ಮಣಿಪಾಲ: ಡಿಸಿ ಕಚೇರಿಯಲ್ಲಿ ಅಂಚೆ ಮತದಾನ ಕೇಂದ್ರ ಸ್ಥಾಪನೆ

KannadaprabhaNewsNetwork | Published : Apr 20, 2024 1:10 AM

ಸಾರಾಂಶ

ಚುನಾವಣಾ ಆಯೋಗವು ಮತದಾನ ದಿನದಂದು 16 ಅಗತ್ಯ ಸೇವೆಗಳ ಕರ್ತವ್ಯ ನಿರತರಿಗೆ ಮತ್ತು ಚುನಾವಣೆ ಕರ್ತವ್ಯ ನಿರತರಿಗೆ ಅಂಚೆ ಮತದಾನ ಮಾಡಲು ಅವಕಾಶ ನೀಡಿದೆ.

ಕನ್ನಡಪ್ರಭ ವಾರ್ತೆ ಉಡುಪಿ

ಭಾರತ ಚುನಾವಣಾ ಆಯೋಗವು ಮತದಾನ ದಿನದಂದು 16 ಅಗತ್ಯ ಸೇವೆಗಳ ಕರ್ತವ್ಯ ನಿರತರಿಗೆ ಮತ್ತು ಚುನಾವಣೆ ಕರ್ತವ್ಯನಿರತರಿಗೆ ಅಂಚೆ ಮತದಾನ ಮಾಡಲು ಅವಕಾಶ ಕಲ್ಪಿಸಿದೆ. ಈ ಸಿಬ್ಬಂದಿ ಅಂಚೆ ಮತದಾನ ಮಾಡಲು ಸೌಲಭ್ಯ ಕೇಂದ್ರಗಳನ್ನು ಆಯಾ ತರಬೇತಿ ಕೇಂದ್ರಗಳಲ್ಲಿ ಮತ್ತು ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಹಾಗೂ ಅಂಚೆ ಮತದಾನ ಕೇಂದ್ರಗಳನ್ನು ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಸ್ಥಾಪಿಸಲಾಗಿದೆ.

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯ ಎ ಬ್ಲಾಕ್ ನೆಲಮಹಡಿಯ ಕೊಠಡಿ ಎ-102 ನಲ್ಲಿ 19 ರಿಂದ 21 ರವರೆಗೆ ಬೆಳಗ್ಗೆ 9 ರಿಂದ ಸಂಜೆ 5 ರವರೆಗೆ ಅಂಚೆ ಮತದಾನ ಕೇಂದ್ರ (ಪೋಸ್ಟಲ್ ಬ್ಯಾಲೆಟ್ ವೋಟಿಂಗ್ ಸೆಂಟರ್)ವನ್ನು ಹಾಗೂ ಏಪ್ರಿಲ್ 21 ರಿಂದ 23 ರವರೆಗೆ ಬೆಳಗ್ಗೆ 10 ರಿಂದ ಸಂಜೆ 5.30 ರವರೆಗೆ ಸೌಲಭ್ಯ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಚುನಾವಣೆ ನಿರತ ಮತದಾರರು ಈ ಕೇಂದ್ರಗಳಿಗೆ ತೆರಳಿ ಮತ ಚಲಾಯಿಸಬೇಕು.

ವಿಧಾನಸಭಾ ಕ್ಷೇತ್ರವಾರು ಸೌಲಭ್ಯ ಕೇಂದ್ರಗಳು: ಕುಂದಾಪುರ ಕ್ಷೇತ್ರ - ಭಂಡಾರ್ಕಾರ್ಸ್ ಕಾಲೇಜು, ಕಾಪು ಕ್ಷೇತ್ರ - ದಂಡತೀರ್ಥ ಪಪೂ ಕಾಲೇಜು, ಕಾರ್ಕಳ ಕ್ಷೇತ್ರ - ಕ್ರೈಸ್ಟ್ ಕಿಂಗ್ ಪಪೂ ಕಾಲೇಜಿನಲ್ಲಿ ಸೌಲಭ್ಯ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಏ. 21 ರಿಂದ 22 ರ ಬೆಳಗ್ಗೆ 10 ರಿಂದ 5.30 ರವರೆಗೆ ಮತ ಚಲಾಯಿಸಬಹುದಾಗಿದೆ.

ಶೃಂಗೇರಿ ಕ್ಷೇತ್ರ - ಕೊಪ್ಪದ ನಾಬರ್ಟ್ ಶಾಲೆ, ಮೂಡಿಗೆರೆ ಕ್ಷೇತ್ರ - ಡಿ.ಎಸ್.ಬಿ.ಜಿ. ಸರ್ಕಾರಿ ಕಾಲೇಜು, ಚಿಕ್ಕಮಗಳೂರು ಕ್ಷೇತ್ರ - ಎ.ಐ.ಟಿ ಕಾಲೇಜು ಹಾಗೂ ತರೀಕೆರೆ ಕ್ಷೇತ್ರ - ಸರ್ಕಾರಿ ಪದವಿ ಕಾಲೇಜಿನಲ್ಲಿ ಸೌಲಭ್ಯ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಏ. 21 ರಿಂದ 23 ರ ಬೆಳಗ್ಗೆ 10 ರಿಂದ 5.30 ರ ವರೆಗೆ ಮತ ಚಲಾಯಿಸಬಹುದಾಗಿದೆ ಎಂದು ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ತಿಳಿಸಿದ್ದಾರೆ.

Share this article