ಕನ್ನಡಪ್ರಭ ವಾರ್ತೆ ತಿಪಟೂರು
ಸಾಮಾಜಿಕ ಪಿಡುಗುಗಳಲ್ಲೊಂದಾದ ಬಾಲಕಾರ್ಮಿಕ ಪದ್ದತಿ ನಿರ್ಮೂಲನೆಯಾಗಬೇಕಾದರೆ ಶಿಕ್ಷಣವೆ ಮೂಲ ಅಸ್ತ್ರವಾಗಿದ್ದು, ಪೋಷಕರು ತಮ್ಮ ಮಕ್ಕಳನ್ನು ಶಿಕ್ಷಣವಂತರನ್ನಾಗಿಸಿ ಪಿಡುಗುಗಳ ನಿರ್ಮೂಲನೆಗೆ ಮುಂದಾಗಬೇಕೆಂದು ಪ್ರಧಾನ ಸಿವಿಲ್ ನ್ಯಾಯಾಧೀಶರು ಕೆ.ಎಸ್. ಭರತ್ ಚಂದ್ರ ತಿಳಿಸಿದರು.ನಗರದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ಕಾನೂನು ಸೇವಾ ಸಮಿತಿ, ತಾಲೂಕು ವಕೀಲರ ಸಂಘ, ಸಾಕ್ಷರತಾ ಇಲಾಖೆ ವತಿಯಿಂದ ಆಯೋಜಿಸಿದ್ದ ವಿಶ್ವ ಬಾಲಕಾರ್ಮಿಕ ವಿರೋಧಿ ದಿನಾಚರಣೆ ಮತ್ತು ತಂಬಾಕು ನಿ?ಧ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಾರತ ಸಂವಿಧಾನದಲ್ಲಿ ಮೂಲಭೂತ ಹಕ್ಕು ಮತ್ತು ಕರ್ತವ್ಯಗಳು ಒಂದೇ ನಾಣ್ಯದ ಎರಡು ಮುಖಗಳಂತೆ. ಮೂಲಭೂತ ಹಕ್ಕುಗಳಲ್ಲಿ ಶಿಕ್ಷಣದ ಹಕ್ಕನ್ನು ಮಕ್ಕಳಿಗಾಗಿ ನೀಡಿದ್ದು 6 ರಿಂದ 14 ವರ್ಷದೊಳಗಿನ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ವ್ಯವಸ್ಥೆಯನ್ನು ನಮ್ಮ ಸಂವಿಧಾನ ಕಲ್ಪಿಸಿದೆ. ಇದನ್ನು ಯುಕ್ತವಾಗಿ ಬಳಸಿಕೊಳ್ಳಬೇಕೆ ವಿನಹ ಸಾಮಾಜಿಕ ಪಿಡುಗುಗಳಾದ ಬಾಲ ಕಾರ್ಮಿಕ ಪದ್ಧತಿ, ಬಾಲ್ಯ ವಿವಾಹ ಪದ್ಧತಿ ಇನ್ನಿತರೆ ಅನಿಷ್ಠ ಪದ್ದತಿಗಳಿಗೆ ಒಳಗಾಗಬಾರದು. ಮಕ್ಕಳು ವಿವಿಧ ರೀತಿಯ ಅಪಾಯಕಾರಿ ಸ್ಥಳಗಳಲ್ಲಿ ಅನೇಕ ಕಾರ್ಖಾನೆಗಳಲ್ಲಿ ದುಡಿಯುವ 14 ವರ್ಷ ಒಳಪಟ್ಟ ಮಕ್ಕಳನ್ನು ಬಾಲಕಾರ್ಮಿಕರು ಎಂದು ಕರೆಯಲಾಗುತ್ತದೆ. ಕಾರ್ಮಿಕ ನಿರೀಕ್ಷಕರು ಇಂತಹ ಸ್ಥಳಗಳಿಗೆ ಭೇಟಿ ನೀಡಿ ಬಾಲಕಾರ್ಮಿಕರು ಕೆಲಸ ಮಾಡುತ್ತಿರುವುದನ್ನು ಖಚಿತ ಪಡಿಸಿಕೊಂಡು ಅಂತಹವರ ವಿರುದ್ಧ ಪ್ರಕರಣ ದಾಖಲಿಸಬೇಕು. ಪೋಷಕರು ತಮ್ಮ ಮಕ್ಕಳನ್ನು ಉನ್ನತ ಶಿಕ್ಷಣ ಕೊಡಿಸುವ ಮೂಲಕ ವಿದ್ಯಾವಂತರನ್ನಾಗಿ ಮಾಡಿದರೆ ಭವಿಷ್ಯ ಉಜ್ವಲವಾಗಲಿದೆ. ಬಾಲಕಾರ್ಮಿಕ ಪದ್ದತಿ ಕಂಡು ಬಂದರೆ ಸಹಾಯವಾಣಿಗೆ ಮಾಹಿತಿ ತಿಳಿಸಬೇಕು ಎಂದರು. ತಾಲೂಕು ವಕೀಲರ ಸಂಘ ಅಧ್ಯಕ್ಷ ಬಿ.