60 ವರ್ಷ ದೇಶ ಆಳಿದರೂ ದಲಿತರಿಗೆನ್ಯಾಯ ಕೊಡಿಸದ ಕಾಂಗ್ರೆಸ್‌: ಕಾರಜೋಳ

KannadaprabhaNewsNetwork |  
Published : Nov 20, 2024, 12:33 AM IST
BJP | Kannada Prabha

ಸಾರಾಂಶ

ಅರವತ್ತು ವರ್ಷ ದೇಶವನ್ನಾಳಿದ ಕಾಂಗ್ರೆಸ್ಸಿಗರ ಆಡಳಿತದಲ್ಲಿ ದಲಿತರಿಗೆ ಸಿಗಬೇಕಾದ ನ್ಯಾಯ ಸಿಗಲಿಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಹಾಲಿ ಸಂಸದ ಗೋವಿಂದ ಎಂ.ಕಾರಜೋಳ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಅರವತ್ತು ವರ್ಷ ದೇಶವನ್ನಾಳಿದ ಕಾಂಗ್ರೆಸ್ಸಿಗರ ಆಡಳಿತದಲ್ಲಿ ದಲಿತರಿಗೆ ಸಿಗಬೇಕಾದ ನ್ಯಾಯ ಸಿಗಲಿಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಹಾಲಿ ಸಂಸದ ಗೋವಿಂದ ಎಂ.ಕಾರಜೋಳ ಹೇಳಿದ್ದಾರೆ.

ರಾಜ್ಯ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ಸಂವಿಧಾನ ಸನ್ಮಾನ ಅಭಿಯಾನ’ ರಾಜ್ಯ ಮಟ್ಟದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಸಂವಿಧಾನಕ್ಕೆ ಈವರೆಗೆ ಒಟ್ಟು 106 ಬಾರಿ ತಿದ್ದುಪಡಿಯಾಗಿದೆ. ಈ ಪೈಕಿ ಕಾಂಗ್ರೆಸ್‌ ಅಧಿಕಾರದ ಅವಧಿಯಲ್ಲಿ 75 ಬಾರಿ ಹಾಗೂ ಕಾಂಗ್ರೆಸೇತರ ಸರ್ಕಾರಗಳು 31 ಬಾರಿ ಸಂವಿಧಾನ ತಿದ್ದುಪಡಿ ಮಾಡಿವೆ ಎಂದರು.

ಕಳೆದ ಲೋಕಸಭಾ ಚುನಾವಣೆ ಮತ್ತು ಕಳೆದ ರಾಜ್ಯ ವಿಧಾನಸಭಾ ಚುನಾವಣೆ ವೇಳೆ ಬಿಜೆಪಿಯವರು ಸಂವಿಧಾನ ಬದಲಿಸುತ್ತಾರೆ ಎಂದು ಕಾಂಗ್ರೆಸ್ಸಿಗರು ಅಪಪ್ರಚಾರ ಮಾಡಿದ್ದರು. ಬಿಜೆಪಿಯವರು ಸಂವಿಧಾನ ವಿರೋಧಿಗಳಾಗಿದ್ದಾರೆ ಎಂದು ಮಾಡಿದ್ದ ಅಪಪ್ರಚಾರ ಬಹಳಷ್ಟು ಕೆಲಸ ಮಾಡಿತ್ತು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಮಾತ್ರವಲ್ಲದೇ ಅನೇಕ ಹಿಂದುಳಿದ ವರ್ಗಗಳು ಇದನ್ನು ನಂಬಿದ್ದರು ಎಂದು ಹೇಳಿದರು.

