ಕನ್ನಡಪ್ರಭ ವಾರ್ತೆ ಬೆಂಗಳೂರುಕವಿ ಎಚ್.ಡುಂಡಿರಾಜ್ ತಮ್ಮದೇ ಪರಿಶ್ರಮದಿಂದ ಬೆಳೆದ ‘ಸೆಲ್ಫ್ ಮೇಡ್ ಕವಿ’ ಎಂದು ಹಿರಿಯ ಕವಿ ಬಿ.ಆರ್. ಲಕ್ಷ್ಮಣರಾವ್ ಹೇಳಿದ್ದಾರೆ. ಭಾನುವಾರ ನಗರದಲ್ಲಿ ಜರುಗಿದ ಎಚ್.ಡುಂಡಿರಾಜ್ ಅವರ 70ರ ಸಂಭ್ರಮ, ಆತ್ಮಕಥನ ಹಾಗೂ ವಿವಿಧ ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಡುಂಡಿರಾಜ್ ನನ್ನ ಗುರು, ಗೆಳೆಯ ಹಾಗೂ ಸಂಬಂಧಿಕರಾಗಿದ್ದಾರೆ. ಹನಿಗವನಗಳ ಮೂಲಕ ಹೆಚ್ಚು ಜನಪ್ರಿಯತೆ ಗಳಿಸಿದ್ದಾರೆ. ಗ್ರಾಮೀಣ ಪರಿಸರದಿಂದ ಬಂದ ಅವರು ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಅವರ ಸಾಹಿತ್ಯ ಕ್ಷೇತ್ರದ ಸೇವೆ ಹೀಗೆಯೇ ಮುಂದುವರಿಯಲಿ ಎಂದರು. ಲೇಖಕ ವೈ.ವಿ. ಗುಂಡೂರಾವ್ ಮಾತನಾಡಿ, ಕವಿತೆ, ಹಾಡು ಹಾಗೂ ನಾಟಕಗಳ ಮೂಲಕ ಡುಂಡಿರಾಜ್ ಜನರನ್ನು ತಲುಪಿದ್ದಾರೆ. ಡುಂಡಿರಾಜ್ ಅವರ ಆತ್ಮಕಥನದಲ್ಲಿ ವೃತ್ತಿಜೀವನ, ಸಾಹಿತ್ಯಿಕ ಪಯಣ ಹಾಗೂ ವೈಯಕ್ತಿಕ ಬದುಕಿನ ಹಲವು ಅನುಭವಗಳು ದಾಖಲಾಗಿವೆ ಎಂದು ಹೇಳಿದರು. ಸನ್ಮಾನ ಸ್ವೀಕರಿಸಿದ ಡುಂಡಿರಾಜ್ ತಮ್ಮ ಐದು ದಶಕಗಳ ಸಾಹಿತ್ಯ ಪಯಣದ ನೆನಪುಗಳನ್ನು ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಪತ್ರಕರ್ತ ಹರೀಶ್ ಕೇರ, ಅಂಕಿತ ಪ್ರಕಾಶನದ ಪ್ರಕಾಶ್ ಕಂಬತ್ತಳ್ಳಿ ಇದ್ದರು.