ಸವಣೂರು: ಎಸ್ಸಿಪಿ ಮತ್ತು ಟಿಎಸ್ಪಿ ಶೇ. 24.10ರಷ್ಟು ಈ ಹಣವನ್ನು ಎಸ್ಸಿ ಮತ್ತ ಎಸ್ಟಿ ಕಾಲನಿಗಳ ಅಭಿವೃದ್ಧಿಗೆ ಮೀಸಲಿಡಬೇಕು. ಈ ಹಣದಲ್ಲಿ ಯಾವುದೇ ರೀತಿಯಾಗಿ ಪೌರಕಾರ್ಮಿಕರಿಗೆ ಹಾಗೂ ಎಸ್ಸಿ ಮಕ್ಕಳಿಗೆ ಖರ್ಚು ಮಾಡುವುದು ಕಾನೂನುಬಾಹಿರವಾಗಿದೆ ಎಂದು ನಾಮನಿರ್ದೇಶನ ಸದಸ್ಯ ಲಕ್ಷ್ಮಣ ಕನವಳ್ಳಿ ಅವರು ಆರೋಪಿಸಿದರು.ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ ಜರುಗಿದ ವಿಶೇಷ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಎಸ್ಸಿಪಿ ಮತ್ತು ಟಿಎಸ್ಪಿ ಹಣವನ್ನು ಬೇರೆ ಯಾವುದೇ ಕೆಲಸ ಕಾರ್ಯಗಳಿಗೆ ವಿನಿಯೋಗಿಸದೆ ಎಸ್ಸಿ ಮತ್ತು ಎಸ್ಟಿ ಕಾಲನಿ ಅಭಿವೃದ್ಧಿ ಕಾಮಗಾರಿಗಳಿಗೆ ಮಾತ್ರ ಉಪಯೋಗಿಸಬೇಕು. ಅದನ್ನು ಹೊರತುಪಡಿಸಿ ಬೇರೆ ಯಾವುದೇ ಕಾಮಗಾರಿಗಳಿಗೆ ಬಳಕೆ ಮಾಡಿದರೆ ಕಾನೂನುಬಾಹಿರವಾಗುತ್ತದೆ. ಇದು ನಿಮ್ಮ ಗಮನಕ್ಕೆ ಇರಲಿ ಎಂದು ಪುರಸಭೆ ಮುಖ್ಯಾಧಿಕಾರಿ ವಿರುದ್ಧ ಹರಿಹಾಯ್ದರು.
ಬ್ಯಾಡಗಿ: ಭಗೀರಥ ಉಪ್ಪಾರ ಸಮಾಜದ ವತಿಯಿಂದ ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿನ ಗಿಡಗಳಿಗೆ ನೀರು ಉಣಿಸುವುದರ ಮೂಲಕ ವಿಶ್ವ ಜಲ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.ಈ ವೇಳೆ ಮಾತನಾಡಿದ ಸಮಾಜದ ಅಧ್ಯಕ್ಷ ಮಂಜುನಾಥ ಉಪ್ಪಾರ, ಜಗತ್ತಿನಲ್ಲಿ ಮನುಷ್ಯನ ಆಧುನಿಕತೆ ಭರಾಟೆ ಮತ್ತು ಕರಾಳತೆಗೆ ಸಿಲುಕಿ ಅರಣ್ಯ ನಾಶವಾಗುತ್ತ ಸಾಗಿದೆ. ಇದರಿಂದ ಕೇಪ್ಟೌನ್ ಸೇರಿದಂತೆ ಹಲವು ನಗರಗಳಲ್ಲಿ ನೀರು ಮಾಯವಾಗಿದೆ. ಅರಣ್ಯ ಸಂಪತ್ತು ಇದ್ದಲ್ಲಿ ಮಾತ್ರ ಮಳೆ ಬೆಳೆ ಸಾಧ್ಯ, ಆದರೆ ಮನುಷ್ಯ ಇದನ್ನು ಅರ್ಥ ಮಾಡಿಕೊಳ್ಳದೇ ತನ್ನ ಅಂತ್ಯಕ್ಕೆ ತಾನೇ ಮುನ್ನುಡಿ ಬರೆದುಕೊಳ್ಳುತ್ತಿದ್ದಾನೆ ಎಂದರು.ಲಿಂಗರಾಜ ಹರ್ಲಾಪುರ ಮಾತನಾಡಿ, ಕಳೆದ ಐದಾರು ವರ್ಷಗಳಲ್ಲಿ ಭೂಮಿಯ ತಾಪಮಾನ ಹೆಚ್ಚುತ್ತಲೇ ಸಾಗಿದೆ. ಇದಕ್ಕೆ ಕಡಿವಾಣ ಹಾಕಬೇಕದಾದಲ್ಲಿ ಗಿಡ- ಮರಗಳು ಹಾಗೂ ಅರಣ್ಯ ಬೆಳೆಸುವುದು ಅತ್ಯವಶ್ಯವಾಗಿದೆ. ಪ್ರಕೃತಿ ಸಮತೋಲನಕ್ಕೆ ಗಿಡಮರಗಳು ಅತ್ಯವಶ್ಯ. ಈ ನಿಟ್ಟಿನಲ್ಲಿ ಬಿರು ಬೇಸಿಗೆಯಲ್ಲಿ ಗಿಡಗಳನ್ನು ಉಳಿಸಿ ಬೆಳೆಸುವುದು ಅತಿ ಮುಖ್ಯ ಎಂದರು.ಸರ್ಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಪುಟ್ಟರಾಜು, ಡಾ. ನಾಗರಾಜ, ಡಾ. ಸುರೇಶ ಗುಂಡಪಲ್ಲಿ, ಶಿವಬಸಪ್ಪ ಉಪ್ಪಾರ, ಶಂಕರ ಉಪ್ಪಾರ, ಚಂದ್ರು ರೋಣದ, ಕೃಷ್ಣಪ್ಪ ಉಪ್ಪಾರ, ಜಗದೀಶ ಉಪ್ಪಾರ ಸೇರಿ ಹಲವರು ಉಪಸ್ಥಿತರಿದ್ದರು.