ಚುನಾವಣೆ ಬಹಿಷ್ಕಾರ: ಭಾನುವಳ್ಳಿ ನಾಯಕರ ಘೋಷಣೆ

KannadaprabhaNewsNetwork |  
Published : Apr 28, 2024, 01:25 AM IST
27ಕೆಡಿವಿಜಿ3-ದಾವಣಗೆರೆಯಲ್ಲಿ ಹರಿಹರ ತಾ. ಭಾನುವಳ್ಳಿ ಗ್ರಾಮದ ನಾಯಕ ಸಮಾಜದ ಮುಖಂಡ ಪುಟ್ಟಪ್ಪ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ದಾವಣಗೆರೆಯಲ್ಲಿ ಹರಿಹರ ತಾ. ಭಾನುವಳ್ಳಿ ಗ್ರಾಮದ ನಾಯಕ ಸಮಾಜದ ಮುಖಂಡ ಪುಟ್ಟಪ್ಪ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಎರಡೂವರೆ ದಶಕದಷ್ಟು ಹಳೆಯ ಶ್ರೀ ರಾಜವೀರ ಮದಕರಿ ನಾಯಕರ ಮಹಾದ್ವಾರ ಹಾಗೂ ಶ್ರೀ ಮಹರ್ಷಿ ವಾಲ್ಮೀಕಿ ವೃತ್ತವನ್ನು ಕಾನೂನು ಬಾಹಿರವಾಗಿ ತೆರವುಗೊಳಿಸಿದ್ದನ್ನು ಖಂಡಿಸಿ ಮೇ.7ರಂದು ದಾವಣಗೆರೆ ಲೋಕಸಭೆ ಚುನಾವಣೆ ಬಹಿಷ್ಕರಿಸುವುದಾಗಿ ಹರಿಹರ ತಾ.ಭಾನುವಳ್ಳಿ ಗ್ರಾಮದ ನಾಯಕ ಸಮಾಜ ಎಚ್ಚರಿಸಿದೆ.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಾಜದ ಮುಖಂಡ ಪುಟ್ಟಪ್ಪ, ಭಾನುವಳ್ಳಿ ಗ್ರಾಮದಲ್ಲಿ 1999ರಲ್ಲಿ ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಶಿವಪ್ಪ ಹಾಗೂ ಸಮಾದ ಹಿರಿಯ ಗುರುಗಳಾದ ಲಿಂಗೈಕ್ಯ ಶ್ರೀ ಪುಣ್ಯಾನಂದ ಪುರಿ ಸ್ವಾಮೀಜಿ ಜಿಪಂ ಪರಿಶಿಷ್ಟರ ಅನುದಾನದಲ್ಲಿ ರಾಜವೀರ ಮದಕರಿ ನಾಯಕ ಮಹಾದ್ವಾರ ಹಾಗೂ ಮಹರ್ಷಿ ವಾಲ್ಮೀಕಿ ವೃತ್ತ ನಿರ್ಮಿಸಿ, ಶಿಲಾನ್ಯಾಸ ನೆರವೇರಿಸಿದ್ದರು ಎಂದರು.

ಆದರೆ, ಗ್ರಾಮದ ಹಾಲುಮತ ಸಮಾಜದ ಕೆಲ ಕಿಡಿಗೇಡಿಗಳು 7.11.2023ರಂದು ಸಂಗೊಳ್ಳಿ ರಾಯಣ್ಣ ಪುತ್ಥಳಿ ಪ್ರತಿಷ್ಠಾಪಿಸಲು ಪ್ರಯತ್ನಿಸಿದ್ದಾರೆ. ಆಗ ನಮ್ಮ ಸಮಾಜದಿಂದ ಸಂಬಂಧಿಸಿದ ಎಲ್ಲಾ ಇಲಾಖೆಗೂ ಮಾಹಿತಿ ನೀಡಿ, ಊರಿನಲ್ಲಿ ಶಾಂತಿ ಸ್ಥಾಪಿಸುವಂತೆ ಮನವಿ ಮಾಡುತ್ತಾ ಬಂದಿದ್ದೇವೆ. ಪೊಲೀಸ್ ಇಲಾಖೆ, ಜಿಲ್ಲಾಡಳಿತದ ಅಧಿಕಾರಿಗಳು ನಮ್ಮ ಯಾವುದೇ ಮಾತನ್ನು ಗಣನೆಗೆ ತೆಗೆದುಕೊಳ್ಳದೇ, 9.1.2024ರ ಮಧ್ಯರಾತ್ರಿ ರಾಯಣ್ಣ ಪುತ್ಥಳಿ ಪ್ರತಿಷ್ಠಾಪಿಸಲಾಗಿದೆ. ಈ ಬಗ್ಗೆ ಡಿಸಿಗೆ ಮನವಿ ಮಾಡಿ, ಹೋರಾಟ ನಡೆಸಿದರೂ ಸ್ಪಂದಿಸಿಲ್ಲ ಎಂದು ದೂರಿದರು.

