ಹಿರೇಕೆರೂರು: ನಮ್ಮ ಹೃದಯ ಕನ್ನಡಕ್ಕಾಗಿ ಮಿಡಿಯಬೇಕು. ಪ್ರತಿಯೊಬ್ಬರು ಸಾಹಿತ್ಯ ಓದುವ ಹವ್ಯಾಸ ಬೆಳೆಸಿಕೊಳ್ಳುವ ಜತೆಗೆ ನಮ್ಮ ಸಂತತಿಗೂ ಅದನ್ನು ಪರಿಪಾಠವಾಗಿಸಬೇಕು ಎಂದು ರಟ್ಟೀಹಳ್ಳಿ ಕಬ್ಬಿಣಕಂಥಿಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ಪಟ್ಟಣದ ಪೊಲೀಸ್ ಮೈದಾನದಲ್ಲಿ ನಡೆದ 14ನೇ ಹಾವೇರಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡಿದರು. ಸಾಹಿತ್ಯಕ್ಕೆ ಓದುಗರೇ ಜೀವಾಳವಾಗಿದ್ದು, ಸಾಹಿತ್ಯ ರಚನೆಯಿಂದಲೇ ಬದುಕು ಕಟ್ಟಿಕೊಂಡ ಅನೇಕ ಸಾಹಿತಿಗಳು ಇದ್ದಾರೆ. ಅನೇಕ ಲೇಖಕರು ತಮ್ಮ ಕೃತಿಗಳಿಂದಲೇ ವಿಶ್ವವಿಖ್ಯಾತರಾಗಿದ್ದಾರೆ. ಕನ್ನಡ ಜಾಗೃತಿ ಮೂಡಿಸಲು ಸಾಹಿತ್ಯ ಸಮ್ಮೇಳನ ನಡೆಯಬೇಕು ಎಂದು ಸಲಹೆ ನೀಡಿದ ಅವರು ಎಲ್ಲರೂ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು.ಮಾತೃ ಭಾಷೆಯ ಸೊಬಗನ್ನು ಉಳಿಸುವಂತ ಕೆಲಸ ಆಗಬೇಕು.ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಗ್ರಂಥಾಲಯದ ಸದುಪಯೋಗ ಪಡೆಯಬೇಕು ಎಂದು ಹೇಳಿದರು.ಮಾಜಿ ಸಚಿವ ಬಿ.ಸಿ.ಪಾಟೀಲ ಮಾತನಾಡಿ, ಪ್ರತಿಯೊಬ್ಬರು ಕನ್ನಡ ನಾಡು ನುಡಿ ನೆಲ ಜಲದ ಅಭಿಮಾನ ಹೊಂದಿ ಅವುಗಳನ್ನು ಕಾಪಾಡಲು ಸದಾ ಸನ್ನದ್ಧರಾಗಿರಬೇಕು. ಕನ್ನಡ ಸಾಹಿತ್ಯ, ನಾಡಿನ ಪರಂಪರೆಗಳನ್ನು ಉಳಿಸಿ ಬೆಳೆಸುವ ಮೂಲಕ ಮುಂದಿನ ಪೀಳಿಗೆಗೆ ತಿಳಿಸುವ ಕಾರ್ಯ ಮಾಡಬೇಕು ಎಂದರು.ಜಾನಪದ ವಿವಿ ಕುಲ ಸಚಿವ ಎನ್.ಎಂ.ಸಾಲಿ ಮಾತನಾಡಿ, ಕನ್ನಡ ನೆಲ ಜಲ ಸಂರಕ್ಷಣೆ ಮಾಡುವ ಗುರುತರವಾದ ಜವಾಬ್ದಾರಿ ಎಲ್ಲರೂ ಹೊಂದಬೇಕು. ಜಿಲ್ಲೆ ಸಾಹಿತ್ಯ ವಲಯದಲ್ಲಿ ತನ್ನದೇ ಆದ ಪ್ರಾಮುಖ್ಯತೆ ಪಡೆದಿದೆ. ಈ ಸಾಹಿತ್ಯ ಸಮ್ಮೇಳನ ವಿಶಿಷ್ಟ ತೆ ಮೆರೆದಿದೆ ಎಂದರು.