ವಿದ್ಯೆ ಅಭ್ಯಾಸಿಗಳ ಸ್ವತ್ತು ಹೊರತು ಸೋಮಾರಿಯದಲ್ಲ: ಚಟ್ನಳ್ಳಿ ಮಹೇಶ್

KannadaprabhaNewsNetwork | Updated : Feb 07 2024, 01:46 AM IST

ಸಾರಾಂಶ

ವಿದ್ಯೆ ಅಭ್ಯಾಸಿಗಳ ಸ್ವತ್ತೆ ಹೊರತು ಸೋಮಾರಿಯದಲ್ಲ. ವಿದ್ಯೆ, ಬುದ್ಧಿ, ಭಾವ, ಆತ್ಮವನ್ನು ವಿಕಸಿತಗೊಳಿಸಬೇಕು ಎಂದು ಸಾಹಿತಿ ಚಟ್ನಳ್ಳಿ ಮಹೇಶ್ ಹೇಳಿದರು.

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುವಿದ್ಯೆ ಅಭ್ಯಾಸಿಗಳ ಸ್ವತ್ತೆ ಹೊರತು ಸೋಮಾರಿಯದಲ್ಲ. ವಿದ್ಯೆ, ಬುದ್ಧಿ, ಭಾವ, ಆತ್ಮವನ್ನು ವಿಕಸಿತಗೊಳಿಸಬೇಕು ಎಂದು ಸಾಹಿತಿ ಚಟ್ನಳ್ಳಿ ಮಹೇಶ್ ಹೇಳಿದರು.ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆ ನಗರದ ಎಐಟಿ ಕಾಲೇಜು ಸಭಾಂಗಣದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ’ವ್ಯಕ್ತಿತ್ವ ವಿಕಸನ’ ಕಾರ್‍ಯಾಗಾರದಲ್ಲಿ ವಿಶೇಷ ಉಪನ್ಯಾಸ ನೀಡಿದರು. ಪರಿಶ್ರಮ, ತರಬೇತಿ, ಸತತ ಅಭ್ಯಾಸ, ಮನನ ಪ್ರಕ್ರಿಯೆಯಿಂದ ವಿದ್ಯೆಯನ್ನು ನಮ್ಮದಾಗಿಸಿಕೊಳ್ಳಬಹುದು. ಸರ್ವಾಂಗೀಣ ವಿಕಾಸಕ್ಕೆ ವಿದ್ಯೆ ಸಹಕಾರಿಯಾಗಬೇಕು. ಆದರೆ ಇಂದು ಓದು ನಿರೀಕ್ಷಿತ ಗುರಿ ಮುಟ್ಟಿದೆಯಾ ಎಂದು ಪ್ರಶ್ನಿಸಿಕೊಂಡಾಗ ನಿರಾಸೆಯಾಗುತ್ತದೆ. ಅಕ್ಷರವಂತರ, ಪದವೀಧರರ ಸಂಖ್ಯೆ ಎಲ್ಲೆಡೆ ಹೆಚ್ಚುತ್ತಿದೆ. ಅದೇ ರೀತಿ ಸಮಾಜದಲ್ಲಿ ಅನ್ಯಾಯ, ಅನೀತಿ, ದೌರ್ಜನ್ಯ, ಅಸಹನೆಯೂ ವಿಪರೀತವಾಗುತ್ತಿದೆ. ನಾವು ಕೊಡುತ್ತಿರುವ ಶಿಕ್ಷಣ ಏನಾಗುತ್ತಿದೆ ಎಂಬುದು ವಿಮರ್ಶೆಗೊಳಪಡಿಸುವ ಅನಿವಾರ್‍ಯತೆ ಇದೆ ಎಂದರು. ಶಿಕ್ಷಣ ಮನಸ್ಸನ್ನು ಅರಳಿಸುವುದರೊಂದಿಗೆ ಪ್ರೀತಿ, ವಿಶ್ವಾಸ, ತ್ಯಾಗ, ಸದ್ಭಾವ, ಸಹಕಾರ, ಕರುಣೆಯಂತಹ ಮೌಲ್ಯಗಳನ್ನು ಕಟ್ಟಿಕೊಟ್ಟಾಗ ಮಾತ್ರ ಆರೋಗ್ಯಪೂರ್ಣ ಸಮಾಜ ನಮ್ಮದಾಗುತ್ತದೆ. ಬಾಲ್ಯ ಮತ್ತು ತಾರುಣ್ಯದಲ್ಲಿ ಎಲ್ಲರೂ ಓದಿನ ಕಡೆಗೆ ಹೆಚ್ಚಿನ ಗಮನಕೊಡಬೇಕು. ಪರಿಶ್ರಮವಿಲ್ಲದೆ ಯಾವುದೂ ದಕ್ಕುವುದಿಲ್ಲ ಎಂದರು.