ಡಿಜೆ ಬಳಕೆಗೆ ಹಾಗೂ ಪಿಒಪಿ ಗಣಪತಿ ಮೂರ್ತಿಗಳ ಪ್ರತಿಷ್ಠಾಪನೆಗೆ ಅವಕಾಶವಿಲ್ಲ. ರಾತ್ರಿ 9 ಗಂಟೆಯ ಬಳಿಕ ಮೈಕ್ ಬಳಸಬಾರದು.

ಚೇಳೂರು ಪೊಲೀಸ್ ಠಾಣೆ ಆವರಣದಲ್ಲಿ ನಡೆದ ಶಾಂತಿ ಸಭೆ

ಕನ್ನಡಪ್ರಭ ವಾರ್ತೆ ಚೇಳೂರುಗಣೇಶೋತ್ಸವದ ನೆಪದಲ್ಲಿ ಕೋಮು ಸಂಘರ್ಷ, ಅನಗತ್ಯ ಗಲಾಟೆ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಚಟುವಟಿಕೆಗಳಿಗೆ ಅವಕಾಶ ನೀಡಬಾರದು ಎಂದು ವೃತ್ತ ನಿರೀಕ್ಷಕ ಶ್ರೀನಿವಾಸ್ ಎಂ. ಸೂಚಿಸಿದರು.ಮುಂಬರುವ ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಗುರುವಾರ ಚೇಳೂರು ಪೊಲೀಸ್ ಠಾಣೆ ಆವರಣದಲ್ಲಿ ನಡೆದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಪೊಲೀಸ್ ಹಾಗೂ ಸಂಬಂಧಪಟ್ಟ ಇಲಾಖೆಗಳ ಅನುಮತಿ ಪಡೆಯಬೇಕು. ಡಿಜೆ ಬಳಕೆಗೆ ಹಾಗೂ ಪಿಒಪಿ ಗಣಪತಿ ಮೂರ್ತಿಗಳ ಪ್ರತಿಷ್ಠಾಪನೆಗೆ ಅವಕಾಶವಿಲ್ಲ. ರಾತ್ರಿ 9 ಗಂಟೆಯ ಬಳಿಕ ಮೈಕ್ ಬಳಸಬಾರದು. ವಿಸರ್ಜನೆ ವೇಳೆ ಗಲಾಟೆ, ಅಸಭ್ಯ ವರ್ತನೆಗೆ ಅವಕಾಶ ನೀಡಬಾರದು. ನಿಯಮ ಉಲ್ಲಂಘಿಸಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.ಪಿಡಿಒ ಕೆ. ವೆಂಕಟಾಚಲಪತಿ ಮಾತನಾಡಿ, ಬಾಲ ಗಂಗಾಧರ ತಿಲಕರ ಆಶಯದಂತೆ ಆಡಂಬರ ಕಡಿಮೆ ಮಾಡಿ ಗ್ರಾಮಕ್ಕೆ ಒಂದೇ ಮೂರ್ತಿ ಪ್ರತಿಷ್ಠಾಪಿಸಬೇಕು. ಉಳಿಯುವ ಹಣವನ್ನು ಬಡ ವಿದ್ಯಾರ್ಥಿಗಳ ಶಿಕ್ಷಣ, ತುರ್ತು ಚಿಕಿತ್ಸೆ ಹಾಗೂ ಹಿರಿಯರು, ಸಾಧಕರು ಮತ್ತು ಸ್ಥಳೀಯ ಕಲಾವಿದರ ಗೌರವಕ್ಕೆ ಬಳಸಬಹುದು ಎಂದರು.ಸಾರ್ವಜನಿಕ ಸಂಚಾರಕ್ಕೆ ತೊಂದರೆಯಾಗುವಂತೆ ರಸ್ತೆ ಬಂದ್ ಮಾಡಿ ಪೆಂಡಾಲ್ ನಿರ್ಮಿಸಬಾರದು. ಧ್ವನಿವರ್ಧಕದಿಂದ ಸಾರ್ವಜನಿಕರು, ವೃದ್ಧರು ಹಾಗೂ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಪ್ಲಾಸ್ಟಿಕ್, ರಾಸಾಯನಿಕ ಬಣ್ಣದ ಮೂರ್ತಿಗಳನ್ನು ಬಳಸದೆ 4–5 ಅಡಿಗಿಂತ ಎತ್ತರದ ಮೂರ್ತಿ ಇರಿಸಬಾರದು. ಸಂಜೆ 5 ಗಂಟೆಯೊಳಗೆ ವಿಸರ್ಜನೆ ಪೂರ್ಣಗೊಳಿಸಬೇಕು ಎಂದು ಸಲಹೆ ನೀಡಿದರು.ಅಗ್ನಿಶಾಮಕ ಅಧಿಕಾರಿ ಲಕ್ಷ್ಮಣ್ ತಳವಾರ್ ಮಾತನಾಡಿ, ಬಾಗೇಪಲ್ಲಿಯಿಂದ ಅಗ್ನಿಶಾಮಕ ವಾಹನ ತಡವಾಗಿ ಬರುವ ಸಾಧ್ಯತೆ ಇರುವುದರಿಂದ ಪ್ರತಿಯೊಂದು ಪೆಂಡಾಲ್‌ನಲ್ಲಿ ಎರಡು 200 ಲೀಟರ್ ಡ್ರಮ್‌ಗಳಲ್ಲಿ 400 ಲೀಟರ್ ನೀರು ಹಾಗೂ ಅಗ್ನಿಶಾಮಕ ಉಪಕರಣ ಇರಿಸಿಕೊಳ್ಳಬೇಕು. ವಿದ್ಯುತ್ ತಂತಿಗಳನ್ನು ಬೆಸ್ಕಾಂನಿಂದ ಪರಿಶೀಲಿಸಿಕೊಳ್ಳಬೇಕು ಎಂದರು.ಈ ಸಂದರ್ಭದಲ್ಲಿ ಉಪತಹಸೀಲ್ದಾರ್ ಶಾಂತಲಾ, ಎಎಸ್ಐ ವೆಂಕಟೇಶಪ್ಪ, ಸನವುಳ್ಳ, ಶ್ರೀನಿವಾಸ್, ಕ್ರೈಂ ಪಿಸಿ ನಂದನ್, ಸಚಿನ್, ಕೆಇಬಿ ಇಲಾಖೆಯ ಅಧಿಕಾರಿ ಮನೋಹರ, ಮುಖಂಡರಾದ ಚಂದ್ರು, ಮನೋಹರ್, ಶಿವ, ವಿನಯ್, ನರೇಂದ್ರ, ಕುಮಾರ್, ಶಶಿ, ಅನಿಲ್, ಪವನ್ ಹಾಜರಿದ್ದರು.