ತಾಲೂಕಿನ ಮರ್ಕಲ್ ಪಂಚಾಯಿತಿ ಕಿಗ್ಗಾದಲ್ಲಿ ಗ್ರಾಮ ಆರೋಗ್ಯ ತರಬೇತಿ ಕಾರ್ಯಕ್ರಮ
ಮನುಷ್ಯನು ಉತ್ತಮವಾಗಿ ಬದುಕಲು ನೆಮ್ಮದಿ ಬೇಕು. ನೆಮ್ಮದಿ ಸಿಗಬೇಕಾದರೆ ಆರೋಗ್ಯ ಉತ್ತಮ ವಾಗಿರಬೇಕು. ಆದ್ದರಿಂದ ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ದಯಾನಂದ್ ಹೇಳಿದರು.
ತಾಲೂಕಿನ ಮರ್ಕಲ್ ಪಂಚಾಯಿತಿ ಕಿಗ್ಗಾದಲ್ಲಿ ತಾಲೂಕು ಪಂಚಾಯಿತಿ, ಮರ್ಕಲ್ ಗ್ರಾಮ ಪಂಚಾಯಿತಿ ಹಾಗೂ ಆರೋಗ್ಯ , ಮಹಿಳಾ ಮತ್ತು ಮಕ್ಕಳ ಇಲಾಖೆ ಆಶ್ರಯದಲ್ಲಿ ನಡೆದ ಗ್ರಾಮ ಆರೋಗ್ಯ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಗ್ರಾಮಗಳ ಪರಿಸರ, ನೈರ್ಮಲ್ಯಕ್ಕೆ ಆದ್ಯತೆ ನೀಡಬೇಕು. ವಾತಾವರಣ ಸ್ವಚ್ಛವಾಗಿದ್ದರೆ ಖಾಯಿಲೆಗಳಿಂದ ದೂರವಿರಬಹುದು. ಮಲೆರಿಯಾ, ಡೆಂಘೀ ನಂತಹ ಕಾಯಿಲೆಗಳು ಬರುವುದು ಇದರಿಂದಲೇ ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದರು.ಮನುಷ್ಯನಿಗೆ ಎಷ್ಟೇ ಹಣ, ಆಸ್ತಿ ಇದ್ದರೂ ನೆಮ್ಮದಿ ಎನ್ನುವುದು ಮುಖ್ಯ. ಆರೋಗ್ಯ ಕಾಪಾಡಿಕೊಂಡರೆ ನೆಮ್ಮದಿ ಸಿಗುತ್ತದೆ. ಆರೋಗ್ಯ ಇಲಾಖೆಯಿಂದ ಜನರಲ್ಲಿ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಅಭಿಯಾನ, ಜಾಥಾ ಮಾಡಲಾಗುತ್ತಿದೆ.ಜನರಲ್ಲಿ ಅರಿವು ಮೂಡಿಸುವ ಕೆಲಸ ನಡೆಸಲಾಗುತ್ತಿದೆ.
ಕೋವೀಡ್ ನಿಯಂತ್ರಣದಲ್ಲಿ ಗ್ರಾಮ ಪಂಚಾಯಿತಿ ಕಾರ್ಯಪಡೆ ತಂಡಗಳು ಯಶಸ್ವಿಯಾದ ಹಿನ್ನೆಲೆ ಯಲ್ಲಿ ಗ್ರಾಮ ಆರೋಗ್ಯ ಕಾರ್ಯಕ್ರಮವನ್ನು ಕಾರ್ಯಪಡೆ ಸಮಿತಿ ಮೇಲ್ವಿಚಾರಣೆಯಲ್ಲಿ ಆರಂಭಿಸಲಾಗಿದೆ. ಗ್ರಾಮದಲ್ಲಿರುವ ಸಮಿತಿಗಳು ಕಾರ್ಯಕ್ರಮ ರಚನೆಗಳು,ಇಲಾಖಾ ವ್ಯಕ್ತಿಗಳನ್ನು ಒಗ್ಗೂಡಿಸಿ ಇಂತಹ ಕಾರ್ಯಕ್ರಮಗಳನ್ನು ಕಾರ್ಯರೂಪಕ್ಕೆ ತರಲಾಗುತ್ತಿದೆ.
ಕಾರ್ಯಕ್ರಮದಲ್ಲಿ ಮರ್ಕಲ್ ಗ್ರಾಪಂ ಅಧ್ಯಕ್ಷ ಮಹೇಶ್, ಆರೋಗ್ಯ ಇಲಾಖೆಯ ಪಿ.ಪಿ.ಬೇಬಿ, ಶೃಷ್ಯ ಶೃಂಗೇಶ್ವರ, ಕಲಾವತಿ ,ಶ್ರೀಮತಿ ಸೃಷ್ಠಿ, ಗ್ರಾಪಂ ಉಪಾಧ್ಯಕ್ಷೆ ಸುಮನ, ಪಿಡಿಒ ರಘುವೀರ್, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಮತ್ತಿತರರು ಉಪಸ್ಥಿತರಿದ್ದರು.
ಶೃಂಗೇರಿ ತಾಲೂಕಿನ ಕಿಗ್ಗಾದಲ್ಲಿ ನಡೆದ ಗ್ರಾಮ ಆರೋಗ್ಯ ತರಬೇತಿ ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ದಯಾನಂದ್ ಮಾತನಾಡಿದರು.