ಹೂವಿನಹಡಗಲಿ: ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ಪೀಠಿಕೆ ಓದಿದ ದಿನವೇ, ನಮಗೆ ಸ್ವಾತಂತ್ರ್ಯ ಸಿಕ್ಕಷ್ಟು ಸಂತೋಷದ ದಿನವಾಗಿದೆ. ಅವರ ಓದಿನಲ್ಲಿನ ಶ್ರದ್ಧೆ ಮತ್ತು ವ್ಯವಸ್ಥೆ ವಿರುದ್ಧದ ಹೋರಾಟದ ಛಲ ಎಂದಿಗೂ ಕುಗ್ಗಲಿಲ್ಲ ಎಂದು ಶಾಸಕ ಕೃಷ್ಣನಾಯ್ಕ ಹೇಳಿದರು.
ಇಡೀ ಪ್ರಪಂಚವೇ ಭಾರತದತ್ತ ತಿರುಗಿ ನೋಡುವಂತಹ ಬೃಹತ್ ಪ್ರಜಾಪ್ರಭುತ್ವ ವ್ಯವಸ್ಥೆಯ ಸಂವಿಧಾನವನ್ನು ಡಾ. ಬಿ.ಆರ್. ಅಂಬೇಡ್ಕರ್ ನೀಡಿದ್ದಾರೆ. ಅವರು ದಲಿತ ಪರ, ಅಸ್ಪೃಶ್ಯತೆ ವಿರುದ್ಧ ಮಾತ್ರ ಹೋರಾಟ ಮಾಡಿಲ್ಲ, ಮಹಿಳೆಯರಿಗೆ, ಮಕ್ಕಳಿಗೆ ಸೇರಿದಂತೆ ಎಲ್ಲ ವರ್ಗದ ಜನರ ಹಿತ ಕಾಪಾಡುವಂತಹ ವ್ಯವಸ್ಥೆ ನೀಡಿದ್ದಾರೆ. ಆದರೆ ಅವರನ್ನು ಕೇವಲ ಒಂದು ಸಮಾಜಕ್ಕೆ ಸೀಮಿತ ಮಾಡಿರುವುದು, ತೀರಾ ನೋವಿನ ಸಂಗತಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸಂವಿಧಾನದ ಆಶಯಗಳು, ಅಂಬೇಡ್ಕರ್ ಅವರ ಕಷ್ಟದ ದಿನಗಳು ಮತ್ತು ಅವರ ಜೀವನ ಮೌಲ್ಯಗಳನ್ನು ಅಳವಡಿಸಿಕೊಂಡು, ನಮ್ಮ ನಡವಳಿಕೆ ಬದಲಾವಣೆ ಮಾಡಿಕೊಳ್ಳಬೇಕಿದೆ ಎಂದರು.ತಹಸೀಲ್ದಾರ್ ಕೆ.ಎಂ. ಗುರುಬಸವರಾಜ ಮಾತನಾಡಿ, ಈ ದೇಶಕ್ಕೆ ಬೃಹತ್ ಪ್ರಜಾಪ್ರಭುತ್ವ ಲಿಖಿತ ಸಂವಿಧಾನವನ್ನು ಅಂಬೇಡ್ಕರ್ ನೀಡಿದ್ದಾರೆ ಎಂದರು.
ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎ. ಕೊಟ್ರಗೌಡ, ಎಚ್. ಪೂಜೆಪ್ಪ, ಮಕರಬ್ಬಿ ಗೋಣೆಪ್ಪ, ನವಲಿ ಗುಡ್ಡದಯ್ಯ, ವಿಲ್ಸನ್ ಸ್ವಾಮಿ, ಎಲ್.ಜಿ. ಹೊನ್ನಪ್ಪನವರ್, ಶ್ರೀಧರ ನಾಯ್ಕ, ಯು. ಹನುಮಂತಪ್ಪ, ತಾಪಂ ಇಒ ಜಿ. ಪರಮೇಶ್ವರ, ಬಿಸಿಎಂ ವಿಸ್ತರಣಾಧಿಕಾರಿ ರಮೇಶ, ಸಿಪಿಐ ಮಲ್ಲಪ್ಪ ಹೂಗಾರ್, ಪುರಸಭೆ ಮುಖ್ಯಾಧಿಕಾರಿ ಜಿ. ಹನುಮಂತಪ್ಪ, ಪಿಎಸ್ಐ ಮಣಿಕಂಠ ಇತರರಿದ್ದರು.