ಸಾಹಿತಿ ಸತೀಶ ಕುಲಕರ್ಣಿ ಮಾತನಾಡಿ, 14ನೇ ಹಾವೇರಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಅತ್ಯಂತ ಯಶಸ್ವಿ ಯಾಗಿ ನೆರವೇರಿದೆ. ಮೆರವಣಿಗೆಯಿಂದ ಹಿಡಿದು ಬಹಿರಂಗ ಅಧಿವೇಶನ ವರೆಗೆ ಅತೀ ಅಚ್ಚುಕಟ್ಟಾಗಿ ಸಂಘಟಕರ ನಿರ್ವಹಿಸಿದ್ದಾರೆ. ಅಧಿವೇಶನದ ಮೂಲಕ ಹೊಸ ಮಾತುಗಾರರು, ವಿಚಾರವಾದಿಗಳು, ಕವಿಗಳಿಗೆ ವೇದಿಕೆ ಅವಕಾಶ ಸಿಕ್ಕಿದೆ. ಇದರಿಂದ ಹೊಸ ಪರಂಪರೆ ಹಾಗೂ ಐತಿಹಾಸಿಕ ಸಮ್ಮೇಳನವಾಗಿದೆ ಎಂದರು.ಈ ಸಂದರ್ಭದಲ್ಲಿ ಸಮ್ಮೇಳನದ ಸರ್ವಾಧ್ಯಕ್ಷೆ ಸಂಕಮ್ಮ ಸಂಕಣ್ಣನವರ ಕಸಾಪ ಜಿಲ್ಲಾದ್ಯಕ್ಷ ಲಿಂಗಯ್ಯ ಹಿರೇಮಠ, ತಾಲೂಕು ಅಧ್ಯಕ್ಷ ಎನ್.ಸುರೇಶಕುಮಾರ, ಕೋಶಾಧ್ಯಕ್ಷ ಮಹೇಂದ್ರ ಬಡಳ್ಳಿ, ಗೌರವ ಕಾರ್ಯಧರ್ಶಿ ಪಿ.ಎಸ್. ಸಾಲಿ, ಟಿಎಪಿಸಿಎಂಎಸ್ ಅಧ್ಯಕ್ಷ ಎಸ್.ಎಸ್. ಪಾಟೀಲ, ಸಿಇಎಸ್ ವಿದ್ಯಾ ಸಂಸ್ಥೆಯ ಆಡಳಿತಾಧಿಕಾರಿ ಎಸ್.ವೀರಭದ್ರಯ್ಯ, ಜಿ.ಪಿ. ಪ್ರಕಾಶಗೌಡ, ಹನುಮಂತಗೌಡ ಭರಮಣ್ಣನವರ, ಡಾ. ನಿಂಗಪ್ಪ ಚಳಗೇರಿ, ಕೆ.ಎಚ್. ಮರಿಗೌಡ್ರ, ಸಾಹಿತಿ ಸತೀಶ ಕುಲಕರ್ಣಿ, ಮೇಘರಾಜ ಮಾಳಗಿಮನಿ, ನಾಗರಾಜ ಪುರದ ಸೇರಿದಂತೆ ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.ಸಮ್ಮೇಳನದ ನಿರ್ಣಯಗಳು:1. ಕನ್ನಡ ಶಾಲೆಗಳ ಸಬಲೀಕರಣ ಮಾಡುವುದರೊಂದಿಗೆ ಕನ್ನಡ ಅಸ್ಮಿತೆಯನ್ನು ಬೆಳೆಸುವ ಕಾರ್ಯಕ್ರಮಗಳನ್ನು ರೂಪಿಸಬೇಕು2. ಬೇಡ್ತಿ- ವರದಾ ನದಿಗಳ ಜೋಡಣೆ ಯೋಜನೆಯನ್ನು ಕಾಲಮಿತಿಯಲ್ಲಿ ಜಾರಿಗೊಳಿಸಬೇಕು3. ಮಾಸೂರಿನ ಕೆರೆ ಅಬಲೂರಿನ ಸರ್ವಜ್ಞ ನ ನೆಲೆಯನ್ನು ಅಭಿವೃದ್ಧಿಪಡಿಸಿ ಪ್ರವಾಸಿ ತಾಣವನ್ನಾಗಿಸಬೇಕು4. ಜಿಲ್ಲಾ ಸ್ಥಳದಲ್ಲಿ ಸಾಹಿತ್ಯಭವನ ನಿರ್ಮಾಣ ಮಾಡುವುದುಸಮ್ಮೇಳನದಲ್ಲಿ ಸರ್ವಾನುಮತದಿಂದ ತೆಗೆದುಕೊಂಡ ಈ ನಿರ್ಣಯಗಳನ್ನು ಕಾಲಮಿತಿಯಲ್ಲಿ ಜಾರಿಗೊಳಿಸಬೇಕು ಎಂದು ಈ ಸಮ್ಮೇಳನ ಧ್ವನಿಮತದಿಂದ ಒತ್ತಾಯಿಸಲಾಯಿತು