ಕನ್ನಡಪ್ರಭ ವಾರ್ತೆ ಶಹಾಪುರ
ಜನಾಂಗ, ಜಾತಿ, ಸಮುದಾಯ ಹಾಗೂ ಅಂತಸ್ತು ಭೇದವಿಲ್ಲದೆ ದೇಶದ ಎಲ್ಲಾ ನಾಗರಿಕರಿಗೂ ಸಂವಿಧಾನದ ಮೂಲಕ ಮತದಾನದ ಹಕ್ಕು ಕಲ್ಪಿಸಿದ ಮಹಾತ್ಮ ಡಾ. ಬಿ.ಆರ್. ಅಂಬೇಡ್ಕರ್ ಎಂದು ಬೆಂಗಳೂರು ಹೈಕೋರ್ಟ್ ಹಿರಿಯ ನ್ಯಾಯವಾದಿ, ಪ್ರೊ. ಹರಿರಾಮ ಹೇಳಿದರು.ನಗರದ ಸಿ.ಪಿ.ಎಸ್. ಶಾಲಾ ಮೈದಾನದಲ್ಲಿ ಡಾ. ಬಿ.ಆರ್. ಅಂಬೇಡ್ಕರ ಅವರ 133ನೇ ಜಯಂತ್ಯುತ್ಸವ ಸಮಿತಿ ಹಮ್ಮಿಕೊಂಡಿದ್ದ ಕಾರ್ಯಕ್ರಮದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬ ಭಾರತೀಯನಿಗೂ ಮತ ಚಲಾಯಿಸುವ ಹಕ್ಕನ್ನು ದೊರಕಿಸಿಕೊಟ್ಟಿದ್ದು, ಡಾ. ಬಿ.ಆರ್. ಅಂಬೇಡ್ಕರ್. ಆದರೆ ಅದನ್ನು ದುರ್ಬಳಕೆ ಮಾಡಿಕೊಂಡವರೇ ಹೆಚ್ಚಾಗಿದ್ದಾರೆ ಎಂದು ವಿಷಾದಿಸಿದರು.
ನಾವು ಹಣ ಹೆಂಡಕ್ಕಾಗಿ ನಮ್ಮ ಪವಿತ್ರ ಮತವನ್ನು ಮಾರಿಕೊಂಡು ಬೀದಿಗೆ ಬಂದರೂ ನಮಗೆ ಬುದ್ಧಿ ಬಂದಿಲ್ಲ. ಎಲ್ಲಿವರೆಗೂ ನಮಗೆ ಬುದ್ಧಿ ಬರುವುದಿಲ್ಲವೋ ಅಲ್ಲಿಯವರೆಗೆ ನಾವು ಬೇರೆಯವರ ಬಳಿ ಕೈ ಚಾಚುವ ಪರಸ್ಥಿತಿ ತಪ್ಪುವುದಿಲ್ಲ ಎಂದರು.ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಪ್ರಗತಿಪರ ಚಿಂತಕರಾದ ಮಲ್ಲಿಕಾರ್ಜುನ ಪೂಜಾರಿ, ಸಮಾಜದಲ್ಲಿನ ಅಸಮಾನತೆಗಳನ್ನು ಹೋಗಲಾಡಿಸಿ ಸಮಾನತೆ ಸಮಾಜದ ನಿರ್ಮಾಣಕ್ಕೆ ತಮ್ಮ ಜೀವನವನ್ನೇ ಮುಡುಪಾಗಿಟ್ಟ ಅಂಬೇಡ್ಕರ್ ದೂರದೃಷ್ಟಿಯ ಮಹಾನಾಯಕರಾಗಿದ್ದಾರೆ. ಅಂಬೇಡ್ಕರ್ ಅವರ ವಿಚಾರಗಳು ಅನೇಕ ಶೋಷಣೆಗಳಿಂದ ವಿಮೋಚನೆಯತ್ತ ಕೊಂಡೊಯ್ಯುತ್ತವೆ ಎಂದು ತಿಳಿಸಿದರು.
