ಸಾರ್ವಜನಿಕ ಜೀವನದಲ್ಲಿ ಸರಳತೆ, ಸೌಜನ್ಯತೆಯಿಂದ ಇದ್ದು, ರಾಜಕಾರಣಿಯಾಗಿ ವೈದ್ಯರಾಗಿ ಪ್ರಾಮಾಣಿಕ ಸೇವೆ ಸಲ್ಲಿಸಿದ ಡಾ. ವೀರಬಸವಂತರೆಡ್ಡಿ ಮುದ್ನಾಳ ಅವರು ಬಸವಾದಿ ಶರಣರ ಆಶಯದಂತೆ ಮಾದರಿಯ ಬದುಕು ನಡೆಸಿದರು ಎಂದು ಗುರುಮಠಕಲ್ ಖಾಸಾಮಠದ ಪೀಠಾಧಿಪತಿ ಶ್ರೀ ಶಾಂತವೀರ ಗುರುಮುರುಘರಾಜೇಂದ್ರ ಮಹಾಸ್ವಾಮೀಜಿ ನುಡಿದರು.
ಡಾ. ವೀರಬಸವಂತರೆಡ್ಡಿ ಮುದ್ನಾಳ ಅವರು ಯಾವತ್ತೂ ಮಿತಭಾಷಿಗಳಾಗಿ ಸರಳತೆ, ಸೌಜನ್ಯತೆಗೆ ಹೆಸರಾಗಿದ್ದರು. ಯಾದಗಿರಿ ಕ್ಷೇತ್ರದ ಶಾಸಕರಾಗಿ ಸೇವೆ ಸಲ್ಲಿಸಿ, ತಮ್ಮದೇ ಆದ ಕೊಡುಗೆಯನ್ನು ನೀಡಿದ್ದರು. ಯಾದಗಿರಿ ಜಿಲ್ಲಾ ಕೇಂದ್ರವಾಗಲು ಶ್ರಮಿಸಿದ್ದರು. ಯಾದಗಿರಿ ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಸರ್ಕಾರದ ಮೇಲೆ ಒತ್ತಡ ಹಾಕಿ ಆಗುವಂತೆ ಮಾಡಿದ್ದರು ಎಂದು ಸ್ಮರಿಸಿದರು.
ಪ್ರಾಚಾರ್ಯ ಡಾ. ಸುಭಾಶ್ಚಂದ್ರ ಕೌಲಗಿ ಮಾತನಾಡಿ, ಡಾ. ಮುದ್ನಾಳ್ ಆದರ್ಶ ಜೀವನ ನಡೆಸಿದರು. ಸಮಯಪ್ರಜ್ಞೆ ರೂಢಿಸಿಕೊಂಡಿದ್ದರು.ಸಿದ್ಧಹಸ್ತದ ವೈದ್ಯರಾಗಿ, ಶುದ್ಧಹಸ್ತದ ರಾಜಕಾರಣಿಯಾಗಿ, ಸರಳತೆಯ ಸಾಕಾರಮೂರ್ತಿಗಳಾಗಿ ಜನಮಾನಸದಲ್ಲಿ ಚಿರಸ್ಥಾಯಿಯಾಗಿದ್ದಾರೆ ಎಂದರು.ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ನಿಕಟಪೂರ್ವ ಜಿಲ್ಲಾಧ್ಯಕ್ಷ ಸೋಮಶೇಖರ್ ಮಣ್ಣೂರ್ ಮಾತನಾಡಿ, ಅವರ ಅಗಲಿಕೆಯಿಂದ ವೀರಶೈವ ಸಮಾಜವು ಹಿರಿಯ ಮುಖಂಡ, ಸಜ್ಜನ ರಾಜಕಾರಣಿಯನ್ನು ಕಳೆದುಕೊಂಡು ಬಡವಾಗಿದೆ ಎಂದರು.