ನಗರಸಭೆ ಹಮ್ಮಿಕೊಂಡಿರುವ ಇ-ಖಾತೆ ಅಭಿಯಾನವನ್ನು ಆಸ್ತಿ ಮಾಲೀಕರು ಸದುಪಯೋಗಪಡಿಸಿಕೊಳ್ಳಬೇಕು. ಜನರ ಏನೇ ಸಮಸ್ಯೆ ಇದ್ದರೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳನ್ನು ಸಂಪರ್ಕಿಸಬೇಕು ಎಂದು ಶಾಸಕ ಡಾ.ಟಿ.ಬಿ.ಜಯಚಂದ್ರ ಹೇಳಿದರು.
ಇ-ಖಾತೆ ಅಭಿಯಾನ ಜನರಿಗಾಗಿ: ಜಯಚಂದ್ರಕನ್ನಡಪ್ರಭ ವಾರ್ತೆ ಶಿರಾ ನಗರಸಭೆ ಹಮ್ಮಿಕೊಂಡಿರುವ ಇ-ಖಾತೆ ಅಭಿಯಾನವನ್ನು ಆಸ್ತಿ ಮಾಲೀಕರು ಸದುಪಯೋಗಪಡಿಸಿಕೊಳ್ಳಬೇಕು. ಜನರ ಏನೇ ಸಮಸ್ಯೆ ಇದ್ದರೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳನ್ನು ಸಂಪರ್ಕಿಸಬೇಕು ಎಂದು ಶಾಸಕ ಡಾ.ಟಿ.ಬಿ.ಜಯಚಂದ್ರ ಹೇಳಿದರು. ಅವರು ಭಾನುವಾರ 10ನೇ ವಾರ್ಡಿನ ಭವಾನಿ ನಗರದ ಅಂಬಾ ಭವಾನಿ ದೇವಸ್ಥಾನದಲ್ಲಿ ನಗರಸಭಾ ಅಧ್ಯಕ್ಷ ಜೀಷಾನ್ ಮೊಹಮದ್ಹು ಟ್ಟುಹಬ್ಬದ ಪ್ರಯುಕ್ತ ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಅಜಯ್ ಕುಮಾರ್ ತಮ್ಮ ವಾರ್ಡಿನಲ್ಲಿ ಏರ್ಪಡಿಸಿದ್ದ ಇ-ಖಾತಾ ಆದೇಶ ಪತ್ರಗಳ ವಿತರಣಾ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಆದೇಶ ಪತ್ರಗಳನ್ನು ವಿತರಿಸಿ ಮಾತನಾಡಿದರು.
ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ಅಧಿಕೃತ ಮತ್ತು ಅನಧಿಕೃತ ಆಸ್ತಿ ಮಾಲೀಕರಿಗೆ ಎ-ಖಾತಾ, ಬಿ-ಖಾತಾ ಪಡೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆದೇಶದಂತೆ ಅವಕಾಶ ನೀಡಲಾಗಿದ್ದು, ಈಗಾಗಲೇ ಶಿರಾ ನಗರಸಭೆಯಲ್ಲಿ ಇ-ಖಾತೆ ಅಭಿಯಾನ ಆರಂಭಿಸಿ ಕಳೆದ ಒಂದು ವರ್ಷದಲ್ಲಿ ಸುಮಾರು 6500 ಕ್ಕೂ ಇ-ಖಾತೆ ಮಾಡಲಾಗಿದೆ. ಸರಕಾರದ ಆದೇಶದಂತೆ ಮನೆ ಬಾಗಿಲಿಗೆ ಬಂದು ಇ-ಖಾತೆ ಪತ್ರಗಳನ್ನು ನೀಡಲಾಗುತ್ತದೆ ಎಂದ ಅವರು ಯಾರು ಸಹ ತಮ್ಮ ಆಸ್ತಿಗಳನ್ನು ಮಾರಾಟ ಮಾಡಬೇಡಿ ಎಂದು ಕಿವಿ ಮಾತು ನುಡಿದರು. ನಗರಸಭೆ ಅಧ್ಯಕ್ಷ ಜೀಷಾನ್ ಮೊಹಮದ್ ಮಾತನಾಡಿ ಶಿರಾ ನಗರಸಭಾ ವ್ಯಾಪ್ತಿಯಲ್ಲಿ ಇ-ಖಾತಾ ಅಭಿಯಾನ ಹಮ್ಮಿಕೊಂಡಿದ್ದು, ಇದಕ್ಕೆ ಸಂಬಂಧಿಸಿದಂತೆ ಸಮಸ್ಯೆಗಳಿದ್ದರೆ ನೇರವಾಗಿ ನನ್ನನ್ನು ಸಂಪರ್ಕಿಸಿ ಎಂದು ತಿಳಿಸಿ ಪ್ರಸ್ತುತ ನಗರ ವಾಣಿಜ್ಯ ಕಟ್ಟಡ ಮಾಲೀಕರು ಸ್ವಯಂ ಪ್ರೇರಿತರಾಗಿ ತಾವು ಬಾಕಿ ಉಳಿಸಿಕೊಂಡಿರುವ ತೆರಿಗೆಯನ್ನು ಪಾವತಿಸಬೇಕು. ನಾವೇ ನಗರಸಭೆ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಭೇಟಿ ನೀಡುತ್ತೇವೆ. ತೆರಿಗೆ ಪಾವತಿಸುವ ಮೂಲಕ ನಗರದ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದ ಅವರು ಪ್ರಸ್ತುತ ಬೇಸಿಗೆ ಕಾಲ ಪ್ರಾರಂಭವಾಗಿದ್ದು, ನಗರದ ಜನತೆ ನೀರನ್ನು ವ್ಯರ್ಥ ಮಾಡದಂತೆ ಉಪಯೋಗಿಸಬೇಕು. ಕಳೆದ ಬಾರಿ ಮಳೆ ಬಾರದಿದ್ದರೂ ಶಾಸಕ ಟಿ.ಬಿ.ಜಯಚಂದ್ರ ಅವರ ಪರಿಶ್ರಮದಿಂದ ಶಿರಾ ದೊಡ್ಡ ಕೆರೆ ಸೇರಿದಂತೆ ತಾಲೂಕಿನಾದ್ಯಂತ ಕೆರೆ ಕಟ್ಟೆಗಳಿಗೆ ನೀರು ಹರಿದಿದೆ. ಇದನ್ನು ಎಚ್ಚರಿಕೆಯಿಂದ ಉಪಯೋಗಿಸಿ ಎಂದರು.ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಹಾಗೂ ಸ್ಥಳೀಯ ವಾರ್ಡಿನ ಸದಸ್ಯ ಅಜಯ್ಕುಮಾರ್ ಮಾತನಾಡಿ ಈ ವಾರ್ಡಿನ ಜನತೆಯ ಸಮಸ್ಯೆ ಏನಿದ್ದರೂ ಪರಿಹರಿಸುತ್ತಿದ್ದೇನೆ. ಇದರಲ್ಲಿ ಎಲ್ಲರಿಗೂ ಇ-ಖಾತೆ ಅಥವಾ ಬಿ-ಖಾತೆ ಮಾಡಿಸಿಕೊಡುವುದು ಹಾಗೂ ನಿವೇಶನ ಇಲ್ಲದವರಿಗೆ ನಿವೇಶನ ದೊರಕಿಸಿ ವಸತಿ ಸೌಕರ್ಯ ಕಲ್ಪಿಸಲು ನಾನು ನಿರಂತರ ಶ್ರಮಿಸುತ್ತೇನೆ ಎಂದರು. ಪೌರಾಯುಕ್ತ ರುದ್ರೇಶ್.ಕೆ. ಮಾತನಾಡಿ ಪ್ರಸ್ತುತ ನಗರಸಭೆ ವತಿಯಿಂದ ಎ-ಖಾತಾ, ಬಿ-ಖಾತಾ ಅಭಿಯಾನ ಆರಂಭಿಸಿದ್ದು ಈಗಾಗಲೇ ನಗರಸಭೆ, ಅಂಬೇಡ್ಕರ್ ಭವನ, ರಂಗನಾಥ ನಗರದ ಸಮುದಾಯ ಭವನ, ರೇಷ್ಮೆ ಇಲಾಖೆ ಕಟ್ಟಡದಲ್ಲಿ ಸಹಾಯವಾಣಿ ಕೇಂದ್ರಗಳನ್ನು ತೆರೆದಿದ್ದು, ಸಾರ್ವಜನಿಕರು ತಮ್ಮ ಸ್ವತ್ತಿನ ಖಾತೆ ಮಾಡಿಸಲು ಯಾರಿಗೂ ಹಣ ನೀಡಬೇಡಿ. ಅಂತಹ ಸಮಸ್ಯೆ ಇದ್ದರೆ ನನ್ನನ್ನು ನೇರವಾಗಿ ಸಂಪರ್ಕಿಸಿ ಎಂದರು. ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಲಾಡರ ಸಂಘದ ರಾಜ್ಯಾಧ್ಯಕ್ಷ ವೆಂಕಟೇಶ್ ಲಾಡ್, ನಗರ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ರೂಪೇಶ್ ಕೃಷ್ಣಯ್ಯ, ಉಪನ್ಯಾಸಕ ಗಂಗಾಧರ್, ಮಾನವ ಬಂಧುತ್ವ ವೇದಿಕೆಯ ಜಿಲ್ಲಾ ಸಂಚಾಲಕ ಧರಣಿ ಕುಮಾರ್, ಕರವೇ ಬಾಬು, ಶ್ರೀ ಅಂಬಾ ಭವಾನಿ ದೇವಸ್ಥಾನ ಸಮಿತಿಯ ವಿಜಯ್ ಕುಮಾರ್, ಗ್ರಾಮಾಂತರ ಯುವ ಕಾಂಗ್ರೆಸ್ ಅಧ್ಯಕ್ಷ ಮಣಿಕಂಠ, ನಗರ ಅಧ್ಯಕ್ಷ ಅಂಜನ್ ಕುಮಾರ್ ಸೇರಿದಂತೆ ಹಲವರು ಹಾಜರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.