ಮರಿಯಮ್ಮನಹಳ್ಳಿ: ಮನುಷ್ಯ ಯಾವುದೇ ಕಾರಣಕ್ಕೂ ಎಂದಿಗೂ ಮನುಷ್ಯತ್ವ ಕಳೆದುಕೊಳ್ಳಬಾರದು ಎಂದು ಬೆಳಗಾವಿ ಜಿಲ್ಲೆಯ ಪರಮಾನಂದವಾಡಿಯ ಗುರುದೇವ ಬ್ರಹ್ಮಾನಂದ ಆಶ್ರಮದ ಪೀಠಾಧ್ಯಕ್ಷ ಡಾ.ಅಭಿನವ ಬ್ರಹ್ಮಾನಂದ ಶ್ರೀ ಹೇಳಿದರು.ಇಲ್ಲಿನ ನಗರೇಶ್ವರ ದೇವಸ್ಥಾನದಲ್ಲಿ ಇತ್ತೀಚೆಗೆ ನಡೆದ ಗೀತಾಮೃತ ಧ್ಯಾನ ಮಂದಿರದ 10ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಸಮಾಜದಲ್ಲಿ ಕೆಲ ವ್ಯಕ್ತಿಗಳಲ್ಲಿ ವಿಕೃತಿ ಮನಸು ಹೆಚ್ಚಾಗುತ್ತಿರುವುದು ಆತಂಕಕಾರಿಯಾಗಿದೆ. ವಿಕೃತಿ ಮನಸನ್ನು ಯಾರೂ ಬೆಳೆಸಿಕೊಳ್ಳಬಾರದು. ಪ್ರತಿಯೊಬ್ಬರೂ ವಿಶಾಲ ಮನೋಭಾವನೆ ಬೆಳೆಸಿಕೊಂಡು ಶಾಂತಿ, ನೆಮ್ಮದಿ, ಸಮಾಧಾನ ಕಂಡುಕೊಳ್ಳಬೇಕು ಎಂದು ಅವರು ಹೇಳಿದರು.
ಮನೆಯಲ್ಲಿ ಮಕ್ಕಳಿಗೆ ಉತ್ತಮ ಸಂಸ್ಕಾರ ಮತ್ತು ಸಂಸ್ಕೃತಿ ಹೇಳಿ ಕೊಡಬೇಕು. ಮಕ್ಕಳನ್ನು ಉತ್ತಮ ವ್ಯಕ್ತಿಗಳಾಗಿ ಬೆಳೆಸಬೇಕು. ಆಗ ಉತ್ತಮ ಸಮಾಜ ನಿರ್ಮಿಸಿದಂತಾಗುತ್ತದೆ ಎಂದು ಅವರು ಹೇಳಿದರು.ಆಂಧ್ರಪ್ರದೇಶದ ರಾಯಚೂಟಿಯ ಜಂಗಮಯ್ಯ ಮಾತನಾಡಿ, ಧ್ಯಾನದಿಂದ ಉತ್ತಮ ಜ್ಞಾನ ಪಡೆಯಬಹುದು ಎಂದು ಅವರು ಹೇಳಿದರು.
ಮರಿಯಮ್ಮನಹಳ್ಳಿಯ ಗೀತಾಮೃತ ಧ್ಯಾನ ಮಂದಿರದ ವ್ಯವಸ್ಥಾಪಕ ಆರ್.ಬಸವರಾಜ ಸಮಾರಂಭದ ಅಧ್ಯಕ್ಷತೆ ವಹಿಸಿ ಸಭೆಯಲ್ಲಿ ಮಾತನಾಡಿದರು.
ಮರಿಯಮ್ಮನಹಳ್ಳಿಯ ನಗರೇಶ್ವರ ದೇವಸ್ಥಾನದಲ್ಲಿ ಇತ್ತೀಚೆಗೆ ನಡೆದ ಗೀತಾಮೃತ ಧ್ಯಾನ ಮಂದಿರದ ಹತ್ತನೇ ವರ್ಷದ ವಾರ್ಷಿಕೋತ್ಸವದಲ್ಲಿ ಡಾ.ಅಭಿನವ ಬ್ರಹ್ಮಾನಂದ ಶ್ರೀ ಮಾತನಾಡಿದರು.