ಇತಿಹಾಸ ಓದುವುದು ಇಸ್ವಿಗಳನ್ನು ನೆನಪಿಟ್ಟುಕೊಳ್ಳಲು ಅಲ್ಲ, ಇತಿಹಾಸ ನಿರ್ಮಿಸಲು. ವಿಜ್ಞಾನ ಕಲಿಯುವುದು ವಿನಾಶಕ್ಕಲ್ಲ, ವಿಕಾಸಕ್ಕೆ ಎಂಬುದನ್ನು ಮರೆಯಬಾರದು. ಉನ್ನತ ಶಿಕ್ಷಣ ಪಡೆದವರು ಇಂದು ದುಷ್ಕೃತ್ಯದಲ್ಲಿ ಪಾಲ್ಗೊಳ್ಳುತ್ತಿರುವುದು ದುರ್ದೈವ ಸಂಗತಿ. ಆಂತರಿಕ ಮತ್ತು ಬಹಿರಂಗ ವಿಕಾಸಕ್ಕೆ ಕಲಿಕೆ ಪ್ರೇರಕ ಪೂರಕ ವಾಗಬೇಕೆಂದು ಹೇಳಿದರು. ಪ್ರತಿಯೊಬ್ಬ ನೌಕರನು ತನ್ನ ಸೇವಾವಧಿಯ ಪ್ರಮುಖ ಘಟನೆ, ಅನುಭವಗಳನ್ನು ದಾಖಲಿಸಿದರೆ ಮುಂದಿನವರಿಗೆ ಮಾರ್ಗದರ್ಶಿಯಾಗುತ್ತದೆ. ಬರುವ ಅರ್ಜಿಯನ್ನು ಹೃದಯದಿಂದ ನೋಡಿ ಕಾನೂನನ್ನು ಬಳಸಿಕೊಂಡು ಹೇಗೆ ಸಹಾಯ ಮಾಡಬೇಕು ಎಂದು ಆಲೋಚಿಸಬೇಕೆ ಹೊರತು, ಕೊಕ್ಕೆಹಾಕುವ ಅಭ್ಯಾಸ ಒಳ್ಳೆಯದಲ್ಲ ಎಂದು ಕಿವಿಮಾತು ಹೇಳಿದ ಚಟ್ನಳ್ಳಿ ಮಹೇಶ್, ದೊರೆತ್ತಿರುವ ಅವಕಾಶವನ್ನು ಜನಸೇವೆಗೆ ಸಾರ್ಥಕ ಪಡಿಸಿಕೊಂಡರೆ ಒಳಿತು. ನಗುಮುಖ ಮತ್ತು ಮೃದುಮಾತು ದೀರ್ಘಾವಧಿ ಬಿಟ್ಟು ಹೋಗಬಹುದೆಂದರು. ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ದೇವೇಂದ್ರ ಅಧ್ಯಕ್ಷತೆ ವಹಿಸಿದ್ದರು. ಎಐಟಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಸಿ.ಟಿ. ಸುಬ್ರಾಯ, ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ, ರಾಜ್ಯ ಸಂಘದ ಪದಾಧಿಕಾರಿ ಗಳಾದ ಶ್ರೀನಿವಾಸ ತಿಮ್ಮೇಗೌಡ, ರುದ್ರಪ್ಪ, ವೆಂಕಟೇಶ್, ಮೋಹನ್, ಹಾಸನ ಜಿಲ್ಲಾಧ್ಯಕ್ಷ ಕೃಷ್ಣೇಗೌಡ, ಚಿಕ್ಕಮಗಳೂರು ಜಿಲ್ಲಾಶಾಖೆಯ ಗೌರವಾಧ್ಯಕ್ಷ ಮಂಜುನಾಥಸ್ವಾಮಿ, ಕಾರ್‍ಯಾಧ್ಯಕ್ಷ ದೇವಾನಂದ, ಪದಾಧಿಕಾರಿಗಳಾದ ಮಾರುತಿ ಪ್ರಸಾದ್, ಡಾ.ಜಗದೀಶ್, ಪೂರ್ಣೇಶ್ ಉಪಸ್ಥಿತರಿದ್ದರು. 5 ಕೆಸಿಕೆಎಂ 3ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆ ಚಿಕ್ಕಮಗಳೂರಿನ ಎಐಟಿ ಕಾಲೇಜು ಸಭಾಂಗಣದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ’ವ್ಯಕ್ತಿತ್ವ ವಿಕಸನ’ ಕಾರ್‍ಯಾಗಾರದಲ್ಲಿ ಸಾಹಿತಿ ಚಟ್ನಳ್ಳಿ ಮಹೇಶ್‌ ಅವರು ವಿಶೇಷ ಉಪನ್ಯಾಸ ನೀಡಿದರು.

Share this article