ನಶೆಮುಕ್ತ ಭಾರತಕ್ಕೆ ಪ್ರತಿಯೊಬ್ಬರು ಪಣತೊಡಿ

KannadaprabhaNewsNetwork | Published : Jun 27, 2025 12:49 AM

ಮಾದಕ ವಸ್ತುಗಳಿಗೆ ಹೆಚ್ಚಾಗಿ ಹದಿ-ಹರೆಯದವರು, ವಿದ್ಯಾರ್ಥಿಗಳು, ಕಾರ್ಮಿಕರು, ಶ್ರಮಜೀವಿಗಳು, ನಿರುದ್ಯೋಗಿಗಳು, ಪದೇ ಪದೇ ನೋವು-ನಿರಾಸೆಗೆ ಒಳಗಾದವರು ತುತ್ತಾಗುತ್ತಿದ್ದಾರೆ.

ಕೊಪ್ಪಳ:

ಯುವಜನತೆ ದುಶ್ಚಟಗಳಿಗೆ ದಾಸರಾಗಿದ್ದು. ಮಾದಕ ವಸ್ತುಗಳಾದ ಗಾಂಜಾ, ಅಫೀಮ್, ಕುಡಿತ, ಡ್ರಗ್ಸ್‌ ಸೇವನೆ, ಬೀಡಿ, ಸಿಗರೇಟ್, ತಂಬಾಕು ಸೇವನೆ ಮಾಡುವವರ ಸಂಖ್ಯೆ ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಹೆಚ್ಚಾಗಿ ಕಂಡುಬರುತ್ತಿದ್ದು, ಭಾರತವನ್ನು ನಶೆಮುಕ್ತ ಮಾಡಲು ಪ್ರತಿಯೊಬ್ಬರು ತಮ್ಮ ಗ್ರಾಮ ಮತ್ತು ವಾರ್ಡ್‌ಗಳಲ್ಲಿ ಅರಿವು ಮೂಡಿಸಬೇಕು ಎಂದು ಮಾನಸಿಕ ರೋಗ ತಜ್ಞೆ ಡಾ. ಲಕ್ಷ್ಮೀದೇವಿ ಪಾಟೀಲ ಹೇಳಿದರು.

ನಗರದ ಚಂದ್ರಮುಖಿ ಸ್ಕೂಲ್ ಆಫ್ ನರ್ಸಿಂಗ್ ಕಾಲೇಜ್‌ನಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳ ಕಚೇರಿ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ, ಕೊಪ್ಪಳ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಮತ್ತು ಅಕ್ರಮ ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆ ಅಂಗವಾಗಿ ನಡೆದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಾದಕ ವಸ್ತುಗಳಿಗೆ ಹೆಚ್ಚಾಗಿ ಹದಿ-ಹರೆಯದವರು, ವಿದ್ಯಾರ್ಥಿಗಳು, ಕಾರ್ಮಿಕರು, ಶ್ರಮಜೀವಿಗಳು, ನಿರುದ್ಯೋಗಿಗಳು, ಪದೇ ಪದೇ ನೋವು-ನಿರಾಸೆಗೆ ಒಳಗಾದವರು ತುತ್ತಾಗುತ್ತಿದ್ದಾರೆ. ಇದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗಿ ಜಠರ ಸಮಸ್ಯೆ, ವಿಟಮಿನ್ ಕೊರತೆ, ಲಿವರ್ ಕಾಯಿಲೆ, ಹೃದಯರೋಗ, ಮೆದುಳು ಮತ್ತು ಮೂತ್ರ ಜನಕಾಂಗಗಳಿಗೆ ಸಂಬಂಧಿಸಿದ ಕಾಯಿಲೆ, ಅಪಘಾತ, ಸಾವು-ನೋವು ಹೆಚ್ಚಳವಾಗುತ್ತಿವೆ. ವಿದ್ಯಾರ್ಥಿಗಳು ಈ ಬಗ್ಗೆ ತಿಳಿದುಕೊಂಡು ನಾಗರಿಕರಿಗೆ ಅರಿವು ಮೂಡಿಸಬೇಕೆಂದು ಕರೆ ನೀಡಿದರು.

ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವಿ.ಪಿ ಮಾತನಾಡಿ, ಮಾದಕ ವಸ್ತುಗಳ ಸೇವನೆಯಿಂದ ದೂರವಿದ್ದು, ದೇಶದ ಅಭಿವೃದ್ಧಿಯತ್ತ ಗಮನ ಹರಿಸಬೇಕು. ಮಾದಕ ವಸ್ತುಗಳ ಸೇವನೆಗೆ ತುತ್ತಾದವರನ್ನು ಮೊದನೇ ಹಂತದಲ್ಲಿ ಗುರುತಿಸಿ ಆಸ್ಪತ್ರೆಗೆ ಕಳುಹಿಸಬೇಕು. ಆಪ್ತ ಸಮಾಲೋಚನೆಗೆ ಒಳಪಡಿಸಬೇಕು ಮತ್ತು ತಾವು ವಾಸಿಸುವ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವ್ಯಸನಕ್ಕೆ ಬಲಿಯಾದವರನ್ನು ಮೇಲ್ಕಾಣಿಸಿದ ಚಿಕಿತ್ಸಾ ಕೇಂದ್ರಗಳಿಗೆ ಕಳುಹಿಸಿ ಆರೋಗ್ಯವಂತ ಸಮಾಜ ನಿರ್ಮಿಸುವುದು ಮತ್ತು ವ್ಯಸನಮುಕ್ತ ಕೊಪ್ಪಳ ಜಿಲ್ಲೆ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಹೇಳಿದರು.

ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಮಹೇಶ ಉಮಚಗಿ ಕ್ಷಯರೋಗ ನಿರ್ಮೂಲನೆ, ಕುಷ್ಠರೋಗ ನಿರ್ಮೂಲನೆ ಕುರಿತು ಮಾತನಾಡಿದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಗಂಗಮ್ಮ ಸಾಂಕ್ರಾಮಿಕ ಹಾಗೂ ಅಸಾಂಕ್ರಾಮಿಕ ರೋಗಗಳ ಬಗ್ಗೆ, ಕುಟುಂಬ ಕಲ್ಯಾಣ ಕಾರ್ಯಕ್ರಮ ಬಗ್ಗೆ ವಿವರಿಸಿದರು. ಕಾರ್ಯಕ್ರಮದಲ್ಲಿ ಮನಶಾಸ್ತ್ರಜ್ಞೆ ಪುಷ್ಪಾ ತೆರೇಸಾ, ಕಾಲೇಜಿನ ಆಡಳಿತಾಧಿಕಾರಿ ರಕ್ಷಿತ್ ವಸ್ತ್ರದ್, ಪ್ರಾಂಶುಪಾಲ ಆನಂದ ಹಳ್ಳಿಗುಡಿ, ಉದಯ, ಪರಶುರಾಮ, ಶ್ರೀನಿವಾಸ, ಕಾಲೇಜಿನ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಭಾಗವಹಿಸಿದ್ದರು.