ಜಿಲ್ಲಾಡಳಿತವು ಈಚೆಗೆ ಮತ್ತೊಂದು ಸಮುದಾಯದ ಮಾತು ಕೇಳಿ, ಮದಕರಿ ನಾಯಕ ಮಹಾದ್ವಾರ, ವಾಲ್ಮೀಕಿ ವೃತ್ತ ತೆರವುಗೊಳಿಸುವ ಮೂಲಕ ಪರಿಶಿಷ್ಟ ಪಂಗಡದ ನಾಯಕ ಸಮಾಜಕ್ಕೆ ತೀವ್ರ ಅವಮಾನ ಮಾಡಿದೆ. ಸುಮಾರು 16 ದಿನಗಳ ಕಾಲ ಭಾನುವಳ್ಳಿ ಗ್ರಾಮದ ಮಹರ್ಷಿ ವಾಲ್ಮೀಕಿ ವೃತ್ತದಲ್ಲಿ ಸಮಾಜ ಬಾಂಧವರು ಪ್ರತಿಭಟನಾ ಧರಣಿ ನಡೆಸಿದ್ದು, 1999ರ ದಾಖಲೆ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಸಹ ಒಂದು ಸಮುದಾಯದ ಮಾತು ಕೇಳುತ್ತಿದ್ದು, ಈ ಹಿನ್ನೆಲೆ ಲೋಕಸಭೆ ಚುನಾವಣೆ ಬಹಿಷ್ಕರಿಸುತ್ತಿದ್ದೇವೆ ಎಂದು ಎಚ್ಚರಿಸಿದರು.

ಜಿಲ್ಲಾಧಿಕಾರಿಗಳು ಲಿಖಿತವಾಗಿ ಮತ್ತೆ ಭಾನುವಳ್ಳಿಯಲ್ಲಿ ಮದಕರಿ ನಾಯಕ ಮಹಾದ್ವಾರ ಹಾಗೂ ಮಹರ್ಷಿ ವಾಲ್ಮೀಕಿ ವೃತ್ತ ಮರು ಸ್ಥಾಪಿಸುವುದಾಗಿ ಭರವಸೆ ನೀಡಿದರೆ ಮಾತ್ರ ನಾವು ಮತದಾನಕ್ಕೆ ಮನಸ್ಸು ಮಾಡಬಹುದು. ಇಲ್ಲವಾದರೆ, ನಾವು ಯಾವುದೇ ಕಾರಣಕ್ಕೂ ಮೇ.7ರಂದು ಲೋಕಸಭೆ ಚುನಾವಣೆಯಲ್ಲಿ ಮತ ಚಲಾಯಿಸುವುದಿಲ್ಲ ಎಂದು ಪುಟ್ಟಪ್ಪ ಸ್ಪಷ್ಟಪಡಿಸಿದರು.

ಭಾನುವಳ್ಳಿ ಕರಿಯಪ್ಪ, ರಂಗಸ್ವಾಮಿ, ನಾರಾಯಣಪ್ಪ ದೊಡ್ಮನಿ, ಅಜಯಕುಮಾರ, ನಾಗಪ್ಪ, ಮಹಾಂತೇಶ ಇತರರು ಇದ್ದರು.

PREV

Recommended Stories

ಗುತ್ತಲದಲ್ಲಿ ಸಂಭ್ರಮದ ವೀರಭದ್ರೇಶ್ವರ ಜಾತ್ರಾ ಮಹೋತ್ಸವ
ಹಳಿಯಾಳದ ಮೆಕ್ಕೆಜೋಳದಲ್ಲಿ ಕೀಟನಾಶಕಗಳ ಪ್ರಮಾಣ ಅಧಿಕ