ಗದಗ: ಪ್ರಸಕ್ತ ವರ್ಷ ಮಳೆ ಕೊರತೆಯಿಂದ ಜಿಲ್ಲೆಯಾದ್ಯಂತ ಬರಗಾಲ ಆವರಿಸಿ ರೈತರು ಸಂಕಷ್ಟದಲ್ಲಿದ್ದರೂ ಸಂಪ್ರದಾಯದಂತೆ ಗುರುವಾರ ಎಳ್ಳ ಅಮಾವಾಸ್ಯೆಯನ್ನು ಕೊಂಚ ಉತ್ಸಾಹದಿಂದಲೇ ಆಚರಿಸಿದರು.
ಎಳ್ಳ ಅಮಾವಾಸ್ಯೆ ಹಿನ್ನೆಲೆಯಲ್ಲಿ ಮನೆಗಳಲ್ಲಿ ಮಹಿಳೆಯರು ಪುಂಡಿ ಪಲ್ಯ, ಕುಚ್ಚಿದ ಮೆಣಸಿನಕಾಯಿ, ಜೋಳದ ಕಡಬು, ಶೇಂಗಾ ಹೋಳಿಗೆ, ಎಣ್ಣೆ ಹೋಳಿಗೆ, ಕಡಬು, ಕರಿಗಡಬು, ಶೇಂಗಾ ಚಟ್ನಿ, ಮೊಸರು, ತುಪ್ಪ, ಗುರೆಳ್ಳ ಚಟ್ನಿ ಮುಂತಾದ ವಿಶೇಷ ಖಾದ್ಯಗಳನ್ನು ತಯಾರಿಸಿ ಅಕ್ಕ-ತಂಗಿಯರನ್ನು, ಮಕ್ಕಳನ್ನು, ಬಂಧು ಬಳಗವನ್ನು ಸ್ನೇಹಿತರನ್ನು ಕರೆಯಿಸಿ ಎತ್ತಿನ ಬಂಡಿ, ಟ್ರ್ಯಾಕ್ಟರ್, ಟಂಟಂ, ಕಾರು, ಟಾಟಾ ಎಸಿ, ಬೈಕ್ ಇನ್ನೂ ಅನೇಕ ವಾಹನಗಳ ಮೂಲಕ ತಮ್ಮ ತಮ್ಮ ಹೊಲಗಳಿಗೆ ತೆರಳಿ ಭೂತಾಯಿಗೆ ವಿಶೇಷ ಪೂಜೆ ಸಲ್ಲಿಸಿ, ಚರಗ ಚೆಲ್ಲಿ ಭೂತಾಯಿ ಮಡಿಲಲ್ಲಿ ಮನೆ ಮಂದಿಯೆಲ್ಲಾ ಕುಳಿತು ಊಟ ಮಾಡಿ ಸಂಭ್ರಮಿಸಿದರು.