ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆ ಎಲ್ಲರೂ ಮಾಡಿಸಿ: ಸಿದ್ರಾಮೇಶ್ವರ

KannadaprabhaNewsNetwork | Published : Jan 22, 2025 12:33 AM

ಸಾರಾಂಶ

ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆ ಹಾಗೂ ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆಗಳನ್ನು ಸರ್ಕಾರಿ ನೌಕರರು ಕಡ್ಡಾಯವಾಗಿ ಎಲ್ಲರೂ ಮಾಡಿಸಬೇಕು.

ಕನ್ನಡಪ್ರಭ ವಾರ್ತೆ ಕೊಪ್ಪಳ

ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆ ಹಾಗೂ ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆಗಳನ್ನು ಸರ್ಕಾರಿ ನೌಕರರು ಕಡ್ಡಾಯವಾಗಿ ಎಲ್ಲರೂ ಮಾಡಿಸಬೇಕೆಂದು ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆ ಹಾಗೂ ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆಗಳ ಕುರಿತು ಮಾಹಿತಿ ನೀಡಲು ಅಧಿಕಾರಿಗಳಿಗೆ ಕರೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಯೋಜನೆಗಳನ್ನು ನಾನು ಮಾಡಿಕೊಂಡಿದ್ದು, ನನ್ನ ಕುಟುಂಬದವರ ಹೆಸರಿನಲ್ಲಿ ಮಾಡಿಸಿದ್ದೇನೆ. ತಾವುಗಳು ಇವುಗಳನ್ನು ಮಾಡಿಕೊಳ್ಳಬೇಕು ಮತ್ತು ತಮ್ಮ ಕಚೇರಿಯಲ್ಲಿರುವ ಸಿಬ್ಬಂದಿಗೂ ಈ ಮಾಹಿತಿ ನೀಡಿ. ಇದು ಸರ್ಕಾರಿ ನೌಕರರು ಮಾತ್ರವಲ್ಲದೆ ಸಾರ್ವಜನಿಕರು ಈ ಪಾಲಿಸಿ ಮಾಡಿಕೊಂಡರೆ ಅವರಿಗೂ ತುಂಬಾ ಅನುಕೂಲವಾಗಲಿದ್ದು. ಸಾಮಾನ್ಯ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಇದನ್ನು ಜಾರಿಗೆ ತರಲಾಗಿದೆ ಎಂದು ಹೇಳಿದರು.

ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆಗೆ ವಾರ್ಷಿಕ ಕೇವಲ ₹20 ಕಟ್ಟಿದರೆ 2 ಲಕ್ಷ ದುರ್ಘಟನಾ ವಿಮೆ ಸಿಗಲಿದ್ದು, 18ರಿಂದ 70 ವರ್ಷದ ವರೆಗಿನ ಪ್ರಾಯದ ಎಲ್ಲ ಸೇವಿಂಗ್ಸ್ ಬ್ಯಾಂಕ್ ಖಾತೆದಾರರು ಈ ಪಾಲಿಸಿ ಮಾಡಬಹುದಾಗಿದೆ. ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆ ವಾರ್ಷಿಕ ಪ್ರಿಮಿಯಂ ₹ 436 ಕಟ್ಟಿದರೆ 2 ಲಕ್ಷ ಜೀವ ವಿಮೆ 18ರಿಂದ 50 ವರ್ಷದ ಪ್ರಾಯದ ಎಲ್ಲಾ ಸೇವಿಂಗ್ ಬ್ಯಾಂಕ್ ಖಾತೆದಾರರು ಈ ಪಾಲಿಸಿ ಮಾಡಿಕೊಳ್ಳಬಹುದಾಗಿದೆ ಎಂದು ಹೇಳಿದರು.

ಎಸ್‌ಬಿಐ ಬ್ಯಾಂಕಿನ ಎಲ್.ಡಿ.ಎಂ. ವೀರೇಂದ್ರ ಕುಮಾರ್ ಮಾತನಾಡಿ, ನಮ್ಮನ್ನು ನಂಬಿದವರಿಗೆ ಸೆಕ್ಯುರಿಟಿ ಇಟ್ಟು ಸಾಯಬೇಕು. ವಿಶೇಷವಾಗಿ ಹಳ್ಳಿಗಾಡಿನ ಜನರಿಗೆ ಈ ಯೋಜನೆಗಳಿಂದ ತುಂಬಾ ಉಪಯೋಗವಾಗಲಿದೆ. ಕಡಿಮೆ ಪ್ರಿಮಿಯಂ ಕಟ್ಟಿದರೆ ಸಾಕು ಇದರ ಲಾಭ ಸಿಗಲಿದೆ. ಇದಕ್ಕೆ ಭಾರತ ದೇಶದ ಎಲ್ಲಾ ನಾಗರಿಕರು ಅರ್ಹರು. ಯಾವುದೇ ಬ್ಯಾಂಕಿನಲ್ಲಿ ತಮ್ಮ ಅಕೌಂಟ್ ಇದ್ದರೆ ಆಟೊ ಡೆಬಿಟ್ ಆಗುತ್ತದೆ. 18 ವರ್ಷ ಮೇಲ್ಪಟ್ಟ ಎಲ್ಲರೂ ಈ ಪಾಲಿಸಿ ಮಾಡಿಕೊಳ್ಳಲು ಹೇಳಬೇಕು. ಈ ಕುರಿತು ತಮ್ಮ ಅಕ್ಕಪಕ್ಕದವರಿಗೂ ಮಾಹಿತಿ ನೀಡಿ. ಇದರ ರಾಜ್ಯದ ಗುರಿ 22 ಪ್ರತಿಶತ ಆಗಿದ್ದು ನಮ್ಮ ಜಿಲ್ಲೆಯಲ್ಲಿ 23 ಪ್ರತಿಶತ ಆಗಿದೆ ಬರುವ ದಿನಗಳಲ್ಲಿ ಇನ್ನೂ ಹೆಚ್ಚಿಗೆ ಆಗಬೇಕಿದೆ ಎಂದು ಹೇಳಿದರು.

ಸಭೆಯಲ್ಲಿ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೆಶಕಿ ರೇಷ್ಮಾ ಹಾನಗಲ್, ಜಿಲ್ಲಾ ತರಬೇತಿ ಕೇಂದ್ರದ ಪ್ರಾಂಶುಪಾಲ ಕೃಷ್ಣಮೂರ್ತಿ ದೇಸಾಯಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೆಶಕ ಕೊಟ್ರೇಶ ಮರಬನಳ್ಳಿ, ಪದವಿಪೂರ್ವ ಶಿಕ್ಷಣ ಇಲಾಖೆಯಿಂದ ಉಪನಿರ್ದೆಶಕ ಜಗದೀಶ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೆಶಕ ನಾಗರಾಜ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Share this article