ಡಾ. ಬಿ.ಆರ್. ಅಂಬೇಡ್ಕರ್ 133ನೇ ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಹೊನ್ನಪ್ಪ ಗಂಗನಾಳ ಅಧ್ಯಕ್ಷತೆ ವಹಿಸಿ,ಈ ದೇಶದ ಪ್ರತಿಯೊಬ್ಬ ನಾಗರಿಕ ನೆಮ್ಮದಿ ಉಸಿರಾಡುತ್ತಿರುವುದು ಸಂವಿಧಾನದಿಂದ. ವಿಶ್ವಮಾನ್ಯ ಡಾ. ಬಾಬಾ ಸಾಹೇಬ್ ಅವರನ್ನು ಕೆಲವರು ಒಪ್ಪಿಕೊಳ್ಳದೆ ಇರುವುದು ದುರಂತ ಎಂದರು.ಸಾರಿಪುತ್ರ ಬುದ್ಧವಿಹಾರ ಧಮ್ಮಗಿರಿಯ ಪೂಜ್ಯ ಭಂತೆ ಆದಿತ್ಯ ಪೂಜ್ಯರು ಸಾನಿಧ್ಯ ವಹಿಸಿದ್ದರು. ದಲಿತ ಸಂಘರ್ಷ ಸಮಿತಿಯ ಜಿಲ್ಲಾಧ್ಯಕ್ಷ ರಾಯಪ್ಪ ಸಾಲಿಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಅಮರೇಶ ವಿಭೂತಿಹಳ್ಳಿ, ಶ್ರೀಶೈಲ ಹೊಸಮನಿ, ಡಾ. ನೀಲಕಂಠ ಬಡಿಗೇರ, ಭೀಮರಾಯ ತಳವಾರ, ನಾಗಣ್ಣ ಬಡಿಗೇರ, ಬಾಬುರಾವ ಭೂತಾಳೆ, ಗೌಡಪ್ಪಗೌಡ ಆಲ್ದಾಳ, ತಿಮ್ಮಯ್ಯ ಪುರ್ಲೆ, ಡಾ. ಭೀಮಣ್ಣ ಮೇಟಿ, ಸಣ್ಣನಿಂಗಪ್ಪ ನಾಯ್ಕೋಡಿ, ಮಹಾದೇವಪ್ಪ ಸಾಲಿಮನಿ, ಆರ್. ಚನ್ನಬಸ್ಸು ವನರ್ದು, ಚಂದಪ್ಪ ಸೀತ್ನಿ, ಶರಣಪ್ಪ ಮುಂಡಾಸ, ಶಿವಕುಮಾರ ತಳವಾರ, ಶಾಂತಪ್ಪ ಕಟ್ಟಿಮನಿ, ಸೈಯದ ಖಾಲಿದ, ಡಾ. ರವೀಂದ್ರನಾಥ ಹೊಸ್ಮನಿ, ಗ್ಯಾನಪ್ಪ ಅಣಬಿ, ಶಂಕರ ಸಿಂಗೆ, ಮಲ್ಲಯ್ಯಸ್ವಾಮಿ ಇಟಗಿ, ಮಲ್ಲಣ್ಣ ಉಳಂಡಗೇರ, ಭೀಮರಾಯ ಅಂಚೆಸೂಗುರು, ಶಿವಪುತ್ರ ಜವಳಿ, ಮರೆಪ್ಪ ಜಾಲಿಮಂಚಿ, ಚಿದಾನಂದ ಬಡಿಗೇರ, ಡಾ. ಬಸವರಾಜ ಸ್ಯಾದಾಪುರ, ಸಾಯಿಬಾಬ ಅಣಬಿ, ಶರಣು ದೊರನಹಳ್ಳಿ, ಹೈಯಾಳಪ್ಪ ಮುಂತಾದವರು ಉಪಸ್ಥಿತರಿದ್ದರು.ಕಲಾವಿದರಾದ ಡಿಂಗ್ರಿ ನರಸಣ್ಣ ಹಾಗೂ ಸಂಗಡಿಗರು ಅಂಬೇಡ್ಕರ್ ಬದುಕು ಮತ್ತು ಸಾಧನೆ ಕುರಿತು ಅನೇಕ ಹಾಡು ಪ್ರಸ್ತುತಪಡಿಸಿದರು.