ಪ್ರಸ್ತುತವಾಗಿ ರಾಜ್ಯದಲ್ಲಿ ಅತ್ಯಂತ ಭೀಕರ ಬರಗಾಲ ಸೃಷ್ಟಿಯಾಗಿದೆ. ಸರ್ಕಾರ ಈಗಾಗಲೇ ಬರಗಾಲ ಎಂದು ಘೋಷಣೆ ಮಾಡಿ ಒಂದು ತಿಂಗಳು ಕಳೆದರೂ ಈವರೆಗೂ ಪರಿಹಾರ ಕಾರ್ಯವನ್ನು ಆರಂಭಿಸಿಲ್ಲ. ಶೀಘ್ರವಾಗಿ ಸಮೀಕ್ಷೆ ಕಾರ್ಯ ಕೈಗೊಂಡು ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕೆಂದು ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು.
ರೈತರಿಗೆ ಪರಿಹಾರ ಕಲ್ಪಿಸಲು ರಾಜ್ಯ ಸರ್ಕಾರ ಕೂಡಲೇ ಮುಂದಾಗಬೇಕು: ಮಾಲೀಕಯ್ಯ ಕನ್ನಡಪ್ರಭ ವಾರ್ತೆ ಅಫಜಲ್ಪುರ ಪ್ರಸ್ತುತವಾಗಿ ರಾಜ್ಯದಲ್ಲಿ ಅತ್ಯಂತ ಭೀಕರ ಬರಗಾಲ ಸೃಷ್ಟಿಯಾಗಿದೆ. ಸರ್ಕಾರ ಈಗಾಗಲೇ ಬರಗಾಲ ಎಂದು ಘೋಷಣೆ ಮಾಡಿ ಒಂದು ತಿಂಗಳು ಕಳೆದರೂ ಈವರೆಗೂ ಪರಿಹಾರ ಕಾರ್ಯವನ್ನು ಆರಂಭಿಸಿಲ್ಲ. ಶೀಘ್ರವಾಗಿ ಸಮೀಕ್ಷೆ ಕಾರ್ಯ ಕೈಗೊಂಡು ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕೆಂದು ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು. ಅವರು ಭಾರತೀಯ ಜನತಾ ಪಕ್ಷದ ಜನ ಸಂಪರ್ಕ ಯಾತ್ರೆ ನಿಮಿತ್ತ ಮಣ್ಣೂರ ಗ್ರಾಮದಲ್ಲಿ ನಡೆದ ಜನ ಸಂಪರ್ಕ ಸಭೆಯಲ್ಲಿ ಮಾತನಾಡಿ, ಮಳೆಯಿಲ್ಲದೇ ರೈತರ ಬೆಳೆಗಳು ಒಣಗುತ್ತಿವೆ. ಸರ್ಕಾರ ಕೇವಲ ಕಾಟಾಚಾರಕ್ಕೆ ಬರಗಾಲ ಪ್ರದೇಶ ಎಂದು ಘೋಷಣೆ ಮಾಡಿದರೆ ಸಾಲದು. ಅದಕ್ಕೆ ತಕ್ಕಂತೆ ರೈತರಿಗೆ ಸೂಕ್ತ ಪರಿಹಾರ ನೀಡುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು. ಕಳೆದ ಬಾರಿ ತಾಂತ್ರಿಕ ದೋಷದಿಂದ ನೆಟೆರೋಗಕ್ಕೆ ತುತ್ತಾದ ತಾಲೂಕಿನ ಕೆಲವೊಂದು ರೈತರಿಗೆ ತೊಗರಿ ಬೆಳೆಗೆ ಪರಿಹಾರ ಬಂದಿಲ್ಲ. ಆದಷ್ಟು ಬೇಗನೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ತಾಂತ್ರಿಕ ದೋಷ ಸರಿಪಡಿಸಿ ರೈತರಿಗೆ ತೊಗರಿ ನೆಟೆರೋಗದ ಪರಿಹಾರ ಒದಗಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ಕರಜಗಿಯಿಂದ ಮಣ್ಣೂರವರೆಗೆ ರಾಜ್ಯ ಹೆದ್ದಾರಿ ರಸ್ತೆ ಸಂಪೂರ್ಣ ಹಾಳಾಗಿ ಹೋಗಿದೆ. ರಸ್ತೆಯಲ್ಲಿ ಎಲ್ಲಿ ನೋಡಿದರೂ ತಗ್ಗು ದಿನ್ನೆಗಳು ಬಿದ್ದು ಸಂಚಾರಕ್ಕೆ ತುಂಬಾ ತೊಂದರೆಯಾಗುತ್ತಿದೆ. ಈ ನಿಟ್ಟಿನಲ್ಲಿ ನಾನು ಕೂಡ ಶಾಸಕ ಎಂ.ವೈ. ಪಾಟೀಲ ಅವರ ಜೊತೆಗೆ ಹಾಗೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳೊಂದಿಗೆ ಮಾತನಾಡಿ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಲು ಒತ್ತಾಯಿಸುತ್ತೇನೆ ಎಂದರು. ನೇರವಾಗಿ ರೈತರ ಜಮೀನುಗಳಿಗೆ ಭೇಟಿ ನೀಡಿ ಹಾನಿಯಾಗಿರುವ ಬೆಳೆಗಳ ಬಗ್ಗೆ ಸಂಪೂರ್ಣವಾದ ಒಂದು ವರದಿ ತಯಾರಿಸಿ ಬರುವ ಅಧಿವೇಶನದಲ್ಲಿ ಬಿಜೆಪಿ ಶಾಸಕರಿಂದ ನಾಯಕರಿಂದ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡುತ್ತೇನೆ. ಇಲ್ಲದಿದ್ದರೆ ಹೋರಾಟ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು. ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಸಮಸ್ಯೆ ದಿನನಿತ್ಯ ಹೆಚ್ಚಾಗುತ್ತಿದೆ. ವಿದ್ಯುತ್ ತಂತಿಗಳು ಎಲ್ಲೆಂದರಲ್ಲಿ ಜೋತು ಬಿದ್ದಿವೆ. ರೈತರ ಜಮೀನುಗಳ ಟೀಸಿಗಳು ಸುಟ್ಟರೂ ಸರಿಯಾದ ಸಮಯಕ್ಕೆ ದುರಸ್ತಿ ಕಾರ್ಯ ಮಾಡದೇ ಲೈನ್ಮನ್ಗಳು ರೈತರಿಂದ ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಜನರಿಗೆ ಕಾನೂನು ಅರಿವು ಜೊತೆಗೆ ಸಂಬಂಧಪಟ್ಟ ಅಧಿಕಾರಿಗಳ ಜೊತೆಗೆ ಚರ್ಚಿಸಿ ಪರಿಹಾರ ಕಲ್ಪಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಶೈಲೇಶ ಗುಣಾರಿ ಗುರುಬಾಳ ಜಕಾಪೂರ ಶಿವು ಘಾಣೂರ ಭೀಮಾಶಂಕರ ಕಲಶೆಟ್ಟಿ ಮಲ್ಲಿಕಾರ್ಜುನ ನಿಂಗದಳ್ಳಿ ವಿದ್ಯಾಧರ ಮಂಗಳೂರ ಶ್ರೀಶೈಲ ಬಳೂರ್ಗಿ ಸಿದ್ದು ಸಾಲಿಮನಿ ಮಹೇಶ ಅಜಗೊಂಡ ರವಿ ಪಾಟೀಲ ಸುಭಾಷ ನಾವದಗಿ ಶಿವಾನಂದ ದೇಸಾಯಿ ಮಲ್ಲಿಕಾರ್ಜುನ ಇಂಗಳೇಶ್ವರ ಶಿವಲಿಂಗಪ್ಪ ಅರಳಾ ಶಾಂತಪ್ಪ ಬಲ್ಲಾ ಭೀಮಾಶಂಕರ ಪೂಜಾರಿ ಸುಭಾಷ ಪ್ಯಾಟಿ ಅವದೂತ ಜಮಾದಾರ ನಂದೇಶ ಪ್ಯಾಟಿ ಸಂಜೀವಕುಮಾರ ನನ್ನಾಜಿ ರಾಜಕುಮಾರ ಬಂಡಗಾರ ಮಹಾಂತೇಶ ಜಕಾಪೂರ ಮಹಿಮೂದ ಡಾಂಗೆ ಯಲ್ಲಪ್ಪ ನಡುವಿನಕೇರಿ ಸೇರಿದಂತೆ ಇತರರಿದ್ದರು
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.