ಕನ್ನಡಪ್ರಭ ವಾರ್ತೆ ತಾಳಿಕೋಟೆ
ಬೆಳಗ್ಗೆ ೮.೩೦ ಗಂಟೆಗೆ ಪ್ರಾರಂಭಗೊಂಡ ದೇವಿಯ ಮೆರವಣಿಗೆ ಕತ್ರಿಬಜಾರ್, ಪಿಕೆಪಿಎಸ್ ಬ್ಯಾಂಕ್ ರಸ್ತೆ, ಪಂಚಸೈಯದ್ ದರ್ಗಾದ ಮುಂದಿನ ರಸ್ತೆಯ ಮೂಲಕ ರಾಜವಾಡೆಯಲ್ಲಿ ನಿರ್ಮಿಸಲಾಗಿರುವ ಪಾದಗಟ್ಟೆಗೆ ಸಂಜೆ ಬಂದು ತಲುಪಿತು. ನಂತರ ಶ್ರೀದೇವಿಯನ್ನು ಪಾದಗಟ್ಟೆಯಲ್ಲಿ ಕೂಡ್ರಿಸಿ ವಿವಿಧ ಪೂಜಾ ಕಾರ್ಯ ನಡೆದವು. ಭಕ್ತರು ದೀಡ ನಮಸ್ಕಾರ ಹಾಕಿ ಹರಕೆ ತೀರಿಸಿದರು. ನಂತರ ಭಕ್ತರು ಶ್ರೀದೇವಿಗೆ ಉಡಿ ತುಂಬಿದರು.
ಮೆರಗು ತಂದ ಕಲಾ ತಂಡಗಳು:ಗ್ರಾಮದೇವತೆ(ದ್ಯಾಮವ್ವದೇವಿ) ಜಾತ್ರಾ ಉತ್ಸವದ ಭವ್ಯ ಮೆರವಣಿಗೆಯುದ್ದಕ್ಕೂ ರಾಜವಾಡೆಯ ಶ್ರೀದೇವಿ ಕೋಲಾಟ ಸಂಘದ ಕೋಲಾಟ, ಭಂಟವಾಳದ ಚಿಲಿಪಿಲಿ ಗೊಂಬೆ ಕುಣಿತ, ಮಹಿಷಾಸುರ ಮರ್ದಿನಿ ಚಂಡಿ ಮೇಳ, ಕರಡಿ ಮಜಲು, ಶೋಭಾ ಜೋಗತಿ ತಂಡದವರಿಂದ ಜೋಗತಿ ಕುಣಿತ, ಜೈ ಹನುಮಾನ ಸಾಂಬಳ ಕರಡಿ ಮಜಲು, ಸೋಲ್ಲಾಪುರದ ನಾಶಿಕ ಡೋಲ ಕಲಾ ತಂಡಗಳು, ಆನಂದಪ್ಪ ಕೇತ್ರಿಯವರಿಂದ ಸಿಡಿ ಮದ್ದು, ಶಹನಾಯಿ ಮಜಲು ಒಳಗೊಂಡಂತೆ ಅನೇಕ ನೃತ್ಯತಂಡಗಳು ಭಾಗವಹಿಸಿ ಮೆರವಣಿಗೆಗೆ ಮೆರಗು ತಂದವು.ಜಾತ್ರೋತ್ಸವಕ್ಕೆ ಮಹಿಳೆಯರ ದಂಡು:ಮೂರು ವರ್ಷಕ್ಕೊಮ್ಮೆ ಜರುಗುವ ಗ್ರಾಮದೇವತೆ ಹಾಗೂ ಪ್ರತಿವರ್ಷ ಜರುಗುವ ಖಾಸ್ಗತೇಶ್ವರ ಜಾತ್ರಾ ಮಹೋತ್ಸವ ಒಟ್ಟಿಗೆ ಕೂಡಿ ಬಂದಿರುವುದರಿಂದ ಮೆರವಣಿಗೆಯಲ್ಲಿ ಪುರುಷರಿಗಿಂತಲೂ ಮಹಿಳೆಯರೇ ಹೆಚ್ಚಾಗಿ ಪಾಲ್ಗೊಂಡಿದ್ದು ಕಂಡುಬಂತು.
ಮೆರವಣಿಗೆಯ ದಾರಿಯುದ್ದಕ್ಕೂ ಅನೇಕ ಭಕ್ತರು ಮಹಾ ಪ್ರಸಾದ ವ್ಯವಸ್ಥೆ ಕಲ್ಪಿಸಿದ್ದರೆ, ಇನ್ನೂ ಕೆಲವು ಭಕ್ತರು ತಂಪು ಪಾನೀಯ, ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದರು.