-ಕರ್ನಾಟಕ ಸರ್ಕಾರ ನಾಡಹಬ್ಬ ಮೈಸೂರು ದಸರಾ ಉತ್ಸವಕ್ಕೆ ಪಟ್ಟದೇವರ ಸ್ಥಬ್ದ ಚಿತ್ರ ಆಯ್ಕೆ
ಕನ್ನಡಪ್ರಭ ವಾರ್ತೆ ಬೀದರ್
ಡಾ. ಶತಾಯುಷಿ ಚನ್ನಬಸವ ಪಟ್ಟದೇವರ ಕಾರ್ಯಗಳನ್ನು ಸ್ಮರಿಸಿ ಕರ್ನಾಟಕ ಸರ್ಕಾರ ನಾಡಹಬ್ಬ ಮೈಸೂರು ದಸರಾ ಉತ್ಸವಕ್ಕೆ ಅವರ ಸ್ಥಬ್ದ ಚಿತ್ರವನ್ನು ಆಯ್ಕೆ ಮಾಡಿದ್ದು, ಸಮಸ್ತ ಬಸವ ಭಕ್ತರಿಗೆ ಹೆಮ್ಮೆ ಮತ್ತು ಗೌರವ ತಂದಿದೆ ಎಂದು ರಾಜ್ಯ ಭಾರತೀಯ ಬಸವ ಬಳಗದ ಅಧ್ಯಕ್ಷರಾದ ಬಾಬು ವಾಲಿ ತಿಳಿಸಿದ್ದಾರೆ.ಈ ಕುರಿತು ಪ್ರಕಟಣೆ ನೀಡಿ, ಕಲ್ಯಾಣ ನಾಡಿನ ನಡೆದಾಡುವ ದೇವರು, ನೂತನ ಅನುಭವ ಮಂಟಪದ ಶಿಲ್ಪಿ ಕನ್ನಡದ ಪಟ್ಟದೇವರು, ಬಸವ ನಿಷ್ಠರು ನಿಜಾಮರ ಆಳ್ವಿಕೆಯಲ್ಲಿ ಹೊರಗಡೆ ಉರ್ದು ಬೋರ್ಡ್ ಹಾಕಿ ಒಳಗಡೆ ಕನ್ನಡ ಕಲಿಸಿದ ಕನ್ನಡ ಜ್ಯೋತಿ ಶಾಂತಿ ವರ್ಧಕ ಶಿಕ್ಷಣ ಸಂಸ್ಥೆ ಕಟ್ಟಿ ಬೆಳೆಸಿ ಈ ಭಾಗದ ಜನರಿಗೆ ಶಿಕ್ಷಣ ನೀಡಿ ಸರ್ವಾಂಗೀಣ ಅಭಿವೃದ್ಧಿಪಡಿಸಿದ ಹರಿಕಾರ ಮಹಿಳೆಯರಿಗೆ ಅಕ್ಕ ಮಹಾದೇವಿ ಮಹಿಳಾ ಮಹಾವಿದ್ಯಾಲಯ ಕಟ್ಟಿದ ಪರಮ ಪೂಜ್ಯರು ಸ್ವಾತಂತ್ರ ಪೂರ್ವದಲ್ಲಿ ಹಾನಗಲ್ಲ ಮಾರಸ್ವಾಮಿ ಉಚಿತ ಪ್ರಸಾದ ನಿಲಯವನ್ನು ಹಿರೇಮಠ ಸಂಸ್ಥಾನ ಭಾಲ್ಕಿಯಲ್ಲಿ ಸ್ಥಾಪಿಸಿ ಬಡವರಿಗೆ ಅನ್ನದಾನ, ವಿದ್ಯಾ ದಾನ ನೀಡಿದ ಪೂಜ್ಯರಾಗಿದ್ದಾರೆ.
ಕರ್ನಾಟಕ ಸರ್ಕಾರಕ್ಕೂ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆಯವರಿಗೂ, ಜಿಲ್ಲಾಡಳಿತಕ್ಕೂ ಮತ್ತು ವಿಶೇಷವಾಗಿ ಜಿ.ಪಂ ಸಿಇಒ ಡಾ.ಗಿರೀಶ ದಿಲೀಪ ಬದೋಲೆ ಅವರಿಗೆ ರಾಜ್ಯ ಭಾರತೀಯ ಬಸವ ಬಳಗ ಕರ್ನಾಟಕ ವತಿಯಿಂದ ಬಾಬು ವಾಲಿ ಅಭಿನಂದನೆ ತಿಳಿಸಿದ್ದಾರೆ.
--ಚಿತ್ರ 10ಬಿಡಿಆರ್56
ಪೂಜ್ಯ ಡಾ. ಚನ್ನಬಸವ ಪಟ್ಟದೇವರ ಸ್ಥಬ್ದ ಚಿತ್ರ--