ಪ್ರತಿಯೊಬ್ಬರು ಕಾನೂನು ಅರಿಯುವುದು ಅಗತ್ಯ: ನ್ಯಾ. ಎಸ್.ನಾಗಶ್ರೀ

KannadaprabhaNewsNetwork | Published : Nov 11, 2024 12:58 AM

ಸಾರಾಂಶ

ಕಲಬುರಗಿ ನ್ಯಾಯಾಲಯ ಆವರಣದಲ್ಲಿ ಕಾನೂನು ಅರಿವು ನೆರವು ಕಾರ್ಯಕ್ರಮಕ್ಕೆ ಚಾಲನೆ. ಬಡವರಿಗೆ, ಮಹಿಳೆಯರಿಗೆ, ಹಿಂದುಳಿದವರಿಗೆ ಉಚಿತವಾಗಿ ಕಾನೂನಿನ ನೆರವು ನೀಡಲು ಪ್ರತಿ ಮೂರು ತಿಂಗಳಿಗೆ ಲೋಕ ಅದಾಲತ್ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತೇವೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಪ್ರತಿಯೊಬ್ಬ ವ್ಯಕ್ತಿಗೆ ಕಾನೂನಿನ ಮಾಹಿತಿ ಬೇಕಾಗುತ್ತದೆ. ದೈನಂದಿನ ಜೀವನದಲ್ಲಿ ಸಮಸ್ಯೆಗಳು ಬರುತ್ತವೆ. ಅದನ್ನ ಕಾನೂನು ರೀತಿಯಲ್ಲಿ ಬಗೆಹರಿಸಿಕೊಳ್ಳಲು ಕಾನೂನಿನ ಬಗ್ಗೆ ತಿಳಿದುಕೊಳ್ಳಲು ಜಾಗೃತಿ ಮೂಡಿಸುವ ಕೆಲಸ ಪ್ರತಿಯೊಬ್ಬರು ಮಾಡಬೇಕೆಂದು ಜಿಲ್ಲಾ ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆ ಪ್ರಾಧಿಕಾರ ಅಧ್ಯಕ್ಷೆ ಎಸ್. ನಾಗಶ್ರೀ ಅವರು ಹೇಳಿದರು.

ಜಿಲ್ಲಾ ನ್ಯಾಯಾಲಯ ಅವರಣದಲ್ಲಿರುವ ಎಡಿಆರ್‌ ಕಟ್ಟಡದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಶ್ರಯದಲ್ಲಿ ಹಮ್ಮಿಕೊಂಡಿದ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮಕ್ಕೆ ಸಸಿಗೆ ನೀರೆರೆಯುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

ರಾಷ್ಟ್ರೀಯ ಕಾನೂನಿನ ಸೇವೆಗಳ ದಿನಾಚರಣೆ ಮುಖ್ಯ ಉದ್ದೇಶ ಬಡವರಿಗೆ, ಮಹಿಳೆಯರಿಗೆ, ಹಿಂದುಳಿದವರಿಗೆ ಉಚಿತವಾಗಿ ಕಾನೂನಿನ ನೆರವು ನೀಡಲು ಪ್ರತಿ ಮೂರು ತಿಂಗಳಿಗೆ ಲೋಕ ಅದಾಲತ್ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತೇವೆ. ಈಗಾಗಲೆ ಅನೇಕ ಜನರಿಗೆ ತಮ್ಮ ಸಮಸ್ಯೆಗಳು ಪರಿಹರಿಸಲಾಗಿದೆ ಎಂದರು.

ಈಗಿನ ಕಾಲದ ಹೆಣ್ಣಮಕ್ಕಳು ಹೊರಗಡೆ ಕೆಲಸ ಮಾಡಿ ತಮ್ಮ ಕುಟುಂಬಕ್ಕೆ ಆರ್ಥಿಕವಾಗಿ ಸಹಕಾರಿಸುತ್ತ ಇದ್ದಾರೆ. ಕೆಲಸ ಸ್ಥಳದಲ್ಲಿ ಸಮಸ್ಯೆ ಬಂದಾಗ ಅದನ್ನ ಎದುರಿಸಲು ಕಾನೂನಿನ ಅರಿವು ಪಡೆಯುವುದು ಅವಶ್ಯಕವಾಗಿದೆ ಎಂದು ತಿಳಿಸಿದರು.

ಹಿರಿಯ ಸಿವಿಲ್ ನ್ಯಾಯಾಧೀಶರು ಶ್ರೀನಿವಾಸ ನವಲೆ ಮಾತನಾಡಿ, 1995 ನ.9ರಂದು ಕಾನೂನು ಜಾರಿಗೆ ಬಂದಿದ್ದರಿಂದ ಅಂದಿನಿಂದ ಈ ನ.9ರಂದು ರಾಷ್ಟೀಯ ಕಾನೂನು ಅರಿವು ನೆರವು ಕಾರ್ಯಕ್ರಮ ಆಚರಿಸುತ್ತಿದ್ದೇವೆ. ಮನುಷ್ಯನಿಗೆ ಜೀವನದಲ್ಲಿ ಕಾನೂನಿನ ಅರಿವು ಪಡೆಯುವುದು ಮಹತ್ವದಾಗಿದೆ. 15100 ಈ ಸಹಾಯವಾಣಿಗೆ ಕರೆ ಮಾಡಿದರೆ ಉಚಿತವಾಗಿ ಕಾನೂನಿನ ನೆರವು ಪಡೆಯಬಹುದಾಗಿದೆ ಎಂದು ತಿಳಿಸಿದರು.

ಜಿಲ್ಲಾ ನ್ಯಾಯಧೀಶರು ಹಾಗೂ ಅಧ್ಯಕ್ಷರು ಕಾಯಂ ಜನತಾ ನ್ಯಾಯಲಯ ಎಸ್.ಎಲ್ ಚವ್ಹಾಣ್‌, ಹಳ್ಳಿಯಲ್ಲಿ ವಾಸಿಸುವ ಜನರಿಗೆ ಈ ತರಹದ ಕಾರ್ಯಕ್ರಮಗಳ ಮೂಲಕ ಕಾನೂನಿನ ಅರಿವು ನೀಡುವುದು ಅತ್ಯವಶಕವಾಗಿದೆ ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ, ಉಪನಿರ್ದೇಶಕ ರಾಜುಕುಮಾರ ರಾಠೋಡ ಮಾತನಾಡಿದರು.

ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಅಂಗವಾಗಿ ಜಾಗೃತಿ ವಾಹನಕ್ಕೆ ನ್ಯಾ. ಎಸ್. ನಾಗಶ್ರೀ ಅವರು ಚಾಲನೆ ನೀಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಭಿವೃದ್ಧಿ ಯೋಜನಾಧಿಕಾರಿಗಳು ಭೀಮರಾಯ ಕಣ್ಣೂರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪ್ರೇಮಾ, ಸಂಪನ್ಮೂಲ ವ್ಯಕ್ತಿಗಳಾದ ಬಿ.ಎಂ.ರಾವೂರ ಅಂಗನವಾಡಿ ಮೇಲ್ವಿಚಾರಕರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಿಬ್ಬಂದಿ ವರ್ಗದವರು ಹಾಜರಿದ್ದರು.

Share this article