ಎನ್. ಅಜಯ್ ಮಾತನಾಡಿ ನಮ್ಮ ಸಂವಿಧಾನವು ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಜಾರಿಗೆ ತಂದಿದ್ದು, ಇದನ್ನು ಬಳಸಿಕೊಳ್ಳಬೇಕು ಪ್ರಮುಖವಾಗಿ ಬಾಲಕಾರ್ಮಿಕರು ಬಣ್ಣದ ಅಂಗಡಿಗಳು, ಗ್ಯಾರೇಜ್, ಹೋಟೆಲ್ ಇತರೆ ಅಂಗಡಿ ಮುಂಗಟ್ಟುಗಳಲ್ಲಿ ದುಡಿಯುತ್ತಿದ್ದು ಇದನ್ನು ಕಂಡ ಕೂಡಲೇ ಸಂಬಂಧಪಟ್ಟ ಇಲಾಖೆಗಳಿಗೆ ಮಾಹಿತಿ ನೀಡಬೇಕೆಂದು ತಿಳಿಸಿದರು. ತಾಲೂಕು ವಕೀಲರ ಸಂಘದ ಕಾರ್ಯದರ್ಶಿ ಬಿ.ಮಲ್ಲಿಕಾರ್ಜುನಯ್ಯ. ಮಾತನಾಡಿ 14 ವರ್ಷಕ್ಕಿಂತ ಕಡಿಮೆ ವಯಸ್ಸುಳ್ಳ ಬಾಲಕಾರ್ಮಿಕರನ್ನು ದುಡಿಸಿಕೊಳ್ಳುವ ವರ್ಗಕ್ಕೆ ಒಂದು ಲಕ್ಷದವರೆಗೆ ದಂಡ ಹಾಗೂ ಆರು ತಿಂಗಳ ಸಜೆ ವಿಧಿಸುತ್ತದೆ. ಯುವ ಜನತೆ ಪ್ರಸ್ತುತ ಅನೇಕ ಬಿಡಿ, ಸಿಗರೇಟ್, ಗುಟ್ಕಾ ಸೇವನೆಯಿಂದ ಕ್ಯಾನ್ಸರ್, ಅಸ್ತಮಾದಂತಹ ಕಾಯಿಲೆಗಳಿಗೆ ತುತ್ತಾಗುತ್ತಿದ್ದು, ಕೆಟ್ಟ ಚಟಗಳನ್ನು ಬಿಟ್ಟು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕೆಂದರು. ಪ್ರಾಂಶುಪಾಲ ಎಂ.ಡಿ. ಶಿವಕುಮಾರ್ ಮಾತನಾಡಿ ಪ್ರಸ್ತುತ 1.6 ಕೋಟಿ ಮಕ್ಕಳು ಬಾಲಕಾರ್ಮಿಕರಿದ್ದು ಅವರು ಅಪಾಯಕಾರಿ ಸ್ಥಳಗಳಾದ ಪಟಾಕಿ, ಬಣ್ಣ ಹಾಗೂ ಇತರೆ ಹೋಟೆಲ್ಗಳಲ್ಲಿ ಕೆಲಸ ಮಾಡುತ್ತಿದ್ದು, ಸಂಬಂಧಪಟ್ಟ ಇಲಾಖೆಗೆ ದೂರು ನೀಡಬೇಕು. ಹೊಗೆ ಸೊಪ್ಪು ಅಪಾಯಕಾರಿ ಪದಾರ್ಥಗಳಲ್ಲಿ ಒಂದಾಗಿದ್ದು, ಇದರಿಂದ ಬಾಯಿ ಕ್ಯಾನ್ಸರ್ ನಂತಹ ಮಾರಣಾಂತಿಕ ಕಾಯಿಲೆಗಳು ಬರುತ್ತಿದ್ದು, ದೇಶದ ಯುವಶಕ್ತಿ ದುಶ್ಚಟಗಳಿಗೆ ತುತ್ತಾಗದಂತೆ ಎಚ್ಚೆತ್ತುಕೊಳ್ಳಬೇಕೆಂದರು. ಕಾರ್ಯಕ್ರಮದಲ್ಲಿ ಉಪ ಪ್ರಾಂಶುಪಾಲ ಉಮೇಶ್ ಗೌಡ ಸೇರಿದಂತೆ ಉಪನ್ಯಾಸಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.