ಕುಷ್ಟಗಿ: ಶಿಕ್ಷಣವು ವ್ಯಕ್ತಿಯ ಜೀವನ ರೂಪಿಸುವ ಶಕ್ತಿಯಾಗಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಯೂ ಉನ್ನತ ಗುರಿ ಹೊಂದಿ ಸಾಧನೆ ಮಾಡುವತ್ತ ಗಮನ ಹರಿಸಬೇಕು ಎಂದು ಮಾಜಿ ಸಚಿವ ಅಮರೇಗೌಡ ಪಾಟೀಲ ಬಯ್ಯಾಪುರ ಹೇಳಿದರು.
ವಿದ್ಯಾರ್ಥಿಗಳು ಕೇವಲ ಪಾಠ, ಪುಸ್ತಕಗಳಿಗೆ ಸೀಮಿತವಾಗದೆ ಉತ್ತಮ ಸಂಸ್ಕಾರ, ಶಿಸ್ತು ಹಾಗೂ ಸಾಮಾಜಿಕ ಹೊಣೆಗಾರಿಕೆ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಶಿಕ್ಷಣದಿಂದ ಮಾತ್ರ ಮನುಷ್ಯನ ಸರ್ವತೋಮುಖ ವ್ಯಕ್ತಿತ್ವ ಬೆಳವಣಿಗೆ ಸಾಧ್ಯ, ಪ್ರತಿಯೊಬ್ಬರು ಬದುಕು ಬದಲಾಗಲು ಶಿಕ್ಷಣ ಅವಶ್ಯ, ಪ್ರತಿಯೊಂದು ಸಮಾಜ ಕಾಡುತ್ತಿರುವ ಸಾಮಾಜಿಕ ರೋಗಗಳಾದ ಮೌಢ್ಯ,ಅಂಧ ಶ್ರದ್ಧೆ, ಬಡತನ ನಿರುದ್ಯೋಗ ಅನಕ್ಷರತೆಗೆ ಶಿಕ್ಷಣ ಮದ್ದಾಗಬಲ್ಲದು ಎಂದರು.ತುಂಗಭದ್ರಾ ಕಾಡಾ ನಿಗಮ ಅಧ್ಯಕ್ಷ ಹಸನಸಾಬ್ ದೊಟಿಹಾಳ ಮಾತನಾಡಿ, ಸಮಾಜದ ಅಭಿವೃದ್ಧಿಯು ಪ್ರಜ್ಞಾವಂತ ನಾಗರಿಕರನ್ನು ಅವಲಂಬಿಸಿದೆ. ಪ್ರತಿಯೊಬ್ಬರು ತಮ್ಮ ಭವಿಷ್ಯ ತಾವೇ ರೂಪಿಸಿಕೊಳ್ಳುವ ಅತ್ಯುತ್ತಮ ಶಿಕ್ಷಣ ಪಡೆದುಕೊಳ್ಳುವುದರ ಜತೆಗೆ ಸಮಾಜ, ದೇಶದ ಸೇವೆಯ ಮೂಲಕ ಉತ್ತಮ ನಾಗರಿಕರಾಗಿ ಹೊರಹೊಮ್ಮುವಲ್ಲಿ ಶಿಕ್ಷಣದ ಅವಶ್ಯಕತೆ ಇದೆ ಎಂದರು.
ಜಾನಪದ ವಿದ್ವಾಂಸ ಡಾ.ಇಮಾಮ್ ಸಾಹೇಬ್ ಹಡಗಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಅವರು, ಓದು ಬದುಕನ್ನು ಸಾರ್ಥಕಗೊಳಿಸಬೇಕು. ಉತ್ತಮ ಓದು ಒಳ್ಳೆಯ ನಾಗರಿಕರನ್ನು ರೂಪಿಸುವ ಶಕ್ತಿ ಪಡೆದಿದೆ, ಸಮಾಜಕ್ಕೆ ದೇಶಕ್ಕೆ ಒಳ್ಳೆಯ ನಾಗರಿಕತ್ವದ ಅವಶ್ಯಕತೆ ಇದೆ, ಹತ್ತನೇ ತರಗತಿ ನಂತರ ವಿಜ್ಞಾನ ವಿಭಾಗ ನಿಮ್ಮ ಮೊದಲ ಆಯ್ಕೆಯಾಗಬೇಕು.ಎಂಬಿಬಿಎಸ್ ಬಿಟ್ಟರೆ ಎನ್ ಡಿ ಎ , ಏರ್ ಫೋರ್ಸ್, ಆರ್ಮಿ,ಅಗ್ರಿ, ನರ್ಸಿಂಗ್ ಕೋರ್ಸುಗಳಿಗೂ ಡಿಮ್ಯಾಂಡ್ ಇದೆ. ಒಂದನ್ನೇ ನಂಬಿ ಸಮಯ ವ್ಯರ್ಥ ಮಾಡದೇ ಬೇರೆ ಬೇರೆ ಆಯಾಮಗಳಲ್ಲಿ ಓದಿನ ಜತೆ ಬದುಕನ್ನು ಕಟ್ಟುವ ಇಂತಹ ಕೊರ್ಸುಗಳ ಕಡೆ ಗಮನ ಹರಿಸಬೇಕು.ಸ್ಪರ್ಧಾತ್ಮಕ ಯುಗದಲ್ಲಿ ಬಹುಮುಖ ದೃಷ್ಟಿ ಕೋನದ ಓದು ಅಗತ್ಯವಿದೆ ಎಂದರು.
ಈ ಸಂದರ್ಭದಲ್ಲಿ ಫಾದರ್ ಜಾನ್ ಪೀಟರ್, ಬಿಇಓ ಉಮಾದೇವಿ ಬಸಾಪುರ್, ಡಾ.ಸಜ್ಜಾದು ಹುಸೇನ್, ಎಚ್.ಎಚ್.ಉಸ್ತಾದ್, ಸೈಯದ್ ಕಾಜಮನುದ್ದೀನ್, ಎಚ್.ಆರ್.ಸೇಕ್, ಮೌಲಾನಾ ಫಝಿಲಾ ಅಜೀಮ್, ಮೌಲಾನಾ ಅಹ್ಮದ್ ಹುಸೇನ್, ಮೌಲಾನ ರಿಜ್ವಾನ್ಸಾಬ್, ಮೌಲಾನಾ ಜಾಫರ್ ಸಾಧಿಕ್ ಇತರರು ಉಪಸ್ಥಿತರಿದ್ದರು. ಜೀವನಸಾಬ್ ವಾಲಿಕಾರ್ ನಿರೂಪಿಸಿ ವಂದಿಸಿದರು.