ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ದೇವಾಲಯ ಪ್ರವೇಶಿಸಿದ ಪರಿಶಿಷ್ಟ ಸಮುದಾಯದವರು

KannadaprabhaNewsNetwork | Published : Jun 17, 2025 11:47 PM

ಲಕ್ಕಸಂದ್ರದಲ್ಲಿರುವ ಮುಜರಾಯಿ ಇಲಾಖೆ ವ್ಯಾಪ್ತಿಗೆ ಸೇರಿರುವ ಮಾಯಮ್ಮ ದೇವಿ ಮತ್ತು ಬಸವೇಶ್ವರ ದೇವಾಲಯಗಳಿಗೆ ಗ್ರಾಮದ ಪರಿಶಿಷ್ಟ ಸಮುದಾಯದವರು ತಹಸೀಲ್ದಾರ್ ತೇಜಸ್ವಿನಿ ನೇತೃತ್ವದಲ್ಲಿ ಪ್ರವೇಶಿಸಿದರು.

ಕನ್ನಡಪ್ರಭ ವಾರ್ತೆ ರಾಮನಗರ

ತಾಲೂಕಿನ ಸುಗ್ಗನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಕ್ಕಸಂದ್ರದಲ್ಲಿರುವ ಮುಜರಾಯಿ ಇಲಾಖೆ ವ್ಯಾಪ್ತಿಗೆ ಸೇರಿರುವ ಮಾಯಮ್ಮ ದೇವಿ ಮತ್ತು ಬಸವೇಶ್ವರ ದೇವಾಲಯಗಳಿಗೆ ಗ್ರಾಮದ ಪರಿಶಿಷ್ಟ ಸಮುದಾಯದವರು ತಹಸೀಲ್ದಾರ್ ತೇಜಸ್ವಿನಿ ನೇತೃತ್ವದಲ್ಲಿ ಪ್ರವೇಶಿಸಿ, ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು.ಗ್ರಾಮದಲ್ಲಿರುವ ಒಕ್ಕಲಿಗ ಸಮುದಾಯದವರು ಪರಿಶಿಷ್ಟರಿಗೆ ದೇವಾಲಯಕ್ಕೆ ಪ್ರವೇಶ ನೀಡುತ್ತಿಲ್ಲ ಎಂದು ಆರೋಪಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ (ಅಂಬೇಡ್ಕರ್ ವಾದ) ಜಿಲ್ಲಾ ಪ್ರಧಾನ ಸಂಚಾಲಕ ಪಿ. ಪುನೀತ್ ರಾಜ್ ರವರು ತಹಸೀಲ್ದಾರ್, ಸಮಾಜ ಕಲ್ಯಾಣ ಇಲಾಖೆ ಹಾಗೂ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯಕ್ಕೆ (ಡಿಸಿಆರ್‌ಇ) ಜೂನ್ 14ರಂದು ದೂರು ಕೊಟ್ಟಿದ್ದರು.

ಈ ದೂರಿನ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಪೊಲೀಸರು, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಗೂ ದಲಿತ ಮುಖಂಡರೊಂದಿಗೆ ಗ್ರಾಮಕ್ಕೆ ಬೆಳಿಗ್ಗೆ ಭೇಟಿ ನೀಡಿದ ತಹಸೀಲ್ದಾರ್, ಗ್ರಾಮದಲ್ಲಿ ಎರಡೂ ಸಮುದಾಯದವರ ಜೊತೆ ಶಾಂತಿಸಭೆ ನಡೆಸಿದರು. ಈ ವೇಳೆ, ಒಕ್ಕಲಿಗ ಸಮುದಾಯದ ಬೆರಳೆಣಿಕೆಯ ಮಂದಿ ಮಾತ್ರ ಇದ್ದರು.

ಸಭೆ ಬಳಿಕ ಅರ್ಚಕರನ್ನು ಕರೆಯಿಸಿ ದೇವಾಲಯದ ಬಾಗಿಲು ತೆಗೆಸಿದ ತಹಸೀಲ್ದಾರ್, ಪರಿಶಿಷ್ಟರಿಗೆ ಒಳಕ್ಕೆ ಪ್ರವೇಶ ಕಲ್ಪಿಸಿದರು. ಇನ್ನು ಮುಂದೆ ಯಾರೇ ಬಂದರೂ ಪ್ರವೇಶಕ್ಕೆ ಅಡ್ಡಿಪಡಿಸದೆ ದರ್ಶನಕ್ಕೆ ವ್ಯವಸ್ಥೆ ಮಾಡಬೇಕು. ಯಾವುದೇ ತಾರತಮ್ಯ ಮಾಡದೆ ಎಲ್ಲರೂ ಸೌಹಾರ್ದ ಮತ್ತು ಸಹಬಾಳ್ವೆಯಿಂದ ಬದುಕಬೇಕು. ಅಸ್ಪೃಶ್ಯತೆ ಆಚರಣೆ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಡಾ. ಕುಮಾರ್, ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ರಮೇಶ್, ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯರಾದ ಚಲುವರಾಜು, ರಾಮಕೃಷ್ಣಯ್ಯ, ರಮೇಶ್, ದಲಿತ ಮುಖಂಡ ಗುಡ್ಡೆ ವೆಂಕಟೇಶ್, ಕಂದಾಯ ಇಲಾಖೆ, ಡಿಸಿಆರ್‌ಇ, ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಜರಿದ್ದರು.17ಕೆಆರ್ ಎಂಎನ್ 4.ಜೆಪಿಜಿ

ರಾಮನಗರ ತಾಲೂಕಿನ ಲಕ್ಕಸಂದ್ರದಲ್ಲಿರುವ ಮುಜರಾಯಿ ಇಲಾಖೆ ವ್ಯಾಪ್ತಿಗೆ ಸೇರಿರುವ ಮಾಯಮ್ಮ ದೇವಿ ಮತ್ತು ಬಸವೇಶ್ವರ ದೇವಾಲಯಕ್ಕೆ ಗ್ರಾಮದ ಪರಿಶಿಷ್ಟ ಸಮುದಾಯದವರು ತಹಸೀಲ್ದಾರ್ ತೇಜಸ್ವಿನಿ ನೇತೃತ್ವದಲ್ಲಿ ಪ್ರವೇಶಿಸಿದರು.