ದೇವನಹಳ್ಳಿ: ಗಂಡನ ಮನೆಯ ಕಿರುಕುಳಕ್ಕೆ ನೊಂದ ಯುವತಿ ನೇಣಿಗೆ ಶರಣಾಗಿರುವ ಘಟನೆ ಪಟ್ಟಣದ ೧೮ನೇ ವಾರ್ಡಿನ ಪುಟ್ಟಪ್ಪನಗುಡಿ ಬೀದಿಯಲ್ಲಿ ನಡೆದಿದೆ. ಆಟೋ ಚಾಲಕ ಮುನಿರಾಜು ಪತ್ನಿ ಮಾನಸ(೨೧) ಆತ್ಮಹತ್ಯೆ ಮಾಡಿಕೊಂಡಿರುವ ಗೃಹಿಣಿ. ನಾಲ್ಕು ವರ್ಷಗಳ ಹಿಂದೆ ಇಲ್ಲಿಗೆ ಸಮೀಪದ ಬೇಗೂರು ವೆಂಕಟೇಶ್ ಪುತ್ರಿ ಮಾನಸಳನ್ನು ದೇವನಹಳ್ಳಿಯ ಮುನಿರಾಜುಗೆ ವಿವಾಹ ಮಾಡಿಕೊಡಲಾಗಿತ್ತು. ದಂಪತಿಗೆ 3 ವರ್ಷದ ಒಂದು ಗಂಡು ಮಗು ಇದ್ದಾನೆ. ಮದ್ಯ ವ್ಯಸನಿಯಾಗಿದ್ದ ಗಂಡ ಮುನಿರಾಜು ಮತ್ತು ಅತ್ತೆ ಮಂಜುಳ ವರದಕ್ಷಿಣೆ ಕಿರುಕುಳ ನೀಡಿ ನಮ್ಮ ಮಗಳನ್ನು ಸಾಯಿಸಿ ಆತ್ಮಹತ್ಯೆ ಕಥೆ ಕಟ್ಟಿದ್ದಾರೆ ಎಂದು ಮೃತಳ ಪೋಷಕರು ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇನ್ಸ್ಪೆಕ್ಟರ್ ಸಿ.ರಾಕೇಶ್ ಮೃತಳ ಶವವನ್ನು ಆಕಾಶ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಿ, ಗಂಡ ಮುನಿರಾಜು ಮತ್ತು ಅತ್ತೆ ಮಂಜುಳರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.