಹೋಗುವ ಯೋಜನೆ ಕೈಬಿಡಬೇಕು ಎಂದು ಒತ್ತಾಯಿಸಿದರು.ಪರ್ಯಾಯ ನೀರಿನ ವ್ಯವಸ್ತೆ
ಗೌರಿಬಿದನೂರು ಸಮೀಪದಲ್ಲಿರುವ ಗೋಟಕನಪುರ ಕೆರೆ, ಕಿಂಡಿ ಅಣೆಕಟ್ಟು, ಉತ್ತರ ಪಿನಕಿನಿ ನದಿಗಳಿಗೆ ಎತ್ತಿನಹೊಳೆ ನೀರನ್ನು ಹರಿಸಿಕೊಂಡು ನಗರಕ್ಕೆ ಕುಡಿಯಲು ನೀರು ಕೊಡಬೇಕು ಹಾಗೂ ಈ ಯೋಜನೆಯನ್ನು ಇಲ್ಲಿಗೆ ನಿಲ್ಲಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು ಯೋಜನೆ ಕೈಬಿಡಲು ಆಗ್ರಹಗ್ರಾಮ ಪಂಚಾಯಿತಿ ಸದಸ್ಯರಾದ ಸುಬ್ರಮಪ್ಪರವರು ಮಾತನಾಡಿ, ಶಾಸಕರು ಈ ನೀರನ್ನು ನಗರಕ್ಕೆ ತೆಗೆದುಕೊಂಡು ಹೋಗುವುದರಿಂದ ಸುಮಾರು 4 ಸಾವಿರ ಕುಟುಂಬಗಳು ಬೀದಿಗೆ ಬರುತ್ತವೆ. ಅದುದರಿಂದ ಕೆರೆಯ ನೀರನ್ನು ನಾವು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಈ ಯೋಜನೆ ಇಲ್ಲಿಗೆ ಕೈಬಿಡಬೇಕು ಎಂದು ಒತ್ತಾಯಿಸಿದರು ಈ ಸಭೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸುನಿತಾ ಮಹೇಶ್, ಉಪಾಧ್ಯಕ್ಷರಾದ ಚಂದ್ರಕಲಾ ಶ್ರೀನಿವಾಸ್, ಹಾಗೂ ಸದಸ್ಯರಾದ ಕೃಷ್ಣಮೂರ್ತಿ, ಮುದ್ದಮ್ಮ, ಜಯಲಕ್ಷ್ಮಮ್ಮ, ಆದಿನಾರಾಯಣರೆಡ್ಡಿ, ವಿಜಯ್ ಕುಮಾರ್, ನರಸಿಂಹಮೂರ್ತಿ, ನರಸಿಂಹಮೂರ್ತಿ, ಬಿ ಕಳಾವತಿ, ನಾರಾಯಣಸ್ವಾಮಿ, ಎನ್ ರಾಜೇಶ್, ಚಿನ್ನಮ್ಮ, ನಾಗರತ್ನಮ್ಮ, ಮೀನಾಕ್ಷಿ, ಚಂದ್ರಾರೆಡ್ಡಿ, ಲಕ್ಷ್ಮಿ ಸಿ ರವರು ಭಾಗವಹಿಸಿದ್ದರು.