ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಾದ ಚೇಲಾವರ ಜಲಪಾತ, ಕಬ್ಬೆ ಬೆಟ್ಟ ಚೋಮಕುಂದು ಬೆಟ್ಟದ ಪರಿಸರಗಳನ್ನು ಮಂಗಳವಾರ ಸ್ವಚ್ಛಗೊಳಿಸಲಾಯಿತು.
ನಾಪೋಕ್ಲು: ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಾದ ಚೇಲಾವರ ಜಲಪಾತ, ಕಬ್ಬೆ ಬೆಟ್ಟ ಚೋಮಕುಂದು ಬೆಟ್ಟದ ಪರಿಸರಗಳನ್ನು ಮಂಗಳವಾರ ಸ್ವಚ್ಛಗೊಳಿಸಲಾಯಿತು.
ಈ ವ್ಯಾಪ್ತಿಯ ವಿವಿಧ ಹೋಂಸ್ಟೇ ಮಾಲೀಕರು, ಸ್ಥಳೀಯರು ಹಾಗೂ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಸ್ವಯಂ ಸೇವಕರು ಪ್ರವಾಸಿ ತಾಣಗಳಲ್ಲಿ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡರು. ಜಲಪಾತ ಹಾಗೂ ಬೆಟ್ಟಕ್ಕೆ ಸಾಗುವ ದಾರಿಯ ಇಕ್ಕೆಲಗಳಲ್ಲಿದ್ದ ಪ್ಲಾಸ್ಟಿಕ್ ಗಳನ್ನು ಹೆಕ್ಕಿ ಸ್ವಚ್ಛಗೊಳಿಸಲಾಯಿತು.ಈ ಸಂದರ್ಭ ಸ್ವಯಂ ಸೇವಕ ಅಪ್ಪಾರಂಡ ಸಾಗರ್ ಮಾತನಾಡಿ, ಪ್ರವಾಸಿ ತಾಣಗಳನ್ನು ಸ್ವಚ್ಚವಾಗಿಟ್ಟುಕೊಳ್ಳುವುದು ಎಲ್ಲರ ಜವಾಬ್ದಾರಿ. ಸುಂದರ ಕೊಡಗು ಸ್ವಚ್ಛ ಕೊಡಗು ಆಗಬೇಕಿದೆ. ಪ್ರವಾಸಿ ತಾಣಗಳ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರು ಪರಿಸರ ಮಾಲಿನ್ಯಕ್ಕೆ ಕಾರಣರಾಗು ತ್ತಿದ್ದಾರೆ. ಜೊತೆಗೆ ಸ್ಥಳೀಯರು ಕೂಡ ಪರಿಸರ ಮಾಲಿನ್ಯಕ್ಕೆ ಕಾರಣರಾಗಿದ್ದಾರೆ. ಕಳೆದ ಆರು ತಿಂಗಳಲ್ಲಿ ಮೂರು ಬಾರಿ ಈ ಪರಿಸರವನ್ನು ಸ್ವಚ್ಛಗೊಳಿಸಲಾಗಿದೆ. ಆದರೂ ಪರಿಸರದಲ್ಲಿ ಮತ್ತಷ್ಟು ತ್ಯಾಜ್ಯ ತುಂಬಿಕೊಂಡಿದೆ. ಈ ದಿನ ಆ ತ್ಯಾಜ್ಯಗಳನ್ನು ಹೆಕ್ಕಿ ಸ್ವಚ್ಛಗೊಳಿಸುವ ಕಾರ್ಯ ಮಾಡಲಾಗಿದೆ. ಪರಿಸರ ಸ್ವಚ್ಛತೆ ಬಗ್ಗೆ ಎಲ್ಲರೂ ಗಮನ ಹರಿಸಬೇಕು ಎಂದರು.ಚೇಲಾವರ ಜಲಪಾತ ಸುಂದರ ತಾಣವಾಗಿದ್ದು, ಅಪಾಯಕಾರಿ ಸ್ಥಳವೂ ಆಗಿದೆ. ಇಂಥ ಸ್ಥಳದಲ್ಲಿ ಅಪಾಯದ ಮುನ್ಸೂಚನೆಯನ್ನು ಲೆಕ್ಕಿಸದೆ ಈಜಾಡಲು ತೆರಳಿ ಹಲವು ಯುವಕರು ಪ್ರಾಣ ಕಳೆದುಕೊಂಡಿದ್ದಾರೆ. ಯುವಕರು ಅಪಾಯಕ್ಕೆ ಮೈಯೊಡ್ಡಿಕೊಳ್ಳುವುದಲ್ಲದೆ ನೀರು ಮಾಲಿನ್ಯಗೊಳ್ಳುತ್ತಿದೆ. ಇದನ್ನು ತಡೆಗಟ್ಟಲು ಜಲಪಾತದ ಬಳಿಗೆ ತರಳದಂತೆ ಬೇಲಿ ಅಳವಡಿಸಲಾಗಿತ್ತು. ಆದರೆ ಇತ್ತೀಚಿಗೆ ಕೆಲವರು ಬೇಲಿಯನ್ನು ಮುರಿದು ಜಲಪಾತದ ಸನಿಹ ತೆರಳುತ್ತಿದ್ದಾರೆ. ಈ ಬಗ್ಗೆ ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು ಎಂದರು.ಸ್ವಯಂ ಸೇವಕರಾದ ನಡಿಕೇರಿಯಂಡ ದಿಲೀಪ್, ಮಣಿಯಪಂಡ ಧೀರಜ್ ಸೇರಿದಂತೆ ಗ್ರಾಮಸ್ಥರು, ಸ್ವಯಂ ಸೇವಕರು ಪಾಲ್ಗೊಂಡಿದ್ದರು. ಸ್ವಚ್ಛತಾ ಕಾರ್ಯದಲ್ಲಿ 500ಕ್ಕೂ ಹೆಚ್ಚು ಮಧ್ಯದ ಹಾಗೂ ಬಿಯರ್ ಬಾಟಲಿ ಸೇರಿದಂತೆ ಸುಮಾರು ಒಂದು ಟನ್ ನಷ್ಟು ತ್ಯಾಜ್ಯ ಸಂಗ್ರಹಿಸಲಾಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.