ತುಮಕೂರು: ಲೋಕಸಭಾ ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಡಿ ಜಿಲ್ಲೆಯಲ್ಲಿ ಮಾರ್ಚ್ 16 ರಿಂದ ಏಪ್ರಿಲ್ 3 ರವರೆಗೆ 8961.9 ಲೀಟರ್ ಭಾರತೀಯ ತಯಾರಿಕಾ ಮದ್ಯ, 18069.17 ಲೀ. ಬಿಯರ್ ಹಾಗೂ 30 ಲೀ. ಸೇಂದಿ ಸೇರಿ 67,00,230 ರು. ಮೌಲ್ಯದ ಮದ್ಯ ಉತ್ಪಾದನೆಗಳನ್ನು ಜಪ್ತಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶುಭಾ ಕಲ್ಯಾಣ್ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಪಾರದರ್ಶಕ ಚುನಾವಣೆ ನಡೆಸುವ ನಿಟ್ಟಿನಲ್ಲಿ ಚುನಾವಣಾ ಅಕ್ರಮವನ್ನು ತಡೆಯಲು 58 ವಿಚಕ್ಷಣ ದಳ(ಎಫ್ಎಸ್ಟಿ-ಫ್ಲೈಯಿಂಗ್ ಸ್ಕ್ವಾಡ್, 44 ಸ್ಥಿರ ಕಣ್ಗಾವಲು ತಂಡ ಹಾಗೂ 11 ಅಬಕಾರಿ ತಂಡವನ್ನು ರಚಿಸಿ ನಿಯೋಜಿಸಲಾಗಿದೆ. ಜಿಲ್ಲಾದ್ಯಂತ ನಿಯೋಜಿತ ತಂಡಗಳು ಮಾರ್ಚ್ 16 ರಿಂದ ಏಪ್ರಿಲ್ 3ರವರೆಗೆ ಪೊಲೀಸ್ ಅಧಿಕಾರಿ/ಸಿಬ್ಬಂದಿ ಸಹಕಾರದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಎಫ್ಎಸ್ಟಿ ತಂಡದಿಂದ 10,91,500 ರು. ಹಾಗೂ ಎಸ್ಎಸ್ಟಿ ತಂಡದಿಂದ 31,18,950 ರು. ಸೇರಿ 42.10ಲಕ್ಷ ರು.ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ ದಾಖಲೆಯಿಲ್ಲದ 24,60,500 ರು. ಹಣವನ್ನು ಆದಾಯ ತೆರಿಗೆ ಇಲಾಖೆಗೆ ಹಸ್ತಾಂತರಿಸಲಾಗಿದ್ದು, ಉಳಿದ 17,49,950 ರು. ಹಣವನ್ನು ಜಿಲ್ಲಾ ಖಜಾನೆಗೆ ಜಮೆ ಮಾಡಲಾಗಿದೆ. ಆದಾಯ ತೆರಿಗೆ ಇಲಾಖೆಯಲ್ಲಿ ಜಮೆಯಾಗಿರುವ 24,60,500 ರು. ಹಣಕ್ಕೆ ಸಮರ್ಪಕ ದಾಖಲೆ ಒದಗಿಸಿದ ನಂತರ ಸಂಬಂಧಿಸಿದವರಿಗೆ ಹಿಂದಿರುಗಿಸಲಾಗುವುದು.ಅದೇ ರೀತಿ ಮಾರ್ಚ್ 16 ರಿಂದ ಏಪ್ರಿಲ್ 3ರವರೆಗೆ 1.70ಲಕ್ಷ ರು. ಮೌಲ್ಯದ 5.35 ಕೆ.ಜಿ. ಗಾಂಜಾ ಅನ್ನು ವಶಪಡಿಸಿಕೊಳ್ಳಲಾಗಿದೆ. ಮತದಾರರಿ ಗೆ ಹಂಚಿಕೆ ಮಾಡಲು ಸಂಗ್ರಹಿಸಿಟ್ಟಿದ್ದ 12,56,146 ರು. ಅಂದಾಜು ಮೌಲ್ಯದ 73 ಬಾಕ್ಸ್ ಕುಕ್ಕರ್, 700 ಗೋಡೆ ಗಡಿಯಾರ, 126 ಸೀರೆ, 126.42 ಗ್ರಾಂ. ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಡಿ ದಾಖಲಾದ ಪ್ರಕರಣಗಳಲ್ಲಿ ಅಬಕಾರಿ ಕಾಯ್ದೆಯನ್ನು ಉಲ್ಲಂಘಿಸಿದ ಒಟ್ಟು 529 ಪ್ರಕರಣಗಳಿಗೆ ಪ್ರಥಮ ವರ್ತಮಾನ ವರದಿ(ಎಫ್ಐಆರ್) ಮಾಡಲಾಗಿದೆ ಎಂದು ತಿಳಿಸಿದ್ದಾರೆ.