ಕನ್ನಡಪ್ರಭ ವಾರ್ತೆ ರಾಯಚೂರು
ಒಗ್ಗಟ್ಟಿನ ಚಳವಳಿಗಳಿಂದ ಸಮಾಜದ ತೊಡಕುಗಳನ್ನು ನಿರ್ಮೂಲನೆ ಮಾಡಲು ಸಾಧ್ಯವಾಗುತ್ತದೆ ಎಂದು ರಾಯಚೂರು ವಿಶ್ವವಿದ್ಯಾಲಯದ ಕುಲಸಚಿವ ಡಾ.ಶಂಕರ್.ವಿ ಅಭಿಪ್ರಾಯ ವ್ಯಕ್ತಪಡಿಸಿದರು.ಇಲ್ಲಿನ ವಿವಿಯ ಸಮಾಜ ವಿಜ್ಞಾನ ಹಾಗೂ ಕಲಾ ವಿಭಾಗಗಳ ಸಹಯೋಗದಲ್ಲಿ ‘ಭಾರತದಲ್ಲಿ ಸಾಮಾಜಿಕ ಚಳುವಳಿಗಳು’ ಶೀರ್ಷಿಕೆ ಅಡಿಯಲ್ಲಿ ಎರಡು ದಿನಗಳ ಕಾಲ ಹಮ್ಮಿ ಕೊಂಡಿರುವ ರಾಷ್ಟ್ರೀಯ ವಿಚಾರ ಸಂಕಿರಣಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿದ ಅವರು, ಸಮಾಜದಲ್ಲಿ ಯಾವುದೇ ಚಳವಳಿ ಪರಿಣಾಮಕಾರಿಯಾಗಿ ಕೈಗೊಂಡಿದ್ದೇ ಆದಲ್ಲಿ ಅದು ಸಮಾಜದ ತೊಡಕುಗಳನ್ನು ಸುಧಾರಿಸುವ ನಿಟ್ಟಿನಲ್ಲಿಯೇ ಕೆಲಸ ಮಾಡಿ, ಉತ್ತಮ ಸಮಾಜದ ನಿರ್ಮಾಣಕ್ಕೆ ಸಹಕಾರಿಯಾಗುತ್ತದೆ ಎಂದರು.
ಸಾಕಷ್ಟು ಅನಿಷ್ಟ ಪದ್ಧತಿಗಳನ್ನು ಚಳವಳಿಗಳ ಮೂಲಕ ಹೊಗಲಾಡಿಸಲಾಗಿದೆ. ಹಲವಾರು ಬುದ್ಧಿ ಜೀವಿಗಳು, ಸಂಘಟನೆಗಳು, ಹೋರಾಟಗಾರರು ಯಾವುದೇ ಜಾತಿ, ಮತ, ಧರ್ಮ, ಪಂಥಗಳಿಗೆ ಸೀಮಿತವಾಗದೇ ಎಲ್ಲರೂ ಒಗ್ಗಾಟ್ಟಾಗಿ ಚಳುವಳಿಯನ್ನು ಕೈಗೊಂಡಿದ್ದೇ ಆದಲ್ಲಿ ಅಂತಹ ಚಳುವಳಿಗಳ ಧ್ಯೇಯೋದ್ದೇಶವು ಪೂರ್ಣಗೊಳ್ಳುತ್ತವೆ ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವಿ ಕುಲಪತಿ ಪ್ರೊ.ಹರೀಶ್ ರಾಮಸ್ವಾಮಿ ಮಾತನಾಡಿ, ಪ್ರಜಾಪ್ರಭುತ್ವದ ವ್ಯವಸ್ಥೆ ಗಟ್ಟಿಗೊಳ್ಳುವುದರಲ್ಲಿ ಚಳವಳಿಗಳ ಪಾತ್ರ ಪ್ರಮುಖ ವಾಗಿದೆ. ಇಂತಹ ಚಳವಳಿಗಳನ್ನು ರೂಪಿಸುವ ಕಾರ್ಯಕ್ಕೆ ಶಿಕ್ಷಣ ಸಂಸ್ಥೆಗಳು,ವಿಶ್ವವಿದ್ಯಾಲಯಗಳ ಮುಂದಾಗಬೇಕು. ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವಂತಹ ಚಳುವಳಿಗಳು ರೂಪುಗೊಳ್ಳಬೇಕಾಗಿದ್ದು, ಇಂತಹ ಪ್ರಯತ್ನಗಳನ್ನು ಸಾಗಬೇಕಾಗಿದೆ. ವಿದ್ಯಾರ್ಥಿಗಳನ್ನು ಸಮುದಾಯದ ಕಡೆಗೆ ಕರೆದುಕೊಂಡು ಹೋಗಿ ಸಮಾಜವನ್ನು ಕಟ್ಟುವ ನಿಟ್ಟಿನಲ್ಲಿ ಅವರಲ್ಲಿ ಪ್ರೇರಣೆ ಮೂಡಿಸುವ ಕೆಲಸವನ್ನು ವಿಶ್ವವಿದ್ಯಾಲಯಗಳು ಮಾಡಬೇಕು ಎಂದು ಹೇಳಿದರು.
