ಶಿರಹಟ್ಟಿ: ಭಾರತವು ಒಕ್ಕೂಟ ವ್ಯವಸ್ಥೆಯ ರಾಷ್ಟ್ರವಾಗಿದ್ದು, ನಮ್ಮ ದೇಶದ ಏಳ್ಗೆಗಾಗಿ ನಾವೆಲ್ಲರೂ ಏಕತೆಯಿಂದ ಇರಬೇಕು. ಸರ್ದಾರ ವಲ್ಲಭಭಾಯಿ ಪಟೇಲ್ ಅವರ ದೂರದೃಷ್ಟಿಯನ್ನು ಇಂದಿನ ಯುವ ಪೀಳಿಗೆ ಅಳವಡಿಸಿಕೊಳ್ಳಬೇಕು ಎಂದು ಪಿಎಸ್ಐ ಈರಪ್ಪ ರಿತ್ತಿ ಹೇಳಿದರು.
ಕೇಂದ್ರ ಗೃಹ ಸಚಿವಾಲಯವು ಅ. ೩೧ನ್ನು ರಾಷ್ಟ್ರೀಯ ಏಕತಾ ದಿನವನ್ನಾಗಿ ಘೋಷಿಸಿದ್ದು, ಇದು ನಮ್ಮ ದೇಶದ ಏಕತೆ, ಸಮಗ್ರತೆ ಮತ್ತು ಭದ್ರತೆಯ ಸಂಕೇತವಾಗಿದೆ. ಈ ದಿನದಂದು ದೇಶದ ಏಕತೆ, ಸಮಗ್ರತೆ ಮತ್ತು ಭದ್ರತೆ ಕಾಪಾಡಲು ನಮ್ಮನ್ನು ನಾವು ಸಮರ್ಪಿಸಿಕೊಳ್ಳುವ ದಿನವಾಗಿದೆ. ಸ್ವತಂತ್ರ ಭಾರತದ ಮೊದಲ ಉಪ ಪ್ರಧಾನಿ ಮತ್ತು ಗೃಹ ಸಚಿವರಾಗಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಅನೇಕ ರಾಜಪ್ರಭುತ್ವ ಸಂಸ್ಥಾನಗಳನ್ನು ಒಟ್ಟುಗೂಡಿಸಿ, ಒಂದೇ ಒಕ್ಕೂಟ ವ್ಯವಸ್ಥೆ ರಚಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದರು ಎಂದು ಹೇಳಿದರು.ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಬಿ.ಜಿ. ಗಿರಿತಿಮ್ಮಣ್ಣವರ, ಎಫ್.ಎಂ. ಡಬಾಲಿ ಕಾಲೇಜಿನ ಪ್ರಾಚಾರ್ಯ ಎಂ.ಸಿ. ಭಜಂತ್ರಿ, ರಾಜೇಶ್ವರಿ ಸಂಶಿ ಮತ್ತು ಉಪನ್ಯಾಸಕ ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ದುಡ್ಡು ಕೊಟ್ಟು ಉಸಿರಾಡುವ ಸ್ಥಿತಿಗೆ ಬಂದಿದ್ದೇವೆ: ನಮಗಿರುವುದು ಒಂದೇ ಭೂಮಿ- ಒಂದೇ ಪರಿಸರ, ಅದರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು. ಅರಣ್ಯನಾಶದಿಂದ ಸ್ವಾಭಾವಿಕವಾಗಿ ದೊರೆಯುವ ಆಮ್ಲಜನಕಕ್ಕೆ ದುಡ್ಡು ಕೊಟ್ಟು ಉಸಿರಾಡುವ ಪರಿಸ್ಥಿತಿಗೆ ಬಂದಿದ್ದೇವೆ ಎಂದು ಪಿಎಸ್ಐ ಈರಪ್ಪ ರಿತ್ತಿ ಕಳವಳ ವ್ಯಕ್ತಪಡಿಸಿದರು.ಸರ್ದಾರ ವಲ್ಲಭಭಾಯಿ ಪಟೇಲ್ ಅವರ ೧೫೦ನೇ ಜನ್ಮದಿನದ ಪ್ರಯುಕ್ತ ಶುಕ್ರವಾರ ಪಟ್ಟಣದ ಪೊಲೀಸ್ ಠಾಣಾ ಆವರಣದಲ್ಲಿ ಸಸಿ ನೆಡುವ ಮೂಲಕ ರಾಷ್ಟ್ರೀಯ ಏಕತಾ ದಿನ ಆಚರಿಸಿ ಅವರು ಮಾತನಾಡಿದರು. ಪರಿಸರದಲ್ಲಿ ಈಗಾಗಲೇ ಅಮ್ಲಜನಕ ಪ್ರಮಾಣ ಕಡಿಮೆಯಾಗುತ್ತಿದೆ. ಅದರ ಪರಿಣಾಮಗಳನ್ನು ಕೊರೋನಾ ಸಂದರ್ಭದಲ್ಲಿ ನಾವೆಲ್ಲರೂ ಅನುಭವಿಸಿದ್ದೇವೆ. ಮುಂದೆ ಅಂಥ ಪರಿಸ್ಥಿತಿ ಎದುರಾಗದಂತೆ ಇರಲು ಹೆಚ್ಚು ಗಿಡಗಳನ್ನು ಬೆಳೆಸಬೇಕಾದ ಅಗತ್ಯ ಇದೆ. ಮನುಷ್ಯನಿಗೆ ಅಗತ್ಯವಾಗಿ ಬೇಕಾಗಿರುವ ಆಮ್ಲಜನಕವನ್ನು ಸ್ವಾಭಾವಿಕವಾಗಿ ಪಡೆಯಲು ಮರ-ಗಿಡಗಳ ಅಗತ್ಯ ತುಂಬಾ ಇದೆ ಎಂದು ಹೇಳಿದರು.
ಪೊಲೀಸ್ ಇಲಾಖೆಯ ಎಸ್.ಟಿ. ಕಡಬಿನ, ಸೋಮಶೇಖರ ರಾಮಗೇರಿ, ಲೋಕೇಶ ಲಮಾಣಿ, ರಾಘವೇಂದ್ರ ಬೆಂಗಳೂರು, ಬಸವರಾಜ ಹೊಸಮನಿ, ಮಹ್ಮದ ಕನಕವಾಡ, ಕುಸುಮಾ ಕೂಬಿಹಾಳ, ಅನಿತಾ ರಗಟಿ, ಯಲ್ಲಮ್ಮ ಧನವೆ ಇದ್ದರು.