ನಮ್ಮವರ ಹೇಳಿಕೆಯಿಂದ ಸೋಲು:

ಇಂದಿಗೂ ಕಾಂಗ್ರೆಸ್ಸಿನ ಅನೇಕ ನಾಯಕರು ಅಪಪ್ರಚಾರದಲ್ಲಿ ತೊಡಗಿದ್ದಾರೆ. ಆ ಅಪಪ್ರಚಾರಕ್ಕೆ ನಮ್ಮ ಕಡೆಯಿಂದ ಸಮರ್ಪಕ ಉತ್ತರ ನೀಡದೇ ಇರುವುದರಿಂದ ಅವರು ಹೇಳಿದ ಅನೇಕ ವಿಷಯಗಳನ್ನು ದಲಿತರು ಇಂದಿಗೂ ನಂಬುವಂತಹ ಸ್ಥಿತಿ ನಿರ್ಮಾಣವಾಗಿದೆ. ಯಾರೋ ಒಬ್ಬರು ಯಾವುದೋ ಕಾಲಘಟ್ಟದಲ್ಲಿ ಯಾವುದೋ ಕಾರ್ಯಕ್ರಮದಲ್ಲಿ ಬಿಜೆಪಿಯವರು ಸಂವಿಧಾನ ಬದಲಿಸುತ್ತೇವೆ ಎಂದು ನೀಡಿದ್ದ ಹೇಳಿಕೆಯ ಪರಿಣಾಮ ನಾವು 2018ರ ಚುನಾವಣೆ ಸೋಲಬೇಕಾಯಿತು. ನಾವೆಲ್ಲರೂ ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

ಮೀಸಲಾತಿ ಉದ್ದೇಶ ಈಡೇರಿಲ್ಲ:

ಇದು ಕೇವಲ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜವಾಬ್ದಾರಿ ಅಷ್ಟೇ ಅಲ್ಲ. ನಮ್ಮ ಪಕ್ಷ ಇದನ್ನು ಸಮರ್ಥವಾಗಿ ಎದುರಿಸಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿಷಯ ಬಂದಾಗ ಕೇವಲ ಅವರಷ್ಟೇ ಉತ್ತರ ಕೊಡಬೇಕು ಎಂಬುದಲ್ಲ. ಅದರಲ್ಲಿ ಎಲ್ಲೋ ಒಂದು ಕಡೆ ನಾವು ಹಿಂದೆ ಬಿದ್ದಿದ್ದೇವೆ ಎಂದರೆ ತಪ್ಪು ತಿಳಿಯಬೇಡಿ. ದೇಶಕ್ಕೆ ಸಂವಿಧಾನ ನೀಡಿದ ಡಾ। ಬಿ.ಆರ್‌.ಅಂಬೇಡ್ಕರರ ಚಿಂತನೆಗಳು 75 ವರ್ಷಗಳ ಬಳಿಕವೂ ಸಾಕಾರಗೊಂಡಿಲ್ಲ. ಮೀಸಲಾತಿ ಉದ್ದೇಶವೂ ಸಂಪೂರ್ಣವಾಗಿ ಈಡೇರಿಲ್ಲ ಎಂದು ಇದೇ ವೇಳೆ ಕಾರಜೋಳ ಬೇಸರಿಸಿದರು.

ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ವಿ.ಸುನೀಲ್ ಕುಮಾರ್‌, ಪಿ.ರಾಜೀವ್‌, ರಾಜ್ಯ ಉಪಾಧ್ಯಕ್ಷ ಎನ್‌.ಮಹೇಶ್‌, ವಿಧಾನ ಪರಿಷತ್‌ ಸದಸ್ಯರಾದ ಸಿ.ಟಿ.ರವಿ, ಎನ್‌.ರವಿಕುಮಾರ್‌ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹರಿಹರ ಪ್ರಮುಖ ರಸ್ತೆಗಳಲ್ಲಿ ಬೀದಿದೀಪ, ಸಿಸಿ ಕ್ಯಾಮೆರಾ ಅಳವಡಿಸಿ
ಪ್ರೀತಿಸುವಂತೆ ಪೊಲೀಸ್‌ ಇನ್‌ಸ್ಪೆಕ್ಟರ್‌ಬೆನ್ನತ್ತಿದ್ದ ಮಹಿಳೆ ಈಗ ಜೈಲು ಪಾಲು