ಹೈದ್ರಾಬಾದ್ನ ಉಸ್ಮಾನಿಯ ವಿಶ್ವವಿದ್ಯಾಲಯ ಮಾಜಿ ಡೀನ್ ಪ್ರೊ.ಹರಗೋಪಾಲ್ ಅವರು ವಿಡಿಯೋ ಕಾನ್ಫ್ರೆನ್ಸ್ ಮುಖಾಂತರ ಮಾತನಾಡಿ, ಸಾಮಾಜಿಕ ಮತ್ತು ರಾಜಕೀಯ ಚಳವಳಿ ನಡುವೆ ಇರುವ ವ್ಯತ್ಯಾಸಗಳನ್ನು ವಿವರಿಸಿದರು. ಯಾವುದೇ ಚಳವಳಿಯನ್ನು ಕೈಗೊಂಡರೂ ಸಹ ಅದು ಉತ್ತಮ ಸಮಾಜದ ಬೆಳವಣಿಗೆಗೆ ಪೂರಕ ವಾಗಿರಬೇಕು ಎಂದು ತಿಳಿಸಿದರು.ವಿಚಾರ ಸಂಕಿರಣದ ಸಂಚಾಲಕ ಹಾಗೂ ರಾಜ್ಯಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ.ಕೆ.ವೆಂಕಟೇಶ, ಚಾಮರಾಜನಗರದ ಕೆಆರ್ಆರ್ಎಸ್ನ ಸದಸ್ಯೆ ಚುಕ್ಕಿ ನಂಜುಂಡಸ್ವಾಮಿ ಅವರು ಮಾತನಾಡಿದರು.
ಕಾಲೇಜು ಅಭಿವೃದ್ಧಿ ಮಂಡಳಿ ನಿರ್ದೇಶಕ ಡಾ.ರಾಘವೇಂದ್ರ ಫತ್ತೇಪುರ, ವಿವಿ ಮೌಲ್ಯಮಾಪನ ಕುಲಸಚಿವ ಪ್ರೊ.ಎಂ.ಯರಿಸ್ವಾಮಿ, ಉಪ ಕುಲಸಚಿವ ಡಾ.ಜಿ.ಎಸ್. ಬಿರಾದಾರ್, ವಿವಿಧ ವಿಷಯಗಳ ಡೀನ್ ಗಳಾದ ಪ್ರೊ.ಪಾರ್ವತಿ ಸಿ.ಎಸ್., ಪ್ರೊ.ಪಿ.ಭಾಸ್ಕರ್, ಸಹ ಪ್ರಾಧ್ಯಪಕ ಡಾ.ಲತಾ, ಸಿಂಡಿಕೇಟ್ ಸದಸ್ಯ ಚನ್ನಬಸವ ದದ್ದಲ್, ಸಾಹಿತಿಗಳು, ರೈತ , ಮಹಿಳಾ ಸಂಘಟನೆಕಾರರು, ವಿವಿಧ ಜಿಲ್ಲೆಗಳ ಮಹಾವಿದ್ಯಾಲಯಗಳ ಉಪನ್ಯಾಸಕರು, ಸಂಶೋಧನಾ ಅಭ್ಯರ್ಥಿಗಳು ಹಾಗೂ ರಾವಿವಿಯ ವಿವಿಧ ವಿಭಾಗಗಳ ಅತಿಥಿ ಉಪನ್ಯಾಸಕರು, ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.