ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಧರ್ಮವನ್ನು ನಾವು ರಕ್ಷಿಸಿದರೆ, ಧರ್ಮ ನಮ್ಮನ್ನು ಸದಾ ಕಾಪಾಡುತ್ತದೆ. ಧರ್ಮಸ್ಥಳ ಸುಂದರ ನಗರ, ಸಂಸ್ಕೃತಿ ನಗರ ಮತ್ತು ಸೇವಾ ನಗರ. ಇಡೀ ದೇಶಕ್ಕೆ ಮುಕುಟಪ್ರಾಯವಾದ ಧರ್ಮಸ್ಥಳದಲ್ಲಿ ಅಮೂಲ್ಯ ಆಸ್ತಿಯಾದ ಭಕ್ತಿ, ಸೇವೆ, ಅನುಭವ, ನಾಯಕತ್ವ, ಪ್ರತಿಷ್ಠೆ, ಪ್ರಜ್ಞಾ, ಕೀರ್ತಿ ಎಲ್ಲವೂ ಇದೆ. ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಒಬ್ಬ ಸಾಧಾರಣ ವ್ಯಕ್ತಿಯಾಗಿ. ಅಸಾಧಾರಣ ಸೇವೆ, ಸಾಧನೆ ಮಾಡಿದ್ದಾರೆ ಎಂದು ಕಂಚಿಕಾಮಕೋಟಿ ಪೀಠಾಧಿಪತಿ ಪೂಜ್ಯ ಶಂಕರವಿಜಯೇಂದ್ರ ಸರಸ್ವತಿ ಶಂಕರಾಚಾರ್ಯ ಸ್ವಾಮೀಜಿ ಹೇಳಿದರು.ಅವರು ಶನಿವಾರ ಧರ್ಮಸ್ಥಳ ಕ್ಷೇತ್ರಕ್ಕೆ ಪುರಪ್ರವೇಶ ಮಾಡಿದಾಗ ಮುಖ್ಯ ಪ್ರವೇಶ ದ್ವಾರದಿಂದ ಭವ್ಯ ಮೆರವಣಿಗೆಯಲ್ಲಿ ಸ್ವಾಗತಿಸಿ, ಬಳಿಕ ಅಮೃತವರ್ಷಿಣಿ ಸಭಾಭವನದಲ್ಲಿ ನಡೆದ ಸಭೆಯಲ್ಲಿ ಅನುಗ್ರಹ ಭಾಷಣ ಮಾಡಿದರು.
ಹೆಗ್ಗಡೆಯವರ ದಕ್ಷ ಕಾರ್ಯವೈಖರಿ, ಆದರ್ಶ ನಾಯಕತ್ವ, ಸಾಮಾಜಿಕ ಸೇವಾ ಕಳಕಳಿ ಮತ್ತು ಹೃದಯ ಶ್ರೀಮಂತಿಕೆಯನ್ನು ಮನ್ನಿಸಿ ಪ್ರಧಾನಿ ನರೇಂದ್ರ ಮೋದಿಯವರೇ ರಾಜ್ಯಸಭಾ ಸದಸ್ಯರಾಗಿ ನಾಮನಿರ್ದೇಶನ ಮಾಡಿರುವುದು ಕರ್ನಾಟಕ ರಾಜ್ಯಕ್ಕೇ ಸಂದ ಗೌರವ ಎಂದರು.ದಾರಿದ್ರ್ಯ ನಿರ್ಮೂಲನೆಯೊಂದಿಗೆ ಭಾವದಾರಿದ್ರ್ಯ ನಿರ್ಮೂಲನವೂ ಆಗಬೇಕು ಎಂದು ಹೇಳಿದ ಸ್ವಾಮೀಜಿ, ಹೆಗ್ಗಡೆ ಕುಟುಂಬದವರ ಅವಿಭಕ್ತ ಕುಟುಂಬ ಪದ್ಧತಿಯ ಜೀವನ ಶೈಲಿಯನ್ನು ಶ್ಲಾಘಿಸಿ ಅಭಿನಂದಿಸಿದರು.ಕರ್ನಾಟಕ ಸಂಗೀತ ಮತ್ತು ಯಕ್ಷಗಾನದ ಸೊಗಡನ್ನು ಶ್ಲಾಘಿಸಿದ ಅವರು ವಿದ್ಯೆ, ಕಲೆಗಳು ಮತ್ತು ವಿದ್ವಾಂಸರ ರಕ್ಷಣೆಯಾಗಬೇಕು ಎಂದು ಸಲಹೆ ನೀಡಿದರು.ಕಂಚಿಮಠದಲ್ಲಿ ಕೃಷಿ ಸುಭಿಕ್ಷೆಗಾಗಿ ಪ್ರತಿವರ್ಷ ಮಾಡುವ ಅನ್ನಾಭಿಷೇಕ ಸೇವೆಯನ್ನು ತಾವು ಧರ್ಮಸ್ಥಳದಲ್ಲಿ ಕೂಡ ಮಾಡುವುದಾಗಿ ತಿಳಿಸಿದರು. ಅಲ್ಲದೆ ಸೋಮವಾರ ಕಾರ್ತಿಕ ಪೂಜೆ, ದ್ವಾದಶಿ ಪೂಜೆ, ತ್ರಯೋದಶಿ ಪೂಜೆ ಮೊದಲಾದ ವಿಶೇಷ ಸೇವೆಗಳನ್ನು ಮಾಡುವುದಾಗಿ ತಿಳಿಸಿದರು.ಅನ್ನಪೂರ್ಣ ಛತ್ರದ ಮೇಲಂತಸ್ತಿನಲ್ಲಿ ಸುಸಜ್ಜಿತ ಆಸನ ವ್ಯವಸ್ಥೆ ಹೊಂದಿರುವ ಭೋಜನಾಲಯದ ಉದ್ಘಾಟನೆಗೆ ಹೆಗ್ಗಡೆಯವರು ಆಹ್ವಾನಿಸಿದ್ದು, ತಾವು ಇದೇ ಸಂದರ್ಭ ಇಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದಾಗಿ ಪ್ರಕಟಿಸಿದರು.ಸ್ವಾಮೀಜಿ, ಹೆಗ್ಗಡೆಯವರು ಮತ್ತು ಕುಟುಂಬದ ಎಲ್ಲ ಸದಸ್ಯರನ್ನು ವಿಶೇಷವಾಗಿ ಗೌರವಿಸಿ ಆಶೀರ್ವದಿಸಿದರುಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ, ಹೇಮಾವತಿ ವೀ. ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಸೋನಿಯಾ ಯಶೋವರ್ಮ ಮತ್ತು ಪೂರಣ್ ವರ್ಮ ಉಪಸ್ಥಿತರಿದ್ದರು.