ಶಿಗ್ಗಾಂವಿ: ದೇಶದ ಜನರಲ್ಲಿ ಯಾವುದೇ ಭೇದ-ಭಾವವಿಲ್ಲದೇ ಸರ್ವರೂ ಸಮಾನರು ಎಂದು ಸಾರುವ ಸಂವಿಧಾನ ರಚಿಸಿ, ಮಹತ್ವದ ಕೊಡುಗೆ ನೀಡಿರುವ ಡಾ. ಬಿ.ಆರ್. ಅಂಬೇಡ್ಕರ್ ಅವರು ಪ್ರಾತಃಸ್ಮರಣೀಯರು ಎಂದು ಹೆಸ್ಕಾಂ ಅಧ್ಯಕ್ಷ ಸೈಯದ್ ಅಜ್ಜಂಫೀರ್ ಖಾದ್ರಿ ಹೇಳಿದರು.
ಪುರಸಭೆ ಸದಸ್ಯ ಮುಕ್ತಾರ್ ಅಹಮದ್ ತಿಮ್ಮಾಪುರ ಮಾತನಾಡಿ, ಜೀವಮಾನವಿಡೀ ಹೋರಾಡಿ ದೇಶದ ಆದರ್ಶ ಪುರುಷರಾಗಿ ಮೂಡಿ ಬಂದಿರುವ ಅಂಬೇಡ್ಕರ್ ಅವರ ಜೀವನ, ಸಾಧನೆ ಹಾಗೂ ಚಿಂತನೆಗಳನ್ನು ವಿದ್ಯಾರ್ಥಿ-ಯುವಜನರು ಅಳವಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದಲಿತ ಹಕ್ಕುಗಳ ಸಮಿತಿ (ಡಿಎಚ್ಎಸ್) ಜಿಲ್ಲಾ ಸಂಚಾಲಕ ವೀರಣ್ಣ ಗಡ್ಡಿ ಅವರ ಮಾತನಾಡಿ, ಶೋಷಿತ ಸಮುದಾಯದಲ್ಲಿ ಜನ್ಮತಾಳಿದ ಅಂಬೇಡ್ಕರ್ ಅವರು, ಜಾತಿಯ ಕಾರಣದಿಂದಾಗಿಯೇ ಪಶುಗಳಿಗಿಂತ ಕಡೆಯಾಗಿ ಶೋಷಿತರ ಮೇಲೆ ದೌರ್ಜನ್ಯ ಹಾಗೂ ಶೋಷಣೆ ಆಗುತ್ತಿರುವುದನ್ನು ಮನಗಂಡು ನೊಂದಿದ್ದರು. ಶೋಷಿತರ ಏಳಿಗೆಗಾಗಿ ಹಾಗೂ ಸರ್ವ ಜನರು ಸಮಾನರಾಗಿ ಬಾಳುವಂತಾಗಲು ದೇಶದಲ್ಲಿ ಅತಿ ಹೆಚ್ಚಿನ ಅಧ್ಯಯನ ಮಾಡಿ ಸಂವಿಧಾನ ರಚಿಸಿದ ಮಹಾತ್ಮರು ಎಂದರು. ಶೋಷಿತರ ಹಾಗೂ ಬಡಜನರ ಸಮಸ್ಯೆಗಳು ಸ್ವತಂತ್ರ ಭಾರತದಲ್ಲಿಂದಿಗೂ ಮುಂದುವರಿದಿರುವುದು ನೋವಿನ ಸಂಗತಿ. ಈ ಸಮಸ್ಯೆಗಳ ಪರಿಹಾರಕ್ಕಾಗಿ ಅಂಬೇಡ್ಕರ್ ಘೋಷಿಸಿದ "ಶಿಕ್ಷಣ, ಸಂಘಟನೆ ಮತ್ತು ಹೋರಾಟ " ಈ ಮುತ್ತಿನಂತಹ ಮೂರು ಸೂತ್ರಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.ಕಾರ್ಯಕ್ರಮದಲ್ಲಿ ಡಿವೈಎಫ್ಐ ಶಹರ ಘಟಕ ಹಾಗೂ ಜಿ+ ಮನೆ ಫಲಾನುಭವಿಗಳ ಹೋರಾಟ ಸಮಿತಿ ಮುಖಂಡರಾದ ಪ್ರಿಯಾ ವಿ. ಗಡ್ಡಿಯವರ, ಗುರುನಗೌಡ ದುಂಡಿಗೌಡ್ರ, ಮಕಬುಲ್ ಯಲ್ಲಾಪುರ, ರುದ್ರೇಶ ಗುರಣ್ಣನವರ, ಮಂಜುಳಾ ಹಾನಗಲ್, ದ್ಯಾಮಕ್ಕ, ಶಾಂತಕ್ಕ ಗಡ್ಡಿಯವರ, ಜಯಮ್ಮ ಆಲೂರು, ಗೌಸ್ ನವಲಗುಂದ, ಜಯಲಕ್ಷ್ಮಿ ಅಂಗಡಿ, ಸೂರಜ್ ಸಿಂಗ್ ಸಿಖ್, ಚಾಂದಸಿಂಗ್ ಸಿಖ್, ಶಕೀಲಾ ದಖನಿ, ಶೈಲಾ ನಿಂಗಪ್ಪನವರ, ಫಾತಿಮಾ ಚಿನಿವಾಲ್, ಗಂಗಮ್ಮ ಹಾವಣಗಿ, ಸಲೀಮ್ ಸೌದಾಗಾರ, ನಾಸೀರ್ ಬಡಿಗೇರ, ಮಲ್ಲೇಶಪ್ಪ ತಿಟ್ಟೇನವರ, ಇಮಾಮ್ ಹುಸೇನ್ ಧಾರವಾಡ ಪಾಲ್ಗೊಂಡಿದ್ದರು.