ಕನ್ನಡಪ್ರಭ ವಾರ್ತೆ ಬೈಲಹೊಂಗಲ
ಪ್ರತಿ ಗ್ರಾಹಕರಿಗೂ ಬ್ಯಾಂಕಿಂಗ್ ಸೌಲಭ್ಯ ಹಾಗೂ ಸರ್ಕಾರದ ವಿವಿಧ ಸಾಲ, ವಿಮೆ, ಉಳಿತಾಯ ಮತ್ತು ಪಿಂಚಣಿ ಯೋಜನೆಗಳು ಲಭ್ಯವಾಗುವಂತೆ ಮಾಡುವುದು ನಮ್ಮ ಉದ್ದೇಶ ಎಂದು ಬೆಂಗಳೂರಿನ ರಿಸರ್ವ್ ಬ್ಯಾಂಕ್ ಆಪ್ ಇಂಡಿಯಾದ ಸಹಾಯಕ ಪ್ರಧಾನ ವ್ಯವಸ್ಥಾಪಕ ಆರ್.ಪ್ರಭಾಕರನ್ ಹೇಳಿದರು.ತಾಲೂಕಿನ ಸಂಪಗಾಂವ ಗ್ರಾಮದಲ್ಲಿ ಕೆನರಾ ಬ್ಯಾಂಕ್ನಿಂದ ನಡೆದ ಮೇಘಾ ಹಣಕಾಸು ಸೇರ್ಪಡೆ ಸ್ಯಾಚುರೇಷನ್ ಹಾಗೂ ರಿ-ಕೆವೈಸಿ ಕಾರ್ಯಕ್ರಮದಲ್ಲಿ ಮಾತನಾಡಿದರು.ಕೆನರಾ ಬ್ಯಾಂಕ್ ಜಿಲ್ಲಾ ಮುಖ್ಯ ವ್ಯವಸ್ಥಾಪಕ ಪ್ರಶಾಂತ ಘೋಡಕೆ ಮಾತನಾಡಿ, ಗೃಹ, ಶಿಕ್ಷಣ, ವ್ಯವಹಾರ ಸಾಲ, ಸ್ವಯಂ ಉದ್ಯೋಗಿಗಳಿಗೆ ನೆರವು, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಪ್ರೋತ್ಸಾಹ ಹಾಗೂ ಮಹಿಳಾ ಸ್ವಸಹಾಯ ಸಂಘಗಳಿಗೆ ವಿಶೇಷ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಎನ್ಆರ್ಎಲ್ಎಂ ವ್ಯವಸ್ಥಾಪಕ ಪ್ರಕಾಶ ಗುಂಡಗವಿ ಮಾತನಾಡಿ, ಈ ಯೋಜನೆಯಲ್ಲಿ ಸಾಕಷ್ಟು ಸ್ವ ಸಹಾಯ ಸಂಘಗಳು ಬ್ಯಾಂಕ್ನಿಂದ ಸಾಲ ಸೌಲಭ್ಯ ಪಡೆದು ಉದ್ಯಮಿಗಳಾಗಿದ್ದಾರೆ. ಪ್ರತಿಯೊಬ್ಬರೂ ಕೇಂದ್ರ ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆಗಳನ್ನು ಬಳಸಿಕೊಳ್ಳುವಂತೆ ತಿಳಿಸಿದರು.ಬ್ಯಾಂಕ್ನ ಆರ್ಥಿಕ ಸಮಾಲೋಚಕಿ ಗೀತಾ ಖಾನಪೇಠ, ವಿವಿಧ ಸಾಲ ಮತ್ತು ವಿಮಾ ಯೋಜನೆಗಳ ಬಗ್ಗೆ ವಿವರಿಸಿದರು.
ಈ ವೇಳೆ ಮರಣ ಹೊಂದಿದ ವಿಮಾ ಪಾಲಿಸಿದಾರರ ವಾರಸುದಾರರಿಗೆ ₹ 2 ಲಕ್ಷ ಚೆಕ್ ವಿತರಿಸಿದರು. ಸಂಜೀವಿನಿ ಒಕ್ಕೂಟದಿಂದ ಮಾಸಿಕ ಸಂತೆ ಆಯೋಜಿಸಲಾಗಿತ್ತು. ಬ್ಯಾಂಕ್ ಅಧಿಕಾರಿಗಳು ಸ್ವ-ಸಹಾಯ ಸಂಘದ ಸದಸ್ಯರು ತಯಾರಿಸಿದ ಉತ್ಪಗಳನ್ನು ಖರೀದಿಸುವ ಮೂಲಕ ಪ್ರೋತ್ಸಾಹಿಸಿದರು. ಗ್ರಾಪಂ ಅಧ್ಯಕ್ಷ ಅನಿಲ ನೇಸರಗಿ, ಬೆಳಗಾವಿ ಕೆನರಾ ಬ್ಯಾಂಕ್ ಸಹಾಯಕ ಪ್ರಧಾನ ವ್ಯವಸ್ಥಾಪಕಿ ವಿದ್ಯಾ, ವಿಭಾಗೀಯ ವ್ಯವಸ್ಥಾಪಕ ಅನಿಲಕುಮಾರ, ಕಾರ್ತಿಕ ಕುಮಾರ ಶಾಂಡಿಲ್ಯ, ನಾಗನಗೌಡ ಪಾಟೀಲ, ಸೋಮನಾಥ ಹುನಗುಂದ, ಅಭಿಷೇಕ ರಂಜನ, ಅಬ್ಬಾಸಲಿ, ಗ್ರಾಪಂ ಸದಸ್ಯರು, ಸಂಘದ ಸದಸ್ಯರು, ಇತರರು ಇದ್ದರು.