ಬರಗಾಲದಿಂದಾಗಿ ಸಿಗದ ಹಸಿ ಮೇವು: ಕುರಿಗಾಹಿಗಳಿಂದ ಊರೂರು ತಿರುಗಾಟ

KannadaprabhaNewsNetwork |  
Published : Sep 12, 2026, 02:45 AM IST
ಕುರಿಗಳೊಂದಿಗೆ ರಸ್ತೆ ಬದಿಗಳಲ್ಲಿ ಮೇವು ಅರಸಿ ಹೊರಟಿರುವ ಕುರಿಗಾರರು. | Kannada Prabha

ಸಾರಾಂಶ

ಬರಗಾಲ ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಹಾಗೂ ಜಾನುವಾರು ಸಾಕಣೆದಾರರ ಜೀವನದ ಮೇಲೆ ತೀವ್ರ ಪರಿಣಾಮ ಬೀರಿದೆ. 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದ್ದು, ಗ್ರಾಮೀಣ ಭಾಗದ ಶೇ. 65ಕ್ಕೂ ಹೆಚ್ಚು ಅಲೆಮಾರಿ ಕುರಿಗಾಹಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಅಮರೇಶ್ವರಸ್ವಾಮಿ ಕಂದಗಲ್ಲಮಠ

ಕುಕನೂರು: ಮಳೆ ಆಗಿದ್ರ, ಕುರಿಗಳು ಬಾಯ್ತುಂಬ ಮೇಯ್ತಿದ್ವು, ಸದ್ಯ ಅವ್ಕ ಒಣ ಹುಲ್ಲೇ ಗತಿ ನೋಡ್ರೀ, ಅದು ಹೊಲ್ದಾಗ್ ಸಹ ಹುಡುಕಿನಂದ್ರಾ ಹಿಡಿ ಹುಲ್ಲು ಸಿಗಲ್ಲಾ, ರಸ್ತೆ ಮಗ್ಲ ಧೂಳಿನಿಂದ್ ಕೂಡಿದ್ ಒಣಗಿದ್ ಹುಲ್ನ ಕುರಿ ಮೇಯ್ತಾವ್ರೀ, ಈ ಬರಗಾಲ ನಮ್ಗ್ ಭಾಳ ಸಂಕ್ಟ ತಂದೈತ್ರೀ ನೋಡ್ರೀ...

ಒಣಗಿದ ಹೊಲಗಳು, ಬತ್ತಿದ ಹಳ್ಳ-ಕೆರೆಗಳ ನಡುವೆ ಕುರಿಗಳ ಜತೆ ಹಪಹಪಿಸುತ್ತಿರುವ ಕುರಿಗಾಹಿ ಸೋಮಣ್ಣ ಹೇಳಿದ್ದು ಹೀಗೆ.

ಮುಂಗಾರು ಆರಂಭದಲ್ಲಿ ಅಲ್ಪ ಸ್ವಲ್ಪ ಸುರಿದ ಮಳೆ ಬಿಟ್ಟರೆ, ಮತ್ತೆ ಹೇಳಿಕೊಳ್ಳುವಂತಹ ಮಳೆಯೇ ಆಗಿಲ್ಲ. ಆಗಲೇ ಮುಂಗಾರು ಮುಗಿಯುವ ಹಂತ ತಲುಪಿದೆ. ಆದರೂ ಭೂಮಿ ತಂಪಾಗಿಲ್ಲ. ಮುಂಗಾರು ವೈಫಲ್ಯದಿಂದ ರೈತರು ಬೆಳೆ ಹರಗಿದ್ದಾರೆ. ಉತ್ತಮ ಮಳೆ ಆಗಿದ್ದರೆ ರೈತರು ಫಸಲು ತೆಗೆದುಕೊಂಡ ಮೇಲೆ ಕುರಿಗಾಹಿಗಳು ಜಮೀನುಗಳಲ್ಲಿ ಕುರಿ ಮೇಯಿಸುತ್ತಿದ್ದರು. ಸದ್ಯ ಭೂಮಿ ಬರಡಾಗಿವೆ. ಒಣ ಮಣ್ಣು ಬಿಸಲಿನಿಂದ ಸುಡುತ್ತಿದೆ. ಕುರಿಗಾಹಿಗಳು ಬೇಸತ್ತು ಊರೂರು ತಿರುಗುತ್ತಿದ್ದಾರೆ.

ಬರಗಾಲ ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಹಾಗೂ ಜಾನುವಾರು ಸಾಕಣೆದಾರರ ಜೀವನದ ಮೇಲೆ ತೀವ್ರ ಪರಿಣಾಮ ಬೀರಿದೆ. 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದ್ದು, ಗ್ರಾಮೀಣ ಭಾಗದ ಶೇ. 65ಕ್ಕೂ ಹೆಚ್ಚು ಅಲೆಮಾರಿ ಕುರಿಗಾಹಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

ರಸ್ತೆ ಬದಿಯೇ ಗತಿ

ನೀರಿಲ್ಲ, ಹಸಿರಿಲ್ಲ, ಮೇವಿಲ್ಲ. ಸದ್ಯ ಕುರಿಗಾಹಿಗಳಿಗೆ ಡಾಂಬರ್ ರಸ್ತೆ ಬದಿಗಳೇ ಮೇಯಿಸಲು ಇರುವ ತಾಣಗಳಾಗಿವೆ. ಊರೂರು ಸುತ್ತುತ್ತಾ ರಸ್ತೆ ಬದಿಗಳಲ್ಲಿ ಕುರಿಗಳನ್ನು ಹೊಡೆದುಕೊಂಡು ಹೋಗುತ್ತಾ ತೆರಳುತ್ತಿದ್ದಾರೆ. ಕುರಿಗಳಿಗೆ ಹೊಟ್ಟೆತುಂಬ ಮೇಯಲು ಸಿಗುತ್ತಿಲ್ಲ. ಸುಮ್ನೇ ಅವ್ನ ಸುತ್ತಾಡಿಸೋ ಕೆಲಸ ಒಂದ್ ಮಾಡ್ತೀದ್ದೀವಿ ನೋಡ್ರೀ ಅನ್ನುತ್ತಾರೆ ಕುರಿಗಾಹಿಗಳು.

ಮಳೆಯಿಲ್ಲದೆ ಹುಲ್ಲುಗಾವಲುಗಳು ಒಣಗಿ ಹೋಗುವುದರಿಂದ ಕುರಿ-ಮೇಕೆಗಳಿಗೆ ಹಸಿರು ಮೇವು ಸಿಗುವುದಿಲ್ಲ. ಕುಡಿಯುವ ನೀರಿಗಾಗಿ ಮೈಲುಗಟ್ಟಲೆ ಅಲೆಯಬೇಕಾಗಿದೆ. ಕುರಿಗಾಹಿಗಳು ತಮ್ಮ ನೂರಾರು ಕುರಿಗಳೊಂದಿಗೆ ವಲಸೆ ಸಹ ಹೋಗುತ್ತಿದ್ದಾರೆ. ಅಪೌಷ್ಟಿಕತೆ ಮತ್ತು ಕಲುಷಿತ ನೀರು ಕುಡಿಯುವುದರಿಂದ ಕುರಿಗಳಲ್ಲಿ ರೋಗನಿರೋಧಕ ಶಕ್ತಿ ಸಹ ಕಡಿಮೆಯಾಗಿ, ಸಾಂಕ್ರಾಮಿಕ ರೋಗ ಬೇನೆ ಸಹ ಕಾಣುತ್ತಿದೆ.

ಉರಿ ಬಿಸಿಲು

ಮಳೆನೂ ಇಲ್ಲ. ಇತ್ತ ಬಿಸಿಲಿನ ಪ್ರಮಾಣ ಸಹ ತಗ್ಗಿಲ್ಲ. ಹೆಚ್ಚಾದ ಉರಿ ಬಿಸಿಲಿನ ಪ್ರಮಾಣದಿಂದ ಕುರಿಗಳು ಹಾಗೂ ಜಾನುವಾರುಗಳು ಬಸವಳಿಯುತ್ತಿವೆ. ಬೀದಿ ಜಾನುವಾರುಗಳಿಗೆ ಸಹ ಮೇವಿಲ್ಲ. ಅವುಗಳು ಸಹ ಹಸಿವಿನಿಂದ ಬಳಲುತ್ತಿವೆ.

ಬರ ಹಿನ್ನೆಲೆ ಕುರಿಗಳಿಗೆ ಮೇವಿಲ್ಲ. ನಿತ್ಯ ಮೇವು ಅರಸಿ ದೂರ ದೂರ ಹೋಗಬೇಕಾಗಿದೆ. ಮಳೆ ಆಗದಿದ್ದರೆ ಬಹಳ ತೊಂದರೆ ಆಗಲಿದೆ. ಕುರಿಗಳ ಸಾಕುವುದು ಕಷ್ಟಕರವಾಗಿದೆ ಎನ್ನುತ್ತಾರೆ ಕುರಿಗಾಹಿ ಸೋಮಣ್ಣ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಜನಜೀವನ ಅಭಿವೃದ್ಧಿ: ರಾಬಿನ್ ದೇವಯ್ಯ
ರಾಮಕೃಷ್ಣರ ಸಾಹಿತ್ಯ ಕ್ಷೇತ್ರ ಕೊಡುಗೆ ಪರಿಚಯ ಅಗತ್ಯ: ನಾಗೇಂದ್ರಬಾಬು