ಧಾರವಾಡ: ವೈಯಕ್ತಿಕ ವಿಷಯಗಳಾದ ಹಣಕಾಸು ವ್ಯವಹಾರ, ಕೌಟುಂಬಿಕ ವಿಷಯಗಳ ಬಗ್ಗೆ ವಾಟ್ಸ್ಆ್ಯಪ್, ಫೇಸ್ಬುಕ್ ಹಾಗೂ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಬಾರದು ಎಂದು ಧಾರವಾಡದ ಸೈಬರ್ ಕ್ರೈಮ್ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಡಾ. ಶಿವರಾಜ ಕಟಕಭಾವಿ ಸಲಹೆ ನೀಡಿದರು.
ನಗರದ ಕವಿವಿಯ ಸರ್ ಸಿದ್ದಪ್ಪ ಕಂಬಳಿ ಕಾನೂನು ಕಾಲೇಜು ವತಿಯಿಂದ ಹಮ್ಮಿಕೊಂಡ “ಸೈಬರ್ ಅಪರಾಧಗಳು - ಬೆಳೆಯುತ್ತಿರುವ ಆಯಾಮಗಳು ಮತ್ತು ಸವಾಲುಗಳು” ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದರು.ಕೃತಕ ಬುದ್ದಿಮತ್ತೆಉಪಯೋಗಿಸಿ ಅಪರಾಧ ಮಾಡುವ ಒಂದು ವರ್ಗವೇ ಸೃಷ್ಟಿಯಾಗಿದೆ. ಅಪರಾಧಿಗಳ ಪತ್ತೆ ಸುಲಭದ ಮಾತಲ್ಲ. ಏಕೆಂದರೆ ಕೇವಲ ಇದು ನಮ್ಮ ರಾಜ್ಯದ ವಿಷಯ ಮಾತ್ರವಲ್ಲದೇ ವಿದೇಶಗಳಿಂದಲೂ ಇಂತಹ ಅಪರಾಧದ ಚಟುವಟಿಕೆಗಳನ್ನು ನಿಯಂತ್ರಿಸುತ್ತಿದ್ದಾರೆ. ಆದ್ದರಿಂದ ಸಾಮಾನ್ಯ ಜನರಿಗೆ ಇಂತಹ ಅಪರಾಧಗಳ ಕುರಿತು ಜಾಗೃತಿ ಮೂಡಿಸುವುದು ಅವಶ್ಯವಾಗಿದೆ ಎಂದರು.
ಧಾರವಾಡದ ಸಿಐಡಿ ಪೊಲೀಸ್ ನಿರೀಕ್ಷಕ ಎಲ್.ಬಿ. ಅಗ್ನಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಭೌತಿಕ ಅಪರಾಧಗಳಿಗಿಂತ ಸೈಬರ್ ಅಪರಾಧಗಳೇ ಜಾಸ್ತಿಯಾಗಿವೆ. ಆದ್ದರಿಂದ ಕಾನೂನು ವಿದ್ಯಾರ್ಥಿಗಳಿಗೆ ಮಾಹಿತಿ ತಂತ್ರಜ್ಞಾನ, ಸೈಬರ್, ಭೌದ್ದಿಕ ಸ್ವತ್ತಿನ ಕಾನೂನುಗಳ ಬಗ್ಗೆ ಅಧ್ಯಯನ ಮಾಡಬೇಕಾಗಿರುವುದು ಅಗತ್ಯವಾಗಿದೆ. ಈ ಕುರಿತು ವಿದ್ಯಾರ್ಥಿಗಳು ಹೆಚ್ಚಿನ ಜಾಗೃತಿ ವಹಿಸಬೇಕು. ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವೈಯಕ್ತಿಕ ಮಾಹಿತಿಗಳನ್ನು ಹಂಚಿಕೊಳ್ಳದಂತೆ ತಿಳಿಸಿದರು.ಧಾರವಾಡದ ಸೈಬರ್ ಅಪರಾಧದ ಪೊಲೀಸ್ ಅಧಿಕಾರಿ ಶಿವಾನಂದ ತಿಮ್ಮಾಪೂರ ಮಾತನಾಡಿ, ‘ಮೊಬೈಲ್ ಬಳಸುವಾಗಿನ ಮುನ್ನೆಚ್ಚೆರಿಕೆ ಕ್ರಮಗಳನ್ನು ವಿವರಿಸಿದರು.
ಅತಿಥಿ ಉಪನ್ಯಾಸಕ, ಹಿರಿಯ ವಕೀಲ ಕೆ.ಎಸ್. ಕೋರಿಶೆಟ್ಟರ ಅವರು, ತಮ್ಮ ವೃತ್ತಿ ಅನುಭವದಲ್ಲಿ ಕಂಡಂತಹ ಹಲವಾರು ಸೈಬರ್ ಅಪರಾಧಗಳ ಮತ್ತು ಅಂತಹ ಸಮಸ್ಯೆಗಳನ್ನು ಪರಿಹರಿಸಿರುವ ಕುರಿತು ಅನುಭವ ಹಂಚಿಕೊಂಡರು.ಅಧ್ಯಕ್ಷತೆಯನ್ನು ಕಾಲೇಜು ಪ್ರಾಚಾರ್ಯೆ ಡಾ. ಮಂಜುಳಾ ಎಸ್. ಆರ್ ವಹಿಸಿದ್ದರು. ಕಾಲೇಜ್ ಯೂನಿಯನ್ ಮತ್ತು ಜಿಮಖಾನಾ ಅಧ್ಯಕ್ಷ ಪ್ರೊ. ಡಾ. ಶಶಿರೇಖಾ ಮಾಳಗಿ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಚೇತನ ಬಡಿಗೇರ, ಕಾವ್ಯಾ ಎಂ. ದೊಡ್ಡಮನಿ ನಿರೂಪಿಸಿದರು. ಜಿಮಖಾನಾ ಪ್ರತಿನಿಧಿ ಬಸವರಾಜ ಆರಾಣಿ ವಂದಿಸಿದರು.