ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಸಭೆಯ ಪ್ರಾರಂಭದಲ್ಲಿಯೇ ಕುಡಿಯುವ ನೀರಿನ ಯೋಜನೆ ಕಾಮಗಾರಿ ಸಂದರ್ಭ ರಸ್ತೆಗಳ ಗುಂಡಿ ಮುಚ್ಚಿಲ್ಲ, ಇಂಟರ್ಲಾಕ್ ತೆಗೆದುಹಾಕಿ ಅದನ್ನು ಇನ್ನೂ ಅಳವಡಿಸಿಲ್ಲ. ರಸ್ತೆಗಳ ಗುಂಡಿ ಮುಚ್ಚದೆ ಅನೇಕ ಬೈಕ್ ಸವಾರರು ಬಿದ್ದಿದ್ದಾರೆ. ಸತತ ನಾಲ್ಕು ಸಭೆಗಳಿಗೆ ಅಭಿಯಂತರರು ಗೈರುಹಾಜರಾಗಿದ್ದಾರೆ. ಪಟ್ಟಣದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿಲ್ಲ, ಪಂಚಾಯಿತಿ ಚುನಾವಣೆ ಘೋಷಣೆ ಆದರೆ ನೀತಿ ಸಂಹಿತೆ ಜಾರಿಯಾಗುತ್ತದೆ. ಏನೂ ಕೆಲಸ ಮಾಡಲು ಸಾಧ್ಯವಿಲ್ಲ. ವಾರ್ಡ್ ನಿವಾಸಿಗಳಿಗೆ ಯಾರು ಉತ್ತರ ನೀಡುತ್ತಾರೆಂದು ಹೇಳಿ ಸದಸ್ಯರಾದ ಜೀವನ್, ಮೃತ್ಯುಂಜಯ, ಶುಭಕರ್, ವಿನಿ ಮತ್ತು ಕಿರಣ್ ಉದಯಶಂಕರ್ ಬಹಿಷ್ಕರಿಸಿ ಹೊರನಡೆಯಲು ಸಿದ್ಧರಾದರು.ಈ ಸಂದರ್ಭ ಅಧ್ಯಕ್ಷರು ಸಭೆಯಲ್ಲಿ ಪಾಲ್ಗೊಳ್ಳಲು ಮನವಿ ಮಾಡಿದ ಸಂದರ್ಭ ತೀವ್ರ ಮಾತಿನ ಚಕಮಕಿ ನಡೆಯಿತು. ಗದ್ದಲದ ಪರಿಸ್ಥಿತಿ ನಿರ್ಮಾಣವಾದಾಗ ಅಧ್ಯಕ್ಷರೇ ಸಭೆಯನ್ನು ಬರ್ಖಾಸ್ತುಗೊಳಿಸಲಾಗಿದೆ ಎಂದರು.ಮುಖ್ಯಾಧಿಕಾರಿ ಕೃಷ್ಣಪ್ರಸಾದ್, ಆರೋಗ್ಯಕರ ಚರ್ಚೆಯ ಮೂಲಕ ಎಲ್ಲಾ ಸಮಸ್ಯೆಯನ್ನು ಪರಿಹರಿಸಬಹುದು ಎಂದು ಮನವಿ ಮಾಡಿದರೂ ಕೆಲವು ಸದಸ್ಯರು ಸಭೆಯಿಂದ ಹೊರ ನಡೆದರು.