ಪಿಎಲ್ಡಿ ಬ್ಯಾಂಕ್ ಆವರಣದಲ್ಲಿ ಡಾ. ಶಿವಕುಮಾರ ಶ್ರೀಗಳ ಜನ್ಮದಿನ
ತ್ರಿವಿಧ ದಾಸೋಹಿ ಡಾ. ಶಿವಕುಮಾರ ಸ್ವಾಮೀಜಿಗಳು ನಾಡು ಕಂಡ ಅತ್ಯಂತ ಶ್ರೇಷ್ಠ ಸಂತ ಎನಿಸಿಕೊಂಡಿದ್ದಾರೆ. ಎಲ್ಲ ಸಮುದಾಯಗಳ ಏಳ್ಗೆಗಾಗಿ ಶೈಕ್ಷಣಿಕ ಸಂಸ್ಥೆಗಳನ್ನು ಆರಂಭಿಸಿ, ಅಕ್ಷರ ದಾಸೋಹ ಕೈಗೊಂಡ ಮಹಾನ್ ಪುಣ್ಯಾತ್ಮರಾಗಿದ್ದಾರೆ ಎಂದು ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಚೊಕ್ಕಬಸವನಗೌಡ ತಿಳಿಸಿದರು.
ಇಲ್ಲಿನ ಪಿ.ಎಲ್.ಡಿ ಬ್ಯಾಂಕ್ ಆವರಣದಲ್ಲಿ ಸಿದ್ದಗಂಗಾಶ್ರೀ ಸೌಹಾರ್ದ ಪತ್ತಿನ ಸಹಕಾರಿ ಸಂಘ ನಿಯಮಿತ ವತಿಯಿಂದ ಹಮ್ಮಿಕೊಂಡಿದ್ದ ತ್ರಿವಿಧ ದಾಸೋಹಿ ಡಾ. ಶಿವಕುಮಾರ ಸ್ವಾಮೀಜಿಯವರ 118ನೇ ಜನ್ಮದಿನದ ಕಾಯಕ್ರಮದಲ್ಲಿ ಮಾತನಾಡಿದರು.ಶಿವಕುಮಾರ ಸ್ವಾಮೀಜಿಗಳ ಆದರ್ಶ ಸಾರ್ವಕಾಲಿಕವಾಗಿವೆ. ಜಾತಿ, ಮತ, ಭೇದಭಾವವಿಲ್ಲದೆ ಸರ್ವಧರ್ಮ ಜಾತಿಯವರಿಗೂ ಶಿಕ್ಷಣ ನೀಡುವ ಮೂಲಕ ಅಸಂಖ್ಯಾತ ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿದ್ದಾರೆ. ಶಿಕ್ಷಣದಿಂದ ಮಾತ್ರ ಬದುಕು ಬದಲಾಗಲು ಸಾಧ್ಯ ಎಂದು ಶ್ರೀಗಳು ನಂಬಿದ್ದರು. ಹೀಗಾಗಿಯೇ ಸಹಸ್ರಾರು ವಿದ್ಯಾರ್ಥಿಗಳಿಗೆ ಸಿದ್ಧಗಂಗಾ ಮಠದಲ್ಲಿ ಆಶ್ರಯ ನೀಡಿ, ಶಿಕ್ಷಣ ಒದಗಿಸಿದರು. ಶ್ರೀಗಳು ಅಕ್ಷರ ದಾಸೋಹದ ಜೊತೆಗೆ ಅನ್ನದಾಸೋಹ ನೀಡಿ ಸಮ ಸಮಾಜಕ್ಕೆ ನಾಂದಿ ಹಾಡಿದ್ದಾರೆ ಎಂದರಲ್ಲದೆ, ಶ್ರೀಗಳ ಆದರ್ಶಗಳು, ಸಮಾಜಮುಖಿ ಸೇವಾ ಮನೋಭಾವವನ